ರಾಮ್ದೇವ್ ವಿರುದ್ದ ಪಿಪಿಇ ಕಿಟ್ಗಳಲ್ಲಿ ಘೋಷಣೆ ಬರೆದು, ಕಪ್ಪು ಬ್ಯಾಂಡ್ ಧರಿಸಿ ವೈದ್ಯರ ಪ್ರತಿಭಟನೆ
ನವದೆಹಲಿ, ಜೂ. 1: ಅಲೋಪತಿ ಮತ್ತು ಆಧುನಿಕ ಔಷಧದ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ಹೇಳಿಕೆಯ ವಿರುದ್ದ ದೇಶಾದ್ಯಂತ ವೈದ್ಯರು ಜೂನ್ 1 ರಂದು ಕಪ್ಪು ದಿನವನ್ನು ಆಚರಿಸುತ್ತಿದ್ದಾರೆ.
ರಾಷ್ಟ್ರವ್ಯಾಪಿ ಹಲವಾರು ಆಸ್ಪತ್ರೆಗಳ ಸಿಬ್ಬಂದಿಗಳು ರಾಮ್ದೇವ್ ವಿರುದ್ದ ಘೋಷಣೆ ಬರೆದಿರುವ ಪ್ಲಕ್ ಕಾರ್ಡ್ಗಳನ್ನು ಪ್ರದರ್ಶಿಸಿದ್ದು ಪತಂಜಲಿ ಆಯುರ್ವೇದ ಸಂಸ್ಥಾಪಕ ರಾಮ್ದೇವ್ನನ್ನು ಬಂಧಿಸುವಂತೆ ಆಗ್ರಹಿಸಿದರು. ಈ ಹೇಳಿಕೆಗಳನ್ನು ಹಿಂಪಡೆದು ವೈದ್ಯಕೀಯ ಸಂಘಗಳ ಬಳಿ ಬೇಷರತ್ತಾದ ಮುಕ್ತ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಾಬಾ ರಾಮದೇವ್ ವಿರುದ್ದ ಜೂನ್ 1 ರಂದು 'ಕಪ್ಪು ದಿನ'ಕ್ಕೆ ಕರೆ ನೀಡಿದ ವೈದ್ಯರ ಸಂಘ
ಮೇ 31 ರಂದು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಪ್ರಕಟಣೆ ಹೊರಡಿಸಿದ್ದು, ಜೂನ್ 1 ಅನ್ನು 'ಕಪ್ಪು ದಿನ' ಎಂದು ಆಚರಿಸಲಾಗುವುದು ಎಂದು ಹೇಳಿತ್ತು. ಹಾಗೆಯೇ ಈ ಪ್ರತಿಭಟನೆ ದಿನಪೂರ್ತಿ ನಡೆಯಲಿದೆ. ಆದರೆ ಈ ಪ್ರತಿಭಟನೆಯಿಂದ ರೋಗಿಗಳ ಆರೈಕೆಗೆ ತೊಂದರೆಯಾಗುವುದಿಲ್ಲ ಎಂದು ಕೂಡಾ ಫೋರ್ಡಾ ಹೇಳಿತ್ತು. ಈ ಕರೆಯಂತೆ ಇಂದು ವೈದ್ಯರುಗಳು ರಾಮ್ದೇವ್ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದ ವೈದ್ಯರ ಪಿಪಿಇ ಕಿಟ್ ಮೇಲೆ ರಾಮ್ದೇವ್ ವಿರುದ್ದದ ಘೋಷಣೆಗಳು ಕಂಡು ಬಂದಿದೆ. ಕೆಲವರು ಪ್ಲಕ್ ಕಾರ್ಡ್ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
"ರಾಮ್ದೇವ್ ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು"
"ಅಲೋಪತಿಯ ಶಿಸ್ತಿನ ಬಗ್ಗೆ ಮಾತನಾಡಲು ಸಹ ಅರ್ಹತೆ ಇಲ್ಲದ ರಾಮದೇವ್ ಮಾಡಿದ ಟೀಕೆಗಳ ವಿರುದ್ಧ ಇಂದು ಬೆಳಿಗ್ಗೆ ನಮ್ಮ ಪ್ರತಿಭಟನೆ ಪ್ರಾರಂಭವಾಗಿದೆ. ರಾಮ್ದೇವ್ ಹೇಳಿಕೆಯು ಸಾಂಕ್ರಾಮಿಕ ರೋಗದದ ಸಂದರ್ಭ ದಿನವಿಡಿ ಕೋವಿಡ್ ವಿರುದ್ದ ಹೋರಾಡುತ್ತಿರುವ ವೈದ್ಯರ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ರಾಮ್ದೇವ್ ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಅಥವಾ ರಾಮ್ದೇವ್ ವಿರುದ್ದ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ" ಎಂದು ಫೋರ್ಡಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ರಾಮ್ದೇವ್ ಹೇಳಿಕೆಯಿಂದ ಜನರಲ್ಲಿ ಲಸಿಕೆಯ ಬಗ್ಗೆ ಆತಂಕ ಹೆಚ್ಚಾಗಿದ್ದು ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಫೋರ್ಡಾ ಆರೋಪಿಸಿದೆ.
ಅಲೋಪತಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಷರತ್ತು ವಿಧಿಸಿ ರಾಮ್ದೇವ್ಗೆ ಐಎಂಎ ಆಹ್ವಾನ
"ಸರ್ಕಾರ ಯಾಕೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಅರ್ಥವಾಗುತ್ತಿಲ್ಲ"
ಏಮ್ಸ್ ಆರ್ಡಿಎ ಅಧ್ಯಕ್ಷ ಡಾ.ಅಮಂದೀಪ್ ಸಿಂಗ್ ಮಾತನಾಡಿ, "ಆಧುನಿಕ ಔಷಧದ ವಿರುದ್ಧ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಿ ತಮ್ಮ ಪ್ರಾಣ ಕಳೆದುಕೊಂಡ ಕೋವಿಡ್ ಯೋಧರ ವಿರುದ್ಧ ರಾಮ್ದೇವ್ ನೀಡಿದ ಹೇಳಿಕೆಯಿಂದ ಎಲ್ಲಾ ವೈದ್ಯರು ನೊಂದಿದ್ದಾರೆ. ಪ್ರತಿದಿನ ವೈದ್ಯರ ಚಿಕಿತ್ಸೆ, ಲಸಿಕೆ ವಿರುದ್ದ ರಾಮ್ದೇವ್ ಟ್ವೀಟ್ ಮಾಡುತ್ತಿದ್ದು ಸರ್ಕಾರ ಯಾಕೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದು ಎಂದಿಗೂ ಆಯುರ್ವೇದ ಮತ್ತು ಅಲೋಪತಿ ನಡುವಿನ ಕದನವಲ್ಲ
"ರಾಮದೇವ್ ಸಾರ್ವಜನಿಕರಲ್ಲಿ ಹರಡಿದ ತಪ್ಪು ಕಲ್ಪನೆಗಳ ವಿರುದ್ಧ ನಾವು ಕಪ್ಪು ದಿನವನ್ನು ಆಚರಿಸುತ್ತಿದ್ದೇವೆ. ಇದು ಎಂದಿಗೂ ಆಯುರ್ವೇದ ಮತ್ತು ಅಲೋಪತಿ ನಡುವಿನ ಕದನವಲ್ಲ. ಎಲ್ಲಾ ಆರೋಗ್ಯ ಕಾರ್ಯಕರ್ತರು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಾವೆಲ್ಲರೂ ನಮ್ಮ ಪ್ರಾಣವನ್ನು ತ್ಯಾಗದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದೇವೆ. ಹಾಗಿರುವಾಗ ನಮ್ಮನ್ನು ಅಪಹಾಸ್ಯ ಮಾಡುವುದು ಅಸಹನೀಯ. ಸಾಂಕ್ರಾಮಿಕ ಕಾಯ್ದೆಯಡಿ ರಾಮ್ದೇವ್ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಪ್ರತಿಭಟನಾ ವೈದ್ಯರೊಬ್ಬರು ಆಗ್ರಹಿಸಿದ್ದಾರೆ.
'ಯಾರಿಗೂ ನನ್ನನ್ನು ಬಂಧಿಸುವ ಧೈರ್ಯವಿಲ್ಲ' - ಐಎಂಎಗೆ ಬಾಬಾ ರಾಮ್ ದೇವ್ ತಿರುಗೇಟು
ಕಪ್ಪುದಿನದ ಬಗ್ಗೆ ರಾಮ್ದೇವ್ ಹೇಳಿದ್ದು ಹೀಗೆ..
ಈ ನಡುವೆ ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಮ್ದೇವ್, "ನಾನು ನನ್ನ ಟೀಕೆಗಳನ್ನು ಹಿಂತೆಗೆದುಕೊಂಡಿದ್ದೇನೆ ಮತ್ತು ಕ್ಷಮೆಯಾಚಿಸಿದ್ದೇನೆ. ಈ ಸಾಂಕ್ರಾಮಿಕ ಸಮಯದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಕೋವಿಡ್ ಯೋಧರಿಗೆ ನಾನು ಗೌರವ ನೀಡುತ್ತೇನೆ. ಈ ಪ್ರತಿಭಟನೆಯು ಐಎಂಎ ಯ ಕೊಳಕು ವರ್ತನೆಯಾಗಿದೆ. ಅವರು 90 ರಷ್ಟು ಕೋವಿಡ್ ರೋಗಿಗಳಿಗೆ ಆರೋಗ್ಯಕರ ಆಹಾರ ಮತ್ತು ಯೋಗದೊಂದಿಗೆ ಮನೆಯಲ್ಲಿ ಚಿಕಿತ್ಸೆ ನೀಡಬಹುದು ಎಂದು ಪ್ರಮುಖ ವೈದ್ಯರು ಹೇಳಿದಾಗಲೂ ಆಯುರ್ವೇದವನ್ನು ಹುಸಿ ವಿಜ್ಞಾನ ಎಂದು ಕರೆದಿದ್ದಾರೆ. ಹಾಗಾದರೆ ಯೋಗವನ್ನು ಅವರು ಅವಮಾನಿಸುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. "ಇದು ಆಯುರ್ವೇದ, ಅಲೋಪತಿ ನಡುವಿನ ವಾಗ್ವಾದವಲ್ಲ. ನಾನು ಡ್ರಗ್ ಮಾಫಿಯಾ ವಿರುದ್ಧ ಮಾತನಾಡಿದ್ದೇನೆ. ನಾನು ಅಲೋಪತಿಯನ್ನು ವಿಜ್ಞಾನವಾಗಿ ಅಳವಡಿಸಿಕೊಂಡಿದ್ದೇನೆ" ಎಂದು ಅವರು ಹೇಳಿದರು.
ಈವರೆಗೂ ನಡೆದಿದ್ದೇನು?
ರಾಮ್ದೇವ್ ಮಾತನಾಡಿದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ರಾಮ್ದೇವ್ ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದರು. ರೆಮ್ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದು ಹೇಳಿದ್ದರು. ರಾಮ್ದೇವ್ ಹೇಳಿಕೆ ವಿರುದ್ದ ಭಾರತ ವೈದ್ಯಕೀಯ ಸಂಘ ನೋಟಿಸ್ ಕಳುಹಿಸಿ, ನೋಟಿಸ್ ತಲುಪಿದ 15 ದಿನಗಳೊಳಗೆ ಬಾಬಾ ರಾಮ್ದೇವ್ ಲಿಖಿತವಾಗಿ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿತ್ತು. ಇಲ್ಲವಾದರೆ ಐಎಂಎಯ ಪ್ರತಿ ಸದಸ್ಯರಿಗೆ 50 ಲಕ್ಷ ರೂಪಾಯಿಯಂತೆ 1000 ಕೋಟಿ ಪರಿಹಾರವನ್ನು ಕೋರಲಾಗುತ್ತದೆ ಎಂದು ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿಗೂ ವೈದ್ಯರ ಸಂಘ ಪತ್ರ ಬರೆದಿತ್ತು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಮ್ದೇವ್ ಹೇಳಿಕೆ ಹಿಂಪಡೆದು 25 ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಆ ಬಳಿಕ ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲಾಗದು ಎಂದು ಹೇಳಿದ್ದರು. ಈ ಬೆನ್ನಲ್ಲೇ ಅಲೋಪತಿ ವೈದ್ಯ ಪದ್ದತಿಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಾಬಾ ರಾಮ್ದೇವ್ಗೆ ಹೇಳಿದ್ದ ಐಎಂಎ ಷರತ್ತಿನೊಂದಿಗೆ ಬಾಬಾ ರಾಮ್ದೇವ್ಗೂ ಆಹ್ವಾನ ನೀಡಿತ್ತು. ಈಗ ರಾಮ್ದೇವ್ ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿ ವೈದ್ಯರ ಸಂಘ ಪ್ರತಿಭಟನೆ ನಡೆಸುತ್ತಿದೆ.
(ಒನ್ಇಂಡಿಯಾ ಸುದ್ದಿ)