ಚುನಾವಣಾ ಫಲಿತಾಂಶಕ್ಕೆ ಮೊದಲೇ "ದೀದಿ" ಬಿಟ್ಟುಹೋದ್ರಾ ಪ್ರಶಾಂತ್; ಬಿಜೆಪಿ ವ್ಯಂಗ್ಯ
ನವದೆಹಲಿ, ಮಾರ್ಚ್ 02: ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿಎಂ ಅಮರಿಂದರ್ ಸಿಂಗ್ ಸಿದ್ಧತೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ.
ಈ ಕುರಿತು ಬಿಜೆಪಿ ಪ್ರತಿಕ್ರಿಯಿಸಿದ್ದು, "ಪ್ರಶಾಂತ್ ಅವರು ಕಾಂಗ್ರೆಸ್ ಸೇರಲು "ದೀದಿ"ಯನ್ನು ಈಗಲೇ ಬಿಟ್ಟು ಹೋಗಿದ್ದಾರೆ" ಎಂದು ವ್ಯಂಗ್ಯ ಮಾಡಿದೆ.
"ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ದೀದಿಯನ್ನು ಬಿಟ್ಟುಬಿಟ್ಟಿದ್ದಾರೆ. ಚುನಾವಣಾ ಫಲಿತಾಂಶ ಬರುವ ಮುನ್ನವೇ ಬೇರೆಡೆಗೆ ದೊಡ್ಡ ಸಲಹೆಗಾರನಾಗಿ ಸೇರಿಕೊಂಡಿದ್ದಾರೆ. ಈ ಸಂಗತಿಯೇ ಸಾಕಷ್ಟು ವಿಚಾರವನ್ನು ಹೇಳುತ್ತಿದೆ" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.
2022ರ ಚುನಾವಣೆಗೆ ಈಗಲೇ ಜತೆಗೂಡಿದ ಅಮರಿಂದರ್ ಸಿಂಗ್-ಪ್ರಶಾಂತ್ ಕಿಶೋರ್
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಪ್ರಶಾಂತ್ ಕಿಶೋರ್, ಚುನಾವಣಾ ತಂತ್ರಗಾರನಾಗಿದ್ದಾರೆ. ಮಾರ್ಚ್ 27ರಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಆರಂಭಗೊಳ್ಳಲಿದ್ದು, ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ತಂತ್ರ ರೂಪಿಸುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ತಮ್ಮ ತಂಡ ಸೇರಿಕೊಂಡಿರುವುದಾಗಿ ಅಮರಿಂದರ್ ಸಿಂಗ್ ಸೋಮವಾರ ಘೋಷಿಸಿದ್ದಾರೆ.