just in: ಅಕ್ರಮ ಗಣಿಗಾರಿಕೆ: ರಾಜಸ್ಥಾನಕ್ಕೆ ಬಿಜೆಪಿ ತಂಡ
ನವದೆಹಲಿ, ಜುಲೈ 23; ರಾಜಸ್ಥಾನದ ಭರತ್ಪುರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಹಿನ್ನೆಲೆ, ನಾಲ್ವರು ಬಿಜೆಪಿ ಸಂಸದರ ತಂಡವು ರಾಜಸ್ಥಾನದ ಭರತ್ಪುರಕ್ಕೆ ಭೇಟಿ ನೀಡಿ, ವರದಿ ಸಂಗ್ರಹಿಸಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲು ಶನಿವಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಭಾನುವಾರ ರಂದು ಸಾಧು ವಿಜಯ್ ದಾಸ್ ಬೆಂಕಿ ಹಚ್ಚಿಕೊಂಡ ಸ್ಥಳಕ್ಕೆ ಭೇಟಿ ನೀಡಲಿದೆ.
ವಿಜಯ್ ದಾಸ್ ಎಂಬ ಸಾಧುವೊಬ್ಬರು ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ 551 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ರಾಜ್ಯ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಬುಧವಾರ ಅವರು ಬೆಂಕಿ ಹಚ್ಚಿಕೊಂಡಿದ್ದರು. ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಅವರನ್ನು ರಾಜಸ್ಥಾನದಿಂದ ಹೊಸದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ.
"ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತವು ಮೌನವಾಗಿದೆ, ಮುಖ್ಯಮಂತ್ರಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಗಣಿಗಾರಿಕೆ ಮಾಫಿಯಾವನ್ನು ಬೆಂಬಲಿಸುತ್ತಿದ್ದಾರೆ. 500 ದಿನಗಳಿಂದ ಧರಣಿ ಕುಳಿತಿದ್ದರೂ ಅಕ್ರಮ ಗಣಿಗಾರಿಕೆ ವಿಷಯದ ಬಗ್ಗೆ ಯಾವುದೇ ವಿಚಾರಣೆ ನಡೆಯದ ಕಾರಣ ವಿಜಯ್ ದಾಸ್ ನಿಧನರಾಗಿದ್ದಾರೆ ಎಂದು ಭರತ್ಪುರ ಬಿಜೆಪಿ ಸಂಸದ ರಂಜಿತಾ ಕೊಹ್ಲಿ ಆರೋಪಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ದಾಸ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಈ ಸಮಿತಿಯಲ್ಲಿ ರಾಜ್ಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸುಮೇದಾನಂದ ಸರಸ್ವತಿ, ಮಾಜಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಸತ್ಯ ಪಾಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ಇದ್ದಾರೆ.
ದೀಗ್ ಪಟ್ಟಣದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಮುಚ್ಚುವಂತೆ ಒತ್ತಾಯಿಸಿ 500 ದಿನಗಳಿಂದ ಭರತ್ಪುರದ ಪಸೋಪಾ ಗ್ರಾಮದಲ್ಲಿ ಸಾಧು ವಿಜಯ್ ದಾಸ್ ಧರಣಿ ನಡೆಸುತ್ತಿದ್ದರು. ಬುಧವಾರ ನಡೆದ ಪ್ರತಿಭಟನೆಯ ವೇಳೆ ಬೆಂಕಿ ಹಚ್ಚಿಕೊಂಡಿದ್ದರು.