ಬಿಜೆಪಿ ಕಾರ್ಯಕರ್ತನ ಹತ್ಯೆ: ಕುಟುಂಬದಿಂದ ಕೋಮು ದ್ವೇಷದ ಆರೋಪ
ನವದೆಹಲಿ, ಫೆಬ್ರವರಿ 12: ಜನ್ಮದಿನದ ಸಂತೋಷಕೂಟವೊಂದರಲ್ಲಿ ಶುರುವಾದ ಮಾತಿನ ಚಕಮಕಿ ಯುವಕನೊಬ್ಬನ ಕೊಲೆಯ ದುರಂತ ಅಂತ್ಯ ಕಂಡಿದೆ. ದೆಹಲಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, 25 ವರ್ಷದ ವ್ಯಕ್ತಿಯನ್ನು ಗುಂಪೊಂದು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಈ ಕೊಲೆಯ ಹಿಂದೆ ಕೋಮು ಉದ್ದೇಶ ಇದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ರೋಹಿತ್ ಶರ್ಮಾ ಅಲಿಯಾಸ್ ರಿಂಕು ಶರ್ಮಾ ಎಂದು ಗುರುತಿಸಲಾಗಿದೆ. ಜಾಹಿದ್, ಮೆಹ್ತಾಬ್, ದ್ಯಾನಿಶ್, ಇಸ್ಲಾಂ ಮತ್ತು ತೌಜೀನ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆಗೆ ಕಾರಣ ಬಹಿರಂಗ!
ದೆಹಲಿ ಹೊರವಲಯದ ಮಂಗೋಲ್ಪುರಿಯಲ್ಲಿನ ತಮ್ಮ ಮನೆಯ ಸಮೀಪದಲ್ಲಿ ಬಾಬು ಎಂಬುವವರ ಜನ್ಮದಿನದ ಸಂತೋಷಕೂಟಕ್ಕೆ ರಿಂಕು ಶರ್ಮಾ ತೆರಳಿದ್ದರು. ಈ ಪಾರ್ಟಿಯಲ್ಲಿ ಕನಿಷ್ಠ ನಾಲ್ವರು ಆರೋಪಿಗಳು ಕೂಡ ಭಾಗಿಯಾಗಿದ್ದರು. ಅವರೆಲ್ಲರೂ ಪರಸ್ಪರ ಪರಿಚಿತರು. ಪಾರ್ಟಿಯಲ್ಲಿ ಯಾವುದೋ ಕಾರಣಕ್ಕೆ ವಾಗ್ವಾದ ನಡೆದಿದೆ. ಕೊನೆಗೆ ರಿಂಕು ಶರ್ಮಾ ಅಲ್ಲಿಂದ ಮನೆಗೆ ಹೊರಟಿದ್ದರು. ಆದರೆ ಅವರನ್ನು ಹಿಂಬಾಲಿಸಿದ ಆರೋಪಿಗಳು ಅವರ ಹಿಂಭಾಗದಿಂದ ಚಾಕುವಿನಿಂದ ಇರಿದಿದ್ದಾರೆ. ಬಳಿಕ ರಿಂಕು ಶರ್ಮಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಮನೆ ಸಮೀಪದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಲಾಠಿ ಮತ್ತು ಬಡಿಗೆ ಹಿಡಿದ ಜನರು ಕಂಡುಬಂದಿದ್ದಾರೆ. ರೆಸ್ಟೋರೆಂಟ್ ಒಂದನ್ನು ಮುಚ್ಚುವ ಬಗ್ಗೆ ಮಾತುಕತೆ ನಡೆಯುವಾಗ ಪಾರ್ಟಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಇದೇ ಕಾರಣದಿಂದ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ ಈ ಕೊಲೆಯ ಹಿಂದೆ ಕೋಮುವಾದದ ಕಾರಣವಿದೆ ಎಂದು ರಿಂಕು ಶರ್ಮಾ ಸಹೋದರ ಮನು ಶರ್ಮಾ ಆರೋಪಿಸಿದ್ದಾರೆ. ಆಗಸ್ಟ್ 5ರಂದು ನಾವು ರಾಮಮಂದಿರ ನಿರ್ಮಾಣದ ದೇಣಿಗೆ ಸಂಗ್ರಹಕ್ಕೆ ಜಾಥಾ ನಡೆಸಿದ್ದೆವು. ಆಗಲೂ ನಮಗೆ ಕಿರುಕುಳ ನೀಡಲಾಗಿತ್ತು. ಅವರು ನಮಗೆ ಬೆದರಿಕೆಯೊಡ್ಡಿದ್ದರು. ಜೈ ಶ್ರೀರಾಮ್ ಎಂಬ ಘೋಷಣೆಕೂಗಿದ್ದಕ್ಕೆ ಆಕ್ಷೇಪಿಸಿದ್ದರು. ಈಗ ಆತನನ್ನು ಕೊಲೆ ಮಾಡಿದ್ದಾರೆ. ಆತನಿಗೆ ಬಜರಂಗದಳದೊಂದಿಗೆ ನಂಟು ಇತ್ತು ಎಂದು ಮನು ಶರ್ಮಾ ತಿಳಿಸಿದ್ದಾರೆ.
ದೀಪಕ್ ರಾವ್ ಹತ್ಯೆ; ಪ್ರಮುಖ ಆರೋಪಿ ಕೊಲೆಗೆ ಯತ್ನ
'ನನ್ನ ಮಗನಿಗೆ ಬಜರಂಗದಳದ ಜತೆ ನಂಟು ಇತ್ತು. ಇದಕ್ಕಾಗಿ ಆತನಿಗೆ ಪದೇ ಪದೇ ಬೆದರಿಕೆ ಬರುತ್ತಿತ್ತು' ಎಂದು ಅವರ ತಂದೆ ತಿಳಿಸಿದ್ದಾರೆ. 'ನನ್ನ ಮಗನನ್ನು ಕೊಲ್ಲುವಾಗಲೂ ಆತ ಜೈ ಶ್ರೀರಾಮ್ ಎಂದು ಕೂಗುತ್ತಿದ್ದ. ಸುಮಾರು 30-40 ಮಂದಿ ಲಾಠಿ, ಬಡಿಗೆ ಹಾಗೂ ಚಾಕುಗಳನ್ನು ಹಿಡಿದುಕೊಂಡಿದ್ದರು' ಎಂದು ಅವರ ತಾಯಿ ಹೇಳಿದ್ದಾರೆ.
ರಿಂಕು ಶರ್ಮಾ ಅವರು ಬಿಜೆಪಿ ಹಾಗೂ ವಿಎಚ್ಪಿಯ ಸಕ್ರಿಯ ಸದಸ್ಯರಾಗಿದ್ದರು ಎನ್ನಲಾಗಿದೆ. ಈ ಹತ್ಯೆಗೆ ಕೋಮುವಾದದ ನಂಟು ಇದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.