ಬಿಜೆಪಿ ದೇವರನ್ನಲ್ಲ, ಗೋಡ್ಸೆಯನ್ನು ಪ್ರೀತಿಸುತ್ತೆ : ರಾಹುಲ್ ವ್ಯಂಗ್ಯಭರಿತ ಹಾಸ್ಯ
ನವದೆಹಲಿ, ಮೇ 17 : "ಕಡೆಗೂ ನನಗೆ ಅರ್ಥವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ದೇವರನ್ನು ಪ್ರೀತಿಸುವುದಿಲ್ಲ (Are not God-Ke Lovers). ಅವರು ಗೋಡ್ಸೆಯನ್ನು ಪ್ರೀತಿಸುತ್ತಾರೆ (They are God-Se Lovers)" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಹಾತ್ಮಾ ಗಾಂಧಿಯನ್ನು ಕೊಂಡಿದ್ದ ನಾಥೂರಾಮ್ ಗೋಡ್ಸೆಯನ್ನು, ಮಧ್ಯ ಪ್ರದೇಶದ ಭೋಪಾಲದಿಂದ ಸ್ಪರ್ಧಿಸುತ್ತಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರು 'ದೇಶಭಕ್ತ' ಎಂದು ಬಣ್ಣಿಸಿದ್ದು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮೇಲಿನಂತೆ ವರ್ಣಿಸಿ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.
ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ
ಪ್ರಗ್ಯಾ ಸಿಂಗ್ ಠಾಕೂರ್ ಅವರ ಈ ಹೇಳಿಕೆಗೆ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ, ಬಿಜೆಪಿ ಕೂಡ ಪ್ರಗ್ಯಾ ಸಿಂಗ್ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ, ನಾನು ಪ್ರಗ್ಯಾ ಸಿಂಗ್ ರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ, ಕಾಂಗ್ರೆಸ್ಸಿನ ಆಕ್ರೋಶ ತಣಿದಂತೆ ಕಾಣಿಸುತ್ತಿಲ್ಲ. ದೇಶದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಮತ್ತು ಅಸಲಿ ದೇಶಭಕ್ತರನ್ನು ಅವಮಾನ ಮಾಡಿದ ಪ್ರಗ್ಯಾ ಸಿಂಗ್ ರನ್ನು ಪಕ್ಷದಿಂದಲೇ ಕಿತ್ತುಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಂಥ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ ಎಂದು ಟೀಕಾಪ್ರಹಾರ ಮಾಡುತ್ತಿದೆ.
ನಾಥೂರಾಮ್ ಗೋಡ್ಸೆಯ ಬಗ್ಗೆ ಚರ್ಚೆ ಆರಂಭವಾಗಿದ್ದು, ತಮಿಳುನಾಡಿನ ನಟ ಕಮಲ್ ಹಾಸನ್ ಅವರು ಪ್ರಚಾರ ಸಭೆಯೊಂದರಲ್ಲಿ, ಮಹಾತ್ಮಾ ಗಾಂಧಿಯನ್ನು ಕೊಂದಿದ್ದ ನಾಥೂರಾಮ್ ಗೋಡ್ಸೆ ಅವರು ಸ್ವತಂತ್ರ ಭಾರತದ ಪ್ರಥಮ ಹಿಂದೂ ಭಯೋತ್ಪಾದಕ ಎಂದು ಬಣ್ಣಿಸಿದ ನಂತರ. ಪ್ರಜಾಪ್ರಭುತ್ವಕ್ಕೆ ಮಾನ್ಯತೆ ಇರುವ ಭಾರತದಲ್ಲಿ ಯಾರು ಏನು ಬೇಕಾದರೂ ಹೇಳಲು ಅವಕಾಶವಿದೆ.
ಗೋಡ್ಸೆ ಬೆಂಬಲಿಸುವ ಸಾಧ್ವಿಗೆ ನರೇಂದ್ರ ಮೋದಿ ಶ್ರೀರಕ್ಷೆ: ಸಿದ್ದರಾಮಯ್ಯ
ಈ ಹೇಳಿಕೆ ಹೊರಬಿದ್ದ ನಂತರ, ಪ್ರಬಲ ಹಿಂದೂತ್ವವಾದಿಯಾಗಿದ್ದ ನಾಥೂರಾಮ್ ಗೋಡ್ಸೆ ಭಯೋತ್ಪಾದಕನಾ ಅಥವಾ ಕೊಲೆಗಾರನಾ ಅಥವಾ ದೇಶಭಕ್ತನಾ ಇತ್ಯಾದಿ ಚರ್ಚೆಗಳು ಆರಂಭವಾದವು. ಗೋಡ್ಸೆ ಗಾಂಧಿಯನ್ನು ಕೊಂದಿರಬಹುದು ಆದರೆ ಆತ ಹಿಂದೂ ಉಗ್ರನಾಗಲು ಹೇಗೆ ಸಾಧ್ಯ ಎಂದು ಹಲವಾರು ಜನರು ವ್ಯಾಖ್ಯಾನ ನೀಡಲು ಶುರುಮಾಡಿದರು.
ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ: ಸಾಧ್ವಿ ಪ್ರಜ್ಞಾ ಸಿಂಗ್
ನಾಥೂರಾಮ್ ಗೋಡ್ಸೆ ದೇಶಭಕ್ತನೆಂದು ಸಾಧ್ವಿ ಪ್ರಗ್ಯಾ ಠಾಕೂರ್ ಮಾತ್ರವಲ್ಲ, ಕರ್ನಾಟಕದ ಸಂಸದರಾದ ಉತ್ತರ ಕನ್ನಡದ ಎಂಪಿ ಅನಂತ್ ಕುಮಾರ್ ಹೆಗಡೆ ಮತ್ತು ದಕ್ಷಿಣ ಕನ್ನಡದ ಎಂಪಿ ನಳಿನ್ ಕುಮಾರ್ ಕಟೀಲ್ ಅವರು ಕೂಡ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದರೆ. ಅವರಿಬ್ಬರಿಗೂ ಬಿಜೆಪಿ ತರಾಟೆಗೆ ತೆಗೆದುಕೊಂಡ ನಂತರ ಇಬ್ಬರೂ ಕ್ಷಮೆ ಕೋರಿದ್ದು, ತಮ್ಮ ಟ್ವಿಟ್ಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದ್ದರು.
ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಥೂರಾಮ್ ಗೋಡ್ಸೆ ವಿಷಯಕ್ಕೆ ಸಂಬಂಧಿಸಿದಂತೆ ಅನಗತ್ಯವಾದ ಚರ್ಚೆಗಳು ಆರಂಭವಾಗಿವೆ. ಇಂಥ ವಿಷಯಗಳನ್ನು ಬಿಟ್ಟು ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿರುವುದು ಉತ್ತಮ ಅಲ್ಲವೆ?