ಗರ್ಭಪಾತದ ಕಾಲಮಿತಿ ಏರಿಕೆ: ಕೇಂದ್ರ ಸಂಪುಟದ ಮಹತ್ವದ ತೀರ್ಮಾನ
ನವದೆಹಲಿ, ಜನವರಿ 29: ಗರ್ಭಪಾತಕ್ಕೆ ನೀಡಲಾಗಿದ್ದ ಗರಿಷ್ಠ ಅವಧಿಯ ಮಿತಿಯನ್ನು 20 ರಿಂದ 24 ವಾರಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.
ವೈದ್ಯಕೀಯ ಗರ್ಭಪಾತ ಕಾಯ್ದೆ, 1971ಕ್ಕೆ ತಿದ್ದುಪಡಿ ತರುವ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ, 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.
ಸರ್ಕಾರಿ ಆಸ್ಪತ್ರೆಯಲ್ಲಿ 'ಸುರಕ್ಷಿತ ಗರ್ಭಪಾತ ಸೇವೆ’?; ಗೊಂದಲ ತಂದ ಫಲಕ
ಗರ್ಭಪಾತಕ್ಕೆ 20 ವಾರಗಳ ಸಮಯ ಮಿತಿಯನ್ನು ನಿಗದಿಗೊಳಿಸಿರುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಕಳೆದ ಸಲ್ಲಿಸಲಾಗಿದ್ದ ಅರ್ಜಿಗೆ ಸೆಪ್ಟೆಂಬರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸರ್ಕಾರ, ಗರ್ಭದಲ್ಲಿರುವ ಭ್ರೂಣದ ಜೀವ ರಕ್ಷಣೆ ನಾಗರಿಕರ ಪೋಷಕನಾದ ತನ್ನ ಕರ್ತವ್ಯ ಎಂದು ಹೇಳಿತ್ತು. ಅರ್ಜಿದಾರರು ಗರ್ಭಪಾತದ ಗರಿಷ್ಠ ಮಿತಿಯನ್ನು 26 ವಾರಕ್ಕೆ ಏರಿಸಲು ಕೋರಿದ್ದರು.
ಮಹಿಳೆಯರ ಹಕ್ಕು
ಗರ್ಭಪಾತಕ್ಕೆ ಅವಕಾಶ ನೀಡುವ ಗರಿಷ್ಠ ಅವಧಿಯ ಮಿತಿಯನ್ನು ಹೆಚ್ಚಿಸುವುದು ಗರ್ಭದ ಸುರಕ್ಷಿತ ನಿರ್ಮೂಲನೆಯನ್ನು ಖಾತರಿಪಡಿಸಲಿದೆ ಮತ್ತು ಮಹಿಳೆಯರಿಗೆ ತಮ್ಮ ದೇಹದಲ್ಲಿ ಸಂತಾನೋತ್ಪತ್ತಿಯ ಹಕ್ಕನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ರಜೆ ತಪ್ಪಿಸಲು ಸಿಬ್ಬಂದಿಗೆ ಗರ್ಭಪಾತ ಮಾಡಿಸಿದ ಆಸ್ಪತ್ರೆ!
ಸಂತ್ರಸ್ತೆಯರಿಗೆ ನೆರವು
ಈ ತಿದ್ದುಪಡಿ ಮಸೂದೆಯು ದೀರ್ಘಕಾಲದವರೆಗೂ ತಾವು ಗರ್ಭ ಧರಿಸಿರುವುದು ಅರಿಯದೆ ಬಳಿಕ ಅನಿವಾರ್ಯವಾಗಿ ಮಗುವಿಗೆ ಜನ್ಮನೀಡುವ ಸ್ಥಿತಿಗೆ ಒಳಗಾಗುವ ಅತ್ಯಾಚಾರ ಸಂತ್ರಸ್ತೆಯರು, ಅಂಕವೈಕಲ್ಯವುಳ್ಳ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಈ ಮಿತಿ ವಿಸ್ತರಣೆ ನೆರವಾಗಲಿದೆ ಎಂದು ಜಾವಡೇಕರ್ ಹೇಳಿದರು.
ಇದು ಪ್ರಗತಿಪರ ಸುಧಾರಣೆ
'ಪ್ರಗತಿಪರ ಸುಧಾರಣೆಯೊಂದರಲ್ಲಿ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿಯ ಹಕ್ಕನ್ನು ನೀಡಲು ವೈದ್ಯಕೀಯ ಗರ್ಭಪಾತದ ಗರಿಷ್ಠ ಸಮಯದ ಮಿತಿಯನ್ನು 20 ರಿಂದ 24ಕ್ಕೆ ಹೆಚ್ಚಿಸಲಾಗಿದೆ. ಇದು ಬಹಳ ಮಹತ್ವದ್ದು. ಏಕೆಂದರೆ ಮೊದಲ ಐದು ತಿಂಗಳಲ್ಲಿ ಮಹಿಳೆಗೆ ತಾನು ಗರ್ಭಧಾರಣೆಗೆ ಒಳಗಾಗಿದ್ದೇನೆಯೇ ಅಥವಾ ಇಲ್ಲವೇ ಎಂಬುದೇ ತಿಳಿದಿಲ್ಲದ ಅನೇಕ ನಿದರ್ಶನಗಳಿವೆ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಈ ಬಗ್ಗೆ ಹಲವು ಚರ್ಚೆಗಳಾಗಿವೆ. ಈ ಮಸೂದೆಯಿಂದ ತಾಯ್ತನದ ಮರಣ ಪ್ರಮಾಣ ಕಡಿಮೆಯಾಗಲಿದೆ' ಎಂದು ಜಾವಡೇಕರ್ ಅಭಿಪ್ರಾಯಪಟ್ಟರು.
21 ವಾರಗಳ ಭ್ರೂಣವನ್ನು ತೆಗೆಯಲು ಹೈಕೋರ್ಟ್ ಸಮ್ಮತಿ, ಪ್ರಕರಣ ಏನು?
ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ
ಗರ್ಭಧಾರಣೆಯ 20ನೇ ವಾರದ ಬಳಿಕ ಗರ್ಭಿಣಿಯರಲ್ಲಿ ಗಂಭೀರ ಅಸಹಜ ಸಮಸ್ಯೆಗಳು ಕಂಡುಬಂದ ಅನೇಕ ಪ್ರಕರಣಗಳು ವರದಿಯಾಗಿರುವುದನ್ನು ಅಧ್ಯಯನಗಳು ತಿಳಿಸಿವೆ. ಗರ್ಭಾವಸ್ಥೆಯನ್ನು ಮುಂದವರಿಸಲು ಬಯಸುವ ಗರ್ಭಿಣಿಯರು ಗರ್ಭಪಾತವನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರಿಗೆ ಹೋಲಿಸಿದರೆ ಮಾನಸಿಕ ಉದ್ವೇಗ, ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಅವರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚುವ ಅಪಾಯವಿದೆ ಎಂದು ಸರ್ಕಾರ ಹೇಳಿದೆ.