ಬುರಾರಿ ಪ್ರಕರಣ: ಆತ್ಮಹತ್ಯೆಯಲ್ಲ ಕೊಲೆ ಎಂದ ಸಂಬಂಧಿಕರು
ನವದೆಹಲಿ, ಜುಲೈ 03: ದೆಹಲಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರ ಸಂಬಂಧಿಗಳು, 'ಇದು ಆತ್ಮಹತ್ಯೆಯಲ್ಲ, ಕೊಲೆ' ಎಂದಿದ್ದಾರೆ.
ಬುರಾರಿ ಪ್ರಕರಣದಲ್ಲಿ ಮೃತರಾದವರ ಸಹೋದರ ಸಂಬಂಧಿ ಸುಜಾತಾ ಅವರು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 'ನನ್ನ ಕುಟುಂಬಸ್ಥರು ಮೂಢನಂಬಿಕೆಯಿಂದಾಗಿ ಈ ರೀತಿ ಮಾಡಿದ್ದಾರೆ, ಅವರು ಅಂಧಾಚರಣೆ ಮಾಡುತ್ತಿದ್ದರು ಎಂದೆಲ್ಲ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಇವೆಲ್ಲವೂ ಸುಳ್ಳು. ಅವರಲ್ಲಿ ದೈವಭಕ್ತಿ ಇತ್ತೇ ಹೊರತು, ಮೌಢ್ಯವಿರಲಿಲ್ಲ. ಅವರು ಹನುಮಾನ್ ಛಾಲಿಸಾ ಬಿಟ್ಟರೆ ಬೇರೇನನ್ನೂ ಓದುತ್ತಿರಲಿಲ್ಲ. ನಮಗೆ ಯಾವುದೇ ಶತ್ರುಗಳಿರಲಿಲ್ಲ. ಆದರೆ ಈ ಪ್ರಕರಣ ಏಕೆ ನಡೆಯಿತು ಎಂದು ಅಚ್ಚರಿಯಾಗಿದೆ' ಎಂದು ಅವರು ರೋದಿಸಿದ್ದಾರೆ.
ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!
ನಮ್ಮ ಕುಟುಂಬದಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಇಲ್ಲಿ ಏನೋ ನಡೆದಿದೆ ಎನ್ನಿಸುತ್ತಿದೆ. ದಯವಿಟ್ಟು ಸತ್ಯ ಹುಡುಕಿಕೊಡಿ. ಈ ಘಟನೆಯ ಹಿಂದೆ ಬೇರೆ ಯಾರದೋ ಕೈವಾಡವಿದೆ ಎನ್ನಿಸುತ್ತಿದೆ ಎಂದು ಸುಜಾತಾ ಭಾವುಕರಾಗಿ ಹೇಳಿದ್ದಾರೆ.
ನಮ್ಮ ಕುಟುಂಬದಲ್ಲಿ ಎಲ್ಲರೂ ಸುಶಿಕ್ಷಿತರು. ಯಾರೂ ಮೂಡನಂಬಿಕೆಯನ್ನು ಪಾಲಿಸುತ್ತಿರಲಿಲ್ಲ. ಹಣದ ಸಮಸ್ಯೆಯೂ ಇರಲಿಲ್ಲ. ಕುಟುಂಬದ ವ್ಯವಹಾರವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದ್ದರಿಂದ ಇದನ್ನು ಆತ್ಮಹತ್ಯೆ ಎನ್ನುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಕೆಲವೇ ದಿನಗಳಲ್ಲಿ ನಮ್ಮ ಮನೆಯಲ್ಲಿ ಮದುವೆ ನಡೆಯುವುದಿತ್ತು. ಆದರೆ ಅಷ್ಟರಲ್ಲೇ ಏನೇನೋ ನಡೆದಿದೆ ಎಂದು ಅವರು ತಮ್ಮ ಅಳಲು ತೋಡಿಕೊಂದಿದ್ದಾರೆ.
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.