ಚುನಾವಣಾ ಅಖಾಡಕ್ಕೆ ಮತ್ತೆ ತಯಾರಾದ ಬಿಜೆಪಿ: ನೀಲನಕ್ಷೆ ಈಗಲೇ ಸಿದ್ಧ
Recommended Video
ನವದೆಹಲಿ, ಡಿಸೆಂಬರ್ 14: ಮೂರು ರಾಜ್ಯಗಳಲ್ಲಿ ಸೋಲಿನ ಆಘಾತ ಅನುಭವಿಸಿದ ಬಿಜೆಪಿ ಕೂಡಲೇ ಚೇತರಿಸಿಕೊಂಡು 2019ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಸಿದ್ಧವಾಗುತ್ತಿದೆ.
ಮುಂದಿನ ಚುನಾವಣಾ ಸಮರಕ್ಕಾಗಿ ಈಗಾಗಲೇ ಪಕ್ಷ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಈ ರಾಜ್ಯಗಳಲ್ಲಿನ ಸೋಲುಗಳನ್ನು ಬಳಿಕ ಪರಾಮರ್ಶೆಗೆ ಒಳಪಡಿಸಲಿದೆ. ಪಕ್ಷವು 2019ರ ಲೋಕಸಭಾ ಚುನಾವಣೆಯ ತನ್ನ ಕಾರ್ಯಸೂಚಿಯನ್ನು ಈಗಾಗಲೇ ಎಲ್ಲ ಮೋರ್ಚಾಗಳಿಗೂ ವಿತರಿಸಿದೆ.
ಸೋಲಿನ ಆಘಾತ: ಸರಣಿ ಸಭೆಯ ಮೊರೆಹೋದ ಬಿಜೆಪಿ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ದಿನಾಂಕವನ್ನು ಅಂತಿಮಗೊಳಿಸಿರುವುದು ಮಾತ್ರವಲ್ಲದೆ, ಎಲ್ಲ ಏಳು ಮೋರ್ಚಾಗಳ ಕಾರ್ಯಕ್ರಮಗಳನ್ನು ಸಹ ಅಂತಿಮಗೊಳಿಸಲಾಗಿದೆ.
ಸರ್ಕಾರದ ಸಾಧನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚುರಪಡಿಸುವಂತೆ ಮತ್ತು ಕಾರ್ಯಕರ್ತರು ಇನ್ನಷ್ಟು ಕ್ರಿಯಾಶೀಲರಾಗಲು ಅನುಕೂಲವಾಗುವ ರೀತಿಯಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ನಡೆಸುವ ಸ್ಥಳಗಳನ್ನು ನಿರ್ಧರಿಸಲಾಗಿದೆ.
ಚರ್ಚೆ ನಡೆದಿರಲಿಲ್ಲ
ಬಿಜೆಪಿ ಪದಾಧಿಕಾರಿಗಳ ಸಭೆ ಪೂರ್ವ ನಿಯೋಜಿತವಾಗಿದ್ದರೂ ಮತ್ತು ಇದರಲ್ಲಿ ರಾಜ್ಯ ಚುನಾವಣೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿದ್ದರೂ, ಅದನ್ನು ಬಿಜೆಪಿ ತಿರಸ್ಕರಿಸಿತ್ತು. ಅಲ್ಲದೆ, ಪಕ್ಷದ ಸಂಸದೀಯ ಸಭೆಯಲ್ಲಿ ಚುನಾವಣೆ ಬಗ್ಗೆ ಪ್ರಧಾನಿ ಸೇರಿದಂತೆ ಯಾರೂ ಚರ್ಚೆ ನಡೆಸಿರಲಿಲ್ಲ.
ಪ್ರಧಾನಿ ಅವರು ಅಟಲ್ ಬಿಹಾರಿ ವಾಜಪೇಯಿ, ಅನಂತ್ ಕುಮಾರ್ ಮತ್ತು ಭೋಲಾ ಸಿಂಗ್ ಅವರ ಕುರಿತು ಮಾತನಾಡಿದ್ದರು. ಜನರ ಸೇವೆ ಮಾಡಲು ಅವರನ್ನು ಪ್ರತಿನಿಧಿಸುವಂತೆ ಈ ನಾಯಕರು ಹೇಳುತ್ತಿದ್ದರು ಎಂದು ಸ್ಮರಿಸಿಕೊಂಡಿದ್ದರು.
ರಾಷ್ಟ್ರೀಯ ಕಾರ್ಯಕಾರಿಣಿ
ಜನವರಿ 11 ಮತ್ತು 12ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. 2019ರ ಲೋಕಸಭೆ ಚುನಾವಣೆಯ ಕಾರ್ಯಗಳ ಬಗ್ಗೆ ಪಕ್ಷ ಅಲ್ಲಿ ಚರ್ಚಿಸಲಿದೆ. ಸಮಿತಿ ಸದಸ್ಯರಲ್ಲದೆ ಪಕ್ಷದ ಎಲ್ಲ ಆಯ್ದ ಜನಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.
ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಸದಸ್ಯರು ಮುಂದಿನ ನಾಲ್ಕು-ಐದು ತಿಂಗಳ ಚುನಾವಣಾ ರೂಪುರೇಷೆಯನ್ನು ಪಡೆದುಕೊಳ್ಳಲಿದ್ದಾರೆ. ಕಿರು ನಿರ್ವಹಣಾ ಚಟುವಟಿಕೆಗಳಿಗೆ ಹೆಸರಾಗಿರುವ ಬಿಜೆಪಿಯ ಎಲ್ಲ ಮೋರ್ಚಾಗಳ ಕಾರ್ಯ ಚಟುವಟಿಕೆಗಳು ರಾಷ್ಟ್ರೀಯ ಕಾರ್ಯಕಾರಿಣಿಗೂ ಮುನ್ನವೇ ಭಾರಿ ಚುರುಕು ಪಡೆದುಕೊಳ್ಳಲಿವೆ.
ಬಿಜೆಪಿಗೆ ಶಾಕ್, ರಾಮಮಂದಿರ ವಿಚಾರಕ್ಕೆ ಇನ್ನು ಬ್ರೇಕ್; ಇನ್ನೇನಿದ್ದರೂ 'ಪ್ಲ್ಯಾನ್ ಬಿ'!
ಸತತ ಸಮಾವೇಶಗಳ ಆಯೋಜನೆ
ದೆಹಲಿಯಲ್ಲಿ ಡಿಸೆಂಬರ್ 15-16ರಂದು ಯುವ ಮೋರ್ಚಾದ ಸಮಾವೇಶ ನಡೆಯಲಿದೆ. ಅಹಮದಾಬಾದ್ನಲ್ಲಿ ಡಿ. 21-22ರಂದು ಮಹಿಳಾ ಮೋರ್ಚಾ ಸಮಾವೇಶ ನಡೆಯಲಿದ್ದು, ಡಿ. 22ರಂದು ಅಹಮದಾಬಾದ್ನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಮಾತನಾಡಲಿದ್ದಾರೆ.
ಕಿಸಾನ್ ಮೋರ್ಚಾ ಸಭೆ
ವಿರೋಧಪಕ್ಷಗಳು ಚಾಲ್ತಿಗೆ ತಂದಿದ್ದ ವಿವಾದಗಳ ಗಾಳಿಯನ್ನು ತಣ್ಣಗಾಗಿಸುವುದಕ್ಕೆ ಬಿಜೆಪಿ ಪ್ರಯತ್ನಿಸಲಿದೆ ಎನ್ನುವುದು ತುಂಬಾ ಸ್ಪಷ್ಟ. ರೈತರ ಸಾಲಮನ್ನಾ ಗೆಲುವಿನ ಸೂತ್ರಗಳಲ್ಲಿ ಒಂದು ಎನ್ನುವುದು ಸಾಬೀತಾಗಿದೆ. ಆದರೆ, ಕೇಂದ್ರ ಸರ್ಕಾರ ಅಂತಹ ಸೂತ್ರಗಳಿಗೆ ವಿರುದ್ಧವಾಗಿದೆ.
ಈ ನಾಯಕರ ಸಹಾಯದೊಂದಿಗೆ ಕಿಸಾನ್ ಮೋರ್ಚಾ ಸಭೆ ನಡೆಯಲಿದೆ. ತಳಮಟ್ಟದಿಂದ ಜನರನ್ನು ತಲುಪಲು ಬಿಜೆಪಿ ಪ್ರಯತ್ನಿಸಲಿದೆ.
ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ
ಎಸ್ ಸಿ/ಎಸ್ ಟಿ ಕಾಯ್ದೆ
ಎಸ್ ಸಿ/ಎಸ್ ಟಿ ಕಾಯ್ದೆ ಮತ್ತು ಒಬಿಸಿ ಆಯೋಗಗಳಂತಹ ಸಂಗತಿಗಳನ್ನು ವಿರೋಧ ಪಕ್ಷಗಳ ವಿರುದ್ಧದ ವಾಗ್ದಾಳಿಗಾಗಿ ಬಳಸಿಕೊಳ್ಳಲಿದೆ. ಮಾರ್ಚ್ 2019ರ ವೇಳೆಗೆ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮುನ್ನವೇ ಬಿಜೆಪಿ ಪ್ರಮುಖ ರಾಜ್ಯಗಳಲ್ಲಿ ತನ್ನ ಪರವಾದ ಅಲೆಯನ್ನು ಸೃಷ್ಟಿಸಲು ಬಯಸಿದೆ.