ಬಾಲಿವುಡ್ ಬಗ್ಗೆ ಅವಹೇಳನ: ರಿಪಬ್ಲಿಕ್, ಟೈಮ್ಸ್ ನೌ ವಿರುದ್ಧ ಮೊಕದ್ದಮೆ
ನವದೆಹಲಿ, ಅಕ್ಟೋಬರ್.12: ಡ್ರಗ್ಸ್ ಮಾಫಿಯಾ ಪ್ರಕರಣದ ಬಗ್ಗೆ ವರದಿ ಪ್ರಸಾರದ ಭರಾಟೆಯಲ್ಲಿ ಬಾಲಿವುಡ್ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ ಎಂದು ಚಿತ್ರರಂಗವು ಆರೋಪಿಸಿದೆ. ರಿಪಬ್ಲಿಕ್ ಮತ್ತು ಟೈಮ್ಸ್ ನೌ ಸೇರಿದಂತೆ ಹಲವು ಸುದ್ದಿವಾಹಿನಿಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ರಿಪಬ್ಲಿಕ್ ಸುದ್ದಿ ವಾಹಿನಿ ಅರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ಟೈಮ್ಸ್ ನೌ ಸುದ್ದಿ ವಾಹಿನಿಯ ರಾಹುಲ್ ಶಿವಶಂಕರ್ ಮತ್ತು ನವಿಕಾ ಕುಮಾರ್ ಅವರು ಬಾಲಿವುಡ್ ಗೆ ಸಂಬಂಧಿಸಿದ ವ್ಯಕ್ತಿಗಳ ವೈಯಕ್ತಿಯ ಮತ್ತು ಗೌಪ್ಯತೆ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಕಲಿ ಟಿಆರ್ಪಿ: ರಿಪಬ್ಲಿಕ್ ಟಿವಿ ಸಿಎಫ್ಒಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ
ಬಾಲಿವುಡ್ 38 ನಿರ್ಮಾಪಕರು ಸುದ್ದಿ ವಾಹಿನಗಳ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆ ಚಲನಚಿತ್ರೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವರನ್ನು ಡ್ರಗ್ ಕಾರ್ಟೆಲ್ ಎಂದು ಕರೆದಿರುವುದಕ್ಕೆ ವಿನಾಯಿತಿ ಕೊಡಲಾಗುತ್ತದೆ. ಆದರೆ ಅತಿಯಾಗಿ ಅವಹೇಳನ ಮಾಡುವುದು ಸೂಕ್ತವಲ್ಲ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
ಕೆಟ್ಟ ಪದಗಳಿಂದ ಬಾಲಿವುಡ್ ಬಗ್ಗೆ ಅವಹೇಳನ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆ ಚಲನಚಿತ್ರೋದ್ಯಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗುತ್ತಿದೆ. ಬಾಲಿವುಡ್ ಬಗ್ಗೆ "ಕೊಳಕು", "ಹೊಲಸು", "ಕಲ್ಮಷ", ಮತ್ತು "ಇದು ಬಾಲಿವುಡ್ನಲ್ಲಿ ಕೊಳೆಯನ್ನು ಸ್ವಚ್ಛಗೊಳಿಸಬೇಕಾಗಿದೆ", "ಅರೇಬಿಯಾದ ಎಲ್ಲಾ ಸುಗಂಧ ದ್ರವ್ಯಗಳು ದುರ್ವಾಸನೆ ಮತ್ತು ಗಬ್ಬು ತೆಗೆಯಲು ಸಾಧ್ಯವಿಲ್ಲ ", " ಇದು ದೇಶದ ಅತ್ಯಂತ ಕೊಳಕು ಉದ್ಯಮ ", ಹಾಗೂ "ಕೊಕೇನ್ ಮತ್ತು ಎಲ್ಎಸ್ಡಿ ಯಲ್ಲೇ ಮಿಂದೆದ್ದಿದೆ" ಎನ್ನುವ ಪದಗಳ ಬಳಕೆ ಸೂಕ್ತವಲ್ಲ ಎಂದು ನಿರ್ಮಾಪಕರು ಮೊಕದ್ದಮೆಯಲ್ಲಿ ಆಕ್ಷೇಪಿಸಿದ್ದಾರೆ.
ದಿನಗೂಲಿಗೆ ದುಡಿಯುವ ಕಾರ್ಮಿಕರಿಗೆ ಆದಾಯವಿಲ್ಲ
ಬಾಲಿವುಡ್ ವಿರುದ್ಧ ನಡೆಸುತ್ತಿರುವ ಸ್ಮಿಯರ್ ಅಭಿಯಾನದಿಂದ ಚಿತ್ರರಂಗದಲ್ಲಿ ದಿನಗೂಲಿಗೆ ದುಡಿಯುತ್ತಿರುವ ಕಾರ್ಮಿಕರ ಬದುಕಿಗೆ ಭಾರಿ ಹೊಡೆತ ಬಿದ್ದಿದೆ. ಸಾಂಕ್ರಾಮಿಕ ಪಿಡುಗಿನಿಂದ ಉದ್ಯೋಗ ಮತ್ತು ಆದಾಯವಿಲ್ಲದೇ ಆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸ್ಥಿತಿಯಲ್ಲಿ ಈ ಅಭಿಯಾನದಿಂದ ಉದ್ಯೋಗದ ಅವಕಾಶವನ್ನೂ ಕಳೆದುಕೊಳ್ಳುವಂತಾ ಸ್ಥಿತಿ ನಿರ್ಮಾಣವಾಗುತ್ತಿದೆ. ಬಾಲಿವುಡ್ ಸದಸ್ಯರ ಗೌಪ್ಯತೆ ಮತ್ತು ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಮಾದಕವಸ್ತು ಪ್ರಕರಣದಲ್ಲಿ ಇಡೀ ಬಾಲಿವುಡ್ ನಲ್ಲಿರುವವರೆಲ್ಲ ಅಪರಾಧಿಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ. ಅಲ್ಲದೇ, ಸಾರ್ವಜನಿಕ ಕಲ್ಪನೆಯಲ್ಲಿ ಅಪರಾಧ ಕೃತ್ಯಗಳಿಗೆ ಇನ್ನೊಂದು ಹೆಸರೇ ಬಾಲಿವುಡ್ ಎನ್ನುವಂತೆ ಚಿತ್ರಿಸುತ್ತಿರುವುದು ಇಡೀ ಚಿತ್ರರಂಗಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡುತ್ತಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
"ಈ ಹಿಂದೆಯೂ ತಪ್ಪು ಸುದ್ದಿಗಳ ಪ್ರಸಾರ ಮಾಡಿವೆ"
ಎರಡೂ ಸುದ್ದಿ ವಾಹಿನಿಗಳ ವರದಿಗಾರರು ಈ ಹಿಂದೆ ಕೂಡಾ ಸಾಕಷ್ಟು ಬಾರಿ ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಿದ ಉದಾಹರಣೆಗಳಿವೆ. ಬೇಜವಾಬ್ದಾರಿ ಮತ್ತು ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಈ ಹಿಂದೆ ಕೋರ್ಟ್ ನಿಂದ ದಂಡ ಮತ್ತು ಎಚ್ಚರಿಕೆ ಸೂಚನೆಯನ್ನೂ ನೀಡಲಾಗಿತ್ತು. ಇದೇ ಸುದ್ದಿ ವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವುದು ಕೋರ್ಟ್ ಗಳಲ್ಲಿ ಸಾಬೀತಾಗಿತ್ತು ಎಂಬ ಅಂಶಗಳನ್ನು ನಿರ್ಮಾಪಕರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುದ್ದಿ ವಾಹಿನಿಗಳು ಖಾಸಗಿ ತನಿಖೆ ನಡೆಸುತ್ತಿರುವ ಬಗ್ಗೆ ಉಲ್ಲೇಖ
ಈ ಪ್ರತಿವಾದಿ(ಸುದ್ದಿ ವಾಹಿನಿ)ಗಳು ಪ್ರತ್ಯೇಕ ಮತ್ತು ಖಾಸಗಿಯಾಗಿ ತನಿಖೆ ನಡೆಸುತ್ತವೆ. ಈ ತನಿಖೆಯಿಂದ ತಿಳಿದು ಬಂದಿರುವ ಮಾಹಿತಿಯನ್ನೇ ಪ್ರಸಾರ ಮಾಡುತ್ತಿವೆ. ತಮ್ಮನ್ನು ತಾವು ನ್ಯಾಯಾಲಯ ಎಂದುಕೊಂಡಿರುವ ಅವರು, ಬಾಲಿವುಡ್ ಜೊತೆಗೆ ನಂಟು ಹೊಂದಿರುವ ವ್ಯಕ್ತಿಗಳನ್ನು ಸುದ್ದಿ ಮೂಲಗಳಾಗಿ ಇಟ್ಟುಕೊಂಡಿದ್ದಾರೆ. ಅಂಥ ವ್ಯಕ್ತಿಗಳು ನೀಡುವ ಮಾಹಿತಿ ಆಧರಿಸಿ, ಆರೋಪಿಗಳೆಂದು ಗುರುತಿಸಲಾದ ವ್ಯಕ್ತಿಗಳ ಮೇಲೆ ವೈಯಕ್ತಿಕ ದಾಳಿಗೆ ಇಳಿಯುತ್ತಾರೆ. ಅವರೇ ನ್ಯಾಯ ತೀರ್ಮಾನವನ್ನೂ ಮಾಡಿ ಬಿಟ್ಟರು ಎನ್ನುವಂತೆ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ದೂರಿದಲ್ಲಿ ಆರೋಪಿಸಲಾಗಿದೆ.