ಬಿಜೆಪಿ ಸಂಸದರಿಗೆ ಶಿಸ್ತಿನ ಪಾಠ: ಕಾರ್ಯಾಗಾರಕ್ಕೆ ಹಾಜರಿ ಕಡ್ಡಾಯ
ನವದೆಹಲಿ, ಆಗಸ್ಟ್ 3: ಬಿಜೆಪಿ ತನ್ನ ಸಂಸದರಿಗೆ ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸುತ್ತಿದೆ. ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಈ ಕಾರ್ಯಾಗಾರ ಆರಂಭವಾಗಿದ್ದು, ಎರಡೂ ದಿನ ಇದರಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.
ಈ ಕಾರ್ಯಾಗಾರದೊಳಗೆ ಮಾಧ್ಯಮ ಸೇರಿದಂತೆ ಇತರರಿಗೆ ಪ್ರವೇಶವಿಲ್ಲ. ಸದನ ಮತ್ತು ಹೊರಭಾಗದಲ್ಲಿ ನಡವಳಿಕೆಗಳು, ಸಂಸದೀಯ ಪ್ರಕ್ರಿಯೆಗಳು ಮತ್ತು ಸೈದ್ಧಾಂತಿಕ ಸಂಗತಿಗಳ ಕುರಿತು ಮುಚ್ಚಿದ ಬಾಗಿಲಿನಲ್ಲಿ ವಿವಿಧ ಉಪನ್ಯಾಸ, ತರಬೇತಿಗಳು ನಡೆಯಲಿವೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ನಿರ್ಧಾರವನ್ನು ಬಿಜೆಪಿ ಹಠಾತ್ ಬದಲಿಸಿದ್ದೇಕೆ?
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.
ಜೆಪಿ ನಡ್ಡಾ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಸಂಜೆ ಅಮಿತ್ ಶಾ ಅವರು ಸಂಸತ್ನಲ್ಲಿ ಸಂಸದರ ಕರ್ತವ್ಯದ ಕುರಿತು ಮಾತನಾಡಲಿದ್ದಾರೆ. ಬಿಜೆಪಿ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾನುವಾರ ಮಾತನಾಡಲಿದ್ದಾರೆ.
ಬಿಜೆಪಿ 'ಅಭ್ಯಾಸ ವರ್ಗ' ಎಂದು ಕರೆಯಲಾಗುವ ಕಾರ್ಯಕ್ರಮದ ಫೋಟೊಗಳನ್ನು ತೆಗೆಯಲು ಮಾತ್ರ ಮಾಧ್ಯಮದವರಿಗೆ ಅವಕಾಶ ನೀಡಲಾಗುತ್ತದೆ.
ಉ.ಪ್ರ ಸಿಎಂ ಸ್ಥಾನಕ್ಕೆ ಯೋಗಿ ಆಯ್ಕೆ ಹಿಂದಿನ ರಹಸ್ಯ ಬಯಲು!
ಕೆಲವು ಸಂಸದರು ಸಂಸತ್ನ ಒಳಗೆ ಮತ್ತು ಹೊರಗೆ ತಪ್ಪುಗಳನ್ನು ಎಸಗುವುದು, ವಿಪರೀತ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸುವ ಘಟನೆಗಳನ್ನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಡ್ಡಾಯ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಸಂದರ್ಭದಿಂದಲೂ ಪ್ರಧಾನಿ ಮೋದಿ ಅವರು ಸಂಸದರ ಶಿಸ್ತು, ಸಮಯಪರಿಪಾಲನೆ ಮತ್ತು ಸರ್ಕಾರಕ್ಕೆ ಮುಜುಗರವಾಗುವ ರೀತಿಯಲ್ಲಿ ಮನಸಿಗೆ ಬಂದಂತೆ ಹೇಳಿಕೆಗಳನ್ನು ನೀಡುವುದರ ನಿಯಂತ್ರಣದ ಕುರಿತು ನಿರತರವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ. ಸಂಸತ್ ಹಾಗೂ ಪಕ್ಷದ ಸಭೆಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಗೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
'ಈ ಬಾರಿ ಹೆಚ್ಚಿನ ಸಂಸದರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಬೇರೆ ರಾಜಕೀಯ ಪಕ್ಷದಿಂದ ಬಿಜೆಪಿ ಸೇರಿಕೊಂಡವರೂ ಇದ್ದಾರೆ. ಈ ರೀತಿಯ ಕಾರ್ಯಾಗಾರಗಳು ಪಕ್ಷದ ನೀತಿ ನಿಯಮಗಳ ಕುರಿತು ಅವರಿಗೆ ಪರಿಚಯ ಮಾಡಿಸುವುದು ಮಾತ್ರವಲ್ಲದೆ, ಪಕ್ಷವು ಅವರಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನೂ ಮನದಟ್ಟು ಮಾಡುತ್ತದೆ' ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.