'ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?'
ನವದೆಹಲಿ, ಜೂನ್ 27: ತಂಗಿಯ ಗಂಡನಿಗೆ (ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ) ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಕೆ ಮೌನವಾಗಿದ್ದಾರೆ ಎಂದು ಬುಧವಾರ ಬಿಜೆಪಿಯು ರಾಹುಲ್ ರನ್ನು ತಡವಿಕೊಂಡಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
ರಾಬರ್ಟ್ ವಾದ್ರಾರನ್ನು ವಿಜಯ್ ಮಲ್ಯರಿಗೆ ಹೋಲಿಸಿದ ಸಂಬಿತ್ ಪಾತ್ರ, ಈ ಪ್ರಕರಣದಲ್ಲಿ ತಾವು ಶುದ್ಧ ಎಂದು ಸಾಬೀತು ಪಡಿಸುವಂತೆ ಹೇಳಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ವಿಜಯ್ ಮಲ್ಯ ಹಾಗೂ ರಾಬರ್ಟ್ ವಾದ್ರಾ ಇಬ್ಬರೂ ಸರಿಯಾದ ಉದಾಹರಣೆಗಳು. ಈಗ ಕಾನೂನಿನ ಬಿಸಿ ತಾಗಿತು. ತಾವು ಸುರಕ್ಷಿತರಲ್ಲ ಎಂಬ ಆತಂಕ ಕಾಡಿದೆ ಎಂದಿದ್ದಾರೆ.
ಅನನುಭವಿ ರಾಹುಲ್ ಗಾಂಧಿಯಿಂದ ಸಂಸತ್ ಕಲಾಪ ಹಾಳು: ಅನಂತ್ ಕುಮಾರ್
2010-11ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡ 25 ಕೋಟಿ ರುಪಾಯಿಗೆ ರಾಬರ್ಟ್ ವಾದ್ರಾ ಹಾಗೂ ಅವರ ಕಂಪೆನಿ ಸ್ಕೈಲೈಟ್ ಹಾಸ್ಪಿಟಾಲಿಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ದೇಶದ ಭ್ರಷ್ಟರನ್ನು ಈಗ ಹಿಡಿಯಲಾಗುತ್ತಿದೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
2010-11ನೇ ಸಾಲಿನಲ್ಲಿ ರಾಬರ್ಟ್ ವಾದ್ರಾ ತಮ್ಮ ಆದಾಯ ಕೇವಲ 37 ಲಕ್ಷ ಅಂತ ತೋರಿಸಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿದಂತೆ ಅವರ ಆದಾಯ 43 ಕೋಟಿ ಇತ್ತು. ಅಂದಹಾಗೆ ವಾದ್ರಾ ಏನೂ ಸಾಮಾನ್ಯ ವ್ಯಕ್ತಿ ಅಲ್ಲ. ರಾಹುಲ್ ಗಾಂಧಿಗೆ ಸಂಬಂಧಿಕರಾಗಬೇಕು. ವಾದ್ರಾ ಕಂಪೆನಿ ಇಷ್ಟೆಲ್ಲ ದೊಡ್ಡ ಪ್ರಮಾಣದ ಲಾಭ ಮಾಡುವಾಗ ಯುಪಿಎ ಸರಕಾರ ಏಕೆ ಮೌನವಾಗಿತ್ತು ಎಂದು ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.