ಭಾರತದ ಸಂವಿಧಾನಕ್ಕೆ ದಾಳಿ ಇಟ್ಟಿತಾ ಕೇಂದ್ರ ಸರ್ಕಾರದ ತಿದ್ದುಪಡಿ?
ದೆಹಲಿ, ಡಿಸೆಂಬರ್.10: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತದ ಸಂವಿಧಾನದ ಮೇಲೆ ಬಿಜೆಪಿ ಸರ್ಕಾರ ದಾಳಿ ನಡೆಸಲು ಹೊರಟಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆ ಮೂಲದ ದೇಶದ ಬುನಾದಿಯನ್ನೇ ನಾಶಪಡಿಸಲು ಹೊರಟಿದೆ ಎಂದು ಕಿಡಿ ಕಾರಿದ್ದಾರೆ.
ಭಾರತದ ಮುಸ್ಲಿಮರು ಭಯಪಡಬೇಕಿಲ್ಲ: ಅಮಿತ್ ಶಾ ಭರವಸೆ
ಪೌರತ್ವ ತಿದ್ದಪಡಿ ಮಸೂದೆ ಎಂಬುದು ಭಾರತ ದೇಶದ ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅಲ್ಲದೇ, ದೇಶಕ್ಕೆ ಹಿರಿಯರು ಹಾಕಿಕೊಟ್ಟ ಭದ್ರಬುನಾದಿಯನ್ನೇ ನಾಶಪಡಿಸುವಂತಿದೆ. ಇಂಥ ನಿರ್ಧಾರಕ್ಕೆ ಭಾರತೀಯರು ಒಪ್ಪಿಗೆ ನೀಡುತ್ತಾರೆಯೇ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಜೆಗಳು ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಡಿಸೆಂಬರ್.09ರಂದು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ. ಲೋಕಸಭೆಯ 391 ಸದಸ್ಯರ ಪೈಕಿ ಪೌರತ್ವ ತಿದ್ದುಪಡಿ ಪರವಾಗಿ 311 ಮಂದಿ ಮತ ಚಲಾಯಿಸಿದರೆ, 80 ಸದಸ್ಯರು ಈ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.
ಡಿಸೆಂಬರ್.11ರ ಬುಧವಾರ ಇದೇ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ, ಕಾಂಗ್ರೆಸ್, ಶಿವಸೇನಾ, ಸಮಾಜವಾದಿ ಪಕ್ಷ, ಟಿಎಂಸಿ, ಎನ್ಸಿಪಿ ಮುಂತಾದ ವಿರೋಧಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆ ಎಐಎಡಿಎಂಕೆ ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದೆ.