'ಯೋಗ ಗುರು ವೇಷ ಧರಿಸಿದ ಉದ್ಯಮಿ': ರಾಮ್ ದೇವ್ ಅರ್ಜಿ ವಿರುದ್ದ ಡಿಎಂಎ
ನವದೆಹಲಿ, ಜು.04: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳ ಬಳಕೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದ ತನ್ನ ವಿರುದ್ದವಾಗಿ ದಾಖಲಾಗಿರುವ ಎಫ್ಐಆರ್ ಕೈಬಿಡುವಂತೆ ಸುಪ್ರೀಂ ಕೋರ್ಟ್ಗೆ ಯೋಗ ಗುರು ಬಾಬಾ ರಾಮ್ ದೇವ್ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ದೆಹಲಿ ಮೆಡಿಕಲ್ ಅಸೋಸಿಯೇಷನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
''ರಾಮದೇವ್ ಯೋಗ ಗುರು ವೇಷ ಧರಿಸಿದ ಉದ್ಯಮಿ'' ಎಂದು ವಾಗ್ದಾಳಿ ನಡೆಸಿರುವ ದೆಹಲಿ ಮೆಡಿಕಲ್ ಅಸೋಸಿಯೇಷನ್, ಬಾಬಾ ರಾಮ್ ದೇವ್ಗೆ ಆಯುರ್ವೇದವನ್ನು ಅಭ್ಯಾಸ ಮಾಡಲು ಮತ್ತು ಔಷಧಿಗಳನ್ನು ಸೂಚಿಸಲು ಯಾವುದೇ ಪದವಿ ಅಥವಾ ಪರವಾನಗಿ ಇಲ್ಲ ಎಂದು ಹೇಳಿದೆ.
ಅಲೋಪತಿ ಬಗ್ಗೆ ಹೇಳಿಕೆ: ಪ್ರಕರಣ ರದ್ದತಿಗೆ ಕೋರಿ ರಾಮ್ದೇವ್ ಸುಪ್ರೀಂಗೆ ಮೊರೆ
''ರಾಮ್ದೇವ್ ಅಲೋಪತಿ ವಿರುದ್ದವಾಗಿ ಹೇಳಿಕೆ ನೀಡುವ ಮೂಲಕ ಹಾಗೂ ಲಸಿಕೆಗಳ ವಿರುದ್ದವಾಗಿ ಹೇಳಿಕೆ ನೀಡಿ ವೈದ್ಯಕೀಯ ಸಮೂಹವನ್ನು ಅವಮಾನಿಸಿರುವುದು ಮಾತ್ರವಲ್ಲದೇ, ಲಸಿಕೆಗಳು ಮತ್ತು ಚಿಕಿತ್ಸೆಯ ಮಾರ್ಗಸೂಚಿಯನ್ನು ಕಡೆಗಣಿಸಲು ಜನರಿಗೆ ಪ್ರಚೋದನೆ ನೀಡಿದ್ದಾರೆ,'' ಎಂದು ಡಿಎಂಎ ಆರೋಪಿಸಿದೆ.
ಜೂನ್ 30 ರಂದು, ಮುಖ್ಯ ನ್ಯಾಯಮೂರ್ತಿ ಎನ್ ವಿ ರಾಮನ್ ನೇತೃತ್ವದ ಪೀಠವು ರಾಮ್ದೇವ್ ಅಲೋಪಥಿಕ್ ಔಷಧೀಯ ವಿರುದ್ದ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿರುವ ಮೂಲ ವಿಡಿಯೋವನ್ನು ದಾಖಲೆಯಾಗಿ ಸುಪ್ರೀಂ ಕೋರ್ಟ್ಗೆ ನೀಡಲು ತಿಳಿಸಿದೆ.
ಇನ್ನು ''ವೈದ್ಯಕೀಯ ಕ್ಷೇತ್ರದಲ್ಲಿ ಅನುಮೋದನೆ ದೊರೆಯದ ಕೊರೋನಿಲ್ ಕಿಟ್ಗಳನ್ನು ಮಾರಾಟ ಮಾಡುವ ಮೂಲಕ ಪತಂಜಲಿ 1,000 ಕೋಟಿ ರೂಪಾಯಿಯನ್ನು ಸಂಪಾದಿಸಿದೆ,'' ಎಂದು ದೂರಿದೆ.
ಬಾಬಾ ರಾಮದೇವ್ ವಿರುದ್ದ ಜೂನ್ 1 ರಂದು 'ಕಪ್ಪು ದಿನ'ಕ್ಕೆ ಕರೆ ನೀಡಿದ ವೈದ್ಯರ ಸಂಘ
"ದೇಶದ ಸಂಪೂರ್ಣ ವೈದ್ಯಕೀಯ ಸೋದರತ್ವವು ಮಾರಣಾಂತಿಕ ಸಾಂಕ್ರಾಮಿಕತೆಯನ್ನು ಏಕತೆಯಲ್ಲಿ ಹೋರಾಡುತ್ತಿದ್ದರೂ, ಕೊವಿಡ್ ಲಸಿಕೆಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವಾಗ ರಾಮ್ದೇವ್ ಲಸಿಕೆಗಳು ಮತ್ತು ಚಿಕಿತ್ಸೆ ಮಾರ್ಗಸೂಚಿ ವಿರುದ್ದ ಸುಳ್ಳು ಪ್ರಚಾರವನ್ನು ಪ್ರಾರಂಭಿಸಿದರು. ಇದರ ಹಿಂದೆ ಕೊರೋನಿಲ್ ಕಿಟ್ಗಳನ್ನು ಮಾರಾಟ ಮಾಡುವ ಉದ್ದೇಶ ಅಡಗಿದೆ ಎಂದು ವಕೀಲ ಆಶಿಶ್ ಕೊಥಾರಿ ಮೂಲಕ ಸಲ್ಲಿಸಿದ ಡಿಎಂಎ ಮನವಿ ಹೇಳಿದೆ.
ಅಲೋಪತಿಯನ್ನು 'ಮೂರ್ಖತನದ ವಿಜ್ಞಾನ' ಎಂದು ರಾಮ್ದೇವ್ ಟೀಕಿಸಿದ್ದರು. ಹಾಗೆಯೇ "ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದ ಕಾರಣ ಮರಣ ಹೊಂದಿದವರಿಗಿಂತ ಹೆಚ್ಚು ಅಲೋಪತಿ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ," ಎಂದು ಬಾಬಾರಾಮ್ ದೇವ್ ಹೇಳಿದ್ದರು.
ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದ ರಾಮ್ದೇವ್ ಹೇಳಿಕೆಯನ್ನು ಖಂಡಿಸಿ ವೈದ್ಯರ ಸಂಘ ಕಾನೂನು ಮೊರೆ ಹೋಗಿತ್ತು. ರಾಮ್ದೇವ್ಗೆ ಲೀಗಲ್ ನೋಟಿಸ್ ಕಳುಹಿಸಿತ್ತು. ಹಾಗೆಯೇ ಉತ್ತರ ಪ್ರದೇಶದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬಾಬಾ ರಾಮ್ದೇವ್ ವಿರುದ್ಧ 1000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿತ್ತು. ಹಾಗೆಯೇ ರಾಮ್ದೇವ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಗೂ ವೈದ್ಯರ ಸಂಘ ಪತ್ರ ಬರೆದಿತ್ತು.
ಲಸಿಕೆ ಪಡೆಯುತ್ತೇನೆ, ವೈದ್ಯರು ದೇವರ ದೂತರು: ಬಾಬಾ ರಾಮ್ದೇವ್ ಯೂಟರ್ನ್
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಮ್ದೇವ್ ಹೇಳಿಕೆ ಹಿಂಪಡೆದು 25 ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಆ ಬಳಿಕ, ''ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲಾಗದು," ಎಂದು ಹೇಳಿದ್ದರು.
''ನನಗೆ ಕೊರೊನಾ ಲಸಿಕೆಯ ಅಗತ್ಯವಿಲ್ಲ, ಯೋಗ ಹಾಗೂ ಆಯುರ್ವೇದದ ರಕ್ಷಣೆ ನನಗಿದೆ,'' ಎಂದು ಕೂಡಾ ರಾಮ್ದೇವ್ ಹೇಳಿಕೊಂಡಿದ್ದರು. ಆದರೆ ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಯೂಟರ್ನ್ ಹೊಡೆದ ರಾಮ್ದೇವ್, "ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯಿರಿ ಜೊತೆಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಕೂಡ ಪಡೆಯಿರಿ. ಈ ಮೂಲಕ ಕೊರೊನಾದಿಂದ ಒಬ್ಬ ವ್ಯಕ್ತಿ ಕೂಡ ಸಾಯುವುದಿಲ್ಲ. ಇವುಗಳು ನಿಮಗೆ ಆ ಪ್ರಮಾಣದ ರಕ್ಷಣೆಯನ್ನು ನೀಡುತ್ತದೆ," ಎಂದು ಮಾಧ್ಯಮಕ್ಕೆ ಹೇಳಿದ್ದಾರೆ. ಹಾಗೆಯೇ ತನ್ನ ವಿರುದ್ದ ದಾಖಲಾಗಿರುವ ಪ್ರಕರಣ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
(ಒನ್ಇಂಡಿಯಾ ಸುದ್ದಿ)