ಇಸ್ರೇಲ್ ರಾಜತಾಂತ್ರಿಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ
ನವದೆಹಲಿ, ಫೆಬ್ರವರಿ.02: ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿದ ಮರುದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಚರ್ಚೆ ನಡೆಸಿದರು. ಇಸ್ರೇಲ್ ರಾಜತಾಂತ್ರಿಕರಿಗೆ ಭದ್ರತೆ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
"ನಮ್ಮ ಪ್ರಜೆಗಳನ್ನು ರಕ್ಷಿಸುವುದರಲ್ಲಿ ನಾವು ಬದ್ಧರಾಗಿದ್ದೇವೆ. ಭಯೋತ್ಪಾದನೆ ವಿರುದ್ಧ ಇಸ್ರೇಲ್ ಜೊತೆಗೆ ಭಾರತದ ಸಹಕಾರ ಹೀಗೆ ಮುಂದುವರಿಯಲಿದೆ" ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ
ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸಂಭವಿಸಿದ ಸ್ಫೋಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡಾ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸುವುದಾಗಿ ಫೋನ್ ಸಂಭಾಷಣೆಯಲ್ಲಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಇಸ್ರೇಲ್ ರಾಜತಾಂತ್ರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಸಚಿವಾಲಯವು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್:
"ನನ್ನ ಸ್ನೇಹಿತ ಪ್ರಧಾನಮಂತ್ರಿ ನೆತನ್ಯಾಹು ಅವರೊಂದಿಗೆ ಮಾತನಾಡಲಾಗಿದೆ. ನವದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಬಳಿ ನಡೆದ ದಾಳಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಮತ್ತು ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಲಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟದ ಹಿನ್ನೆಲೆ:
ನವದೆಹಲಿಯಲ್ಲಿ ಶುಕ್ರವಾರ ಸಂಜೆ 5.05 ಗಂಟೆ ಸುಮಾರಿಗೆ ಡಾ.ಎಪಿಜೆ ಅಬ್ದುಲ್ ಕಲಾಮ್ ರಸ್ತೆಯ ಜಿಂದಾಲ್ ಹೌಸ್ ಬಳಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ಸಂಭವಿಸಿತ್ತು. ರಸ್ತೆ ವಿಭಜಕದಲ್ಲಿನ ಹೂವಿನ ಕುಂಡದಲ್ಲಿ ಬಾಂಬ್ ಇರಿಸಲಾಗಿದ್ದು, ಆ ಸ್ಥಳದಲ್ಲಿ ಲಕೋಟೆಯೊಂದು ಪತ್ತೆಯಾಗಿತ್ತು. ಅದರ ಮೇಲ್ಭಾಗದಲ್ಲಿ 'ಇಸ್ರೇಲ್ ರಾಜತಾಂತ್ರಿಕ ರಾಯಭಾರಿಗೆ' ಎಂದು ಬರೆಯಲಾಗಿದೆ. ಲಕೋಟೆ ಒಳಗಿನ ಪತ್ರದಲ್ಲಿ ಬೆದರಿಕೆಯ ಬರಹವಿದ್ದು, ಈ ಸ್ಫೋಟ ಕೇವಲ ಟ್ರೇಲರ್ ಅಷ್ಟೇ ಎಂಬ ಎಚ್ಚರಿಕೆ ನೀಡಲಾಗಿತ್ತು.