ಶಿವರಾಜ್ ಸಿಂಗ್ ಗೆ ಮಹತ್ವದ ಜವಾಬ್ದಾರಿ ಕೊಟ್ಟ ಅಮಿತ್ ಶಾ
ನವದೆಹಲಿ, ಜೂನ್ 13: ಭಾರತೀಯ ಜನತಾ ಪಕ್ಷ(ಬಿಜೆಪಿ) ಅಧಿಕಾರಕ್ಕೆ ಬಂದು ಆಡಳಿತ ನಡೆಸಲು ಆರಂಭಿಸುತ್ತಿದ್ದಂತೆ ಮತ್ತೊಮ್ಮೆ ಸಂಘಟನಾ ಕಾರ್ಯಕ್ಕೆ ಮುಂದಾಗಿದೆ. ಅಮಿತ್ ಶಾ ಅವರ ಬದಲಿಗೆ ಹೊಸ ಅಧ್ಯಕ್ಷರ ಆಯ್ಕೆಗೆ ಇನ್ನು ಸಮಯವಿದ್ದು, ಈ ಸಮಯಲ್ಲಿ ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನದ ಹೊಣೆಯನ್ನು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಧ್ಯಕ್ಷ ಅಮಿತ್ ಶಾ ನೀಡಿದ್ದಾರೆ.
ಬಿಜೆಪಿಯಲ್ಲಿ ಉಪಾಧ್ಯಕ್ಷ ಸ್ಥಾನ ಹೊಂದಿರುವ ಶಿವರಾಜ್ ಸಿಂಗ್ ಅವರಿಗೆ ಸಹಾಯಕರಾಗಿ ಹಲವು ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪಕ್ಷದ ನೂತನ ಸದಸ್ಯರು, ರಾಜ್ಯ ಘಟಕದ ಮುಖ್ಯಸ್ಥರು, ಪ್ರಧಾನಾ ಕಾರ್ಯದರ್ಶಿಗಳ ಜೊತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಭೆ ನಡೆಸಿದ ಬಳಿಕ ಈ ನಿರ್ಧಾರ ಹೊರ ಬಂದಿದೆ.
ಕೇರಳ, ಪಶ್ಚಿಮ ಬಂಗಾಳದ ಕಡೆ ಗಮನ ಕೊಡಿ: ಮುಖಂಡರಿಗೆ ಅಮಿತ್ ಶಾ ಸೂಚನೆ
ಈ ನಡುವೆ ಮೂರು ರಾಜ್ಯಗಳ ಚುನಾವಣೆ ಮುಗಿಯುವ ತನಕ ಅಮಿತ್ ಶಾ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಅಭಿಮತ ವ್ಯಕ್ತವಾಗಿದೆ. ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದ ಅಮಿತ್ ಶಾ ಅವರ ಅಧಿಕಾರ ಅವಧಿ ಜನವರಿ ತಿಂಗಳಿಗೆ ಕೊನೆಗೊಂಡಿದೆ. ಮುಂದಿನ ಡಿಸೆಂಬರ್ ನಂತರ ಹೊಸ ಅಧ್ಯಕ್ಷರ ನೇಮಕವಾಗಲಿದೆ.
ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜುಲೈ 6ರಿಂದ ಸದಸ್ಯತ್ವ ಅಭಿಯಾನ ಆರಂಭಗೊಳ್ಳಲಿದೆ. ಬಿಜೆಪಿ ಸದಸ್ಯರ ಸಂಖ್ಯೆಯನ್ನು ಶೇ20ರಷ್ಟು ಹೆಚ್ಚಳ ಮಾಡುವಂತೆ ಅಮಿತ್ ಶಾ ಅವರು ಗುರಿ ನೀಡಿದ್ದಾರೆ.