Breaking news: ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಸಕ್ಸೇನಾ ನೇಮಕ
ನವದೆಹಲಿ, ಮೇ 23: ದೆಹಲಿಗೆ ಹೊಸ ಲೆಫ್ಟಿನೆಂಟ್ ಗವರ್ನರ್ ನೇಮಕವಾಗಿದೆ. ವಿನಯ್ ಕುಮಾರ್ ಸಕ್ಸೇನಾ ಅವರನ್ನು ಸೋಮವಾರದಂದು ದೆಹಲಿಯ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ದೆಹಲಿ ರಾಜ್ಯಪಾಲರಾಗಿದ್ದ ಅನಿಲ್ ಬೈಜಾಲ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ತೊರೆದಿದ್ದರು. ಡಿಸೆಂಬರ್ 31, 2016 ರಂದು ನಜೀಬ್ ಜಂಗ್ ಹಠಾತ್ ರಾಜೀನಾಮೆ ನಂತರ ಅಧಿಕಾರ ವಹಿಸಿಕೊಂಡ ಅನಿಲ್ ಬೈಜಲ್ ಐದು ವರ್ಷ ನಾಲ್ಕು ತಿಂಗಳಿಗೂ ಹೆಚ್ಚು ಸುದೀರ್ಘ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಅನಿಲ್ ಬೈಜಲ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಹೊಸ ಹೊಸ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿ ರಾಷ್ಟ್ರಪತಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
"ವಿನಯ್ ಕುಮಾರ್ ಸಕ್ಸೇನಾ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುತ್ತಾರೆ" ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
ಅಧಿಕಾರ ಹಂಚಿಕೆಯ ಕಿತ್ತಾಟ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾದ ಲೆಫ್ಟಿನೆಂಟ್ ಗವರ್ನರ್ ನಡುವಿನ ಜಗಳವು ಇತ್ತೀಚಿನದ್ದಲ್ಲ. ಇದು ಚುನಾಯಿತ ಸರ್ಕಾರ ಮತ್ತು ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಂಚಿಕೆಯ ಮೇಲೆ ಕೇಂದ್ರೀಕೃತವಾಗಿದ್ದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಮಾರ್ಚ್ 23, 1958 ರಂದು ಜನಿಸಿದ ಸಕ್ಸೇನಾ ಪ್ರಸ್ತುತ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾರೆ. ಕಾನ್ಪುರ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಪೈಲಟ್ ಪರವಾನಗಿಯನ್ನು ಸಕ್ಸೇನಾ ಹೊಂದಿದ್ದಾರೆ. ಸಕ್ಸೇನಾ ಅವರನ್ನು ಮಾರ್ಚ್ 5, 2021 ರಂದು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ರಾಷ್ಟ್ರೀಯ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿ ನೇಮಿಸಲಾಯಿತು. MSME ಸಚಿವಾಲಯದ ಅಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆಯಾದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವನ್ನು ಮುನ್ನಡೆಸುತ್ತಿದ್ದಾರೆ.