ಸರ್ಕಾರ ಬಿಜೆಪಿಯದು, ರಾಜ್ಯಗಳ ಮೇಲೆ ಗೂಬೆಕೂರಿಸುವುದೇಕೆ?: ಚಿದಂಬರಂ
ನವದೆಹಲಿ, ಜನವರಿ 11: "ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಇಂಧನ ದರವನ್ನು ಕಡಿಮೆ ಮಾಡಲು ರಾಜ್ಯಗಳಿಂದಾಗಿ ತಡೆಯಾಗುತ್ತಿದೆ ಎನ್ನುತ್ತಿರುವುದೇಕೆ?" ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
ತೈಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪೆಟ್ರೋಲ್ -ಡೀಸೆಲ್ ಅನ್ನು ಜಿಎಸ್ಟಿ ಅಡಿಯಲ್ಲಿ ತಂದರೆ ದರ ಇಳಿಕೆಯಾಗುತ್ತದೆ. ಆದರೆ ಬಿಜೆಪಿ ಅದನ್ನು ಮಾಡಲು ಮೀನಮೇಷ ಎಣಿಸುತ್ತಿದೆ ಎಂದರು.
ಇಂಧನ ಬೆಲೆಯನ್ನು ಜಿಎಸ್ಟಿ ಅಡಿಯಲ್ಲಿ ತರುವುದಕ್ಕೆ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ, ಆದರೆ ಕೇಂದ್ರದಲ್ಲಿರುವುದೂ ಬಿಜೆಪಿ ಸರ್ಕಾರ ಮತ್ತು ರಾಷ್ಟ್ರದ ಹಲವು ರಾಜ್ಯಗಳಲ್ಲಿರುವುದೂ ಬಿಜೆಪಿ ಸರ್ಕಾರ. ಹೀಗಿರುವಾಗ ತೈಲ ಬೆಲೆಯನ್ನು ಇಳಿಸುವ ಸಲುವಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಈ ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಮೋದಿ ಸರಕಾರದಲ್ಲಿ ತೈಲ ಬೆಲೆ ಮಾತ್ರ ಐತಿಹಾಸಿಕ: ಮಾಯಾವತಿ ವ್ಯಂಗ್ಯ
ಹಣದುಬ್ಬರ ಹೆಚ್ಚುತ್ತಿರುವ ಕುರಿತೂ ಕಳವಳ ವ್ಯಕ್ತಪಡಿಸಿದ ಅವರು, ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ದೂರಿದರು.