ಅಮಿತ್ ಶಾ ಮುಂದೆಯೇ ವಿದ್ಯಾರ್ಥಿಗೆ ಥಳಿಸಿದ ಬಿಜೆಪಿ ಕಾರ್ಯಕರ್ತರು
ನವದೆಹಲಿ, ಜನವರಿ 28: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆಯೇ ಬಿಜೆಪಿ ಕಾರ್ಯಕರ್ತರು 21 ವರ್ಷದ ವಿದ್ಯಾರ್ಥಿಯನ್ನು ಥಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡುತ್ತಿದ್ದರು, ಆ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ, ಆತನನ್ನು ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ.
ಭಾಷಣದಲ್ಲಿ ತೊಡಗಿದ್ದ ಅಮಿತ್ ಶಾ ಘಟನೆಯನ್ನು ನೋಡಿ, 'ಅವನನ್ನು ಬಿಡಿ' ಎಂದು ಹೇಳಿದ್ದಾರೆ. ಪೊಲೀಸರನ್ನುದ್ದೇಶಿಸಿ, 'ಬೇಗನೇ ಅವನನ್ನು ಕರೆದುಕೊಂಡು ಹೋಗಿ' ಎಂದು ವೇದಿಕೆ ಮೇಲಿನಿಂದಲೇ ಸೂಚಿಸಿದ್ದಾರೆ.
ಥಳಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಅಮಿತ್ ಶಾ ಸೂಚನೆ ಮೇರೆಗೆ ಪೊಲೀಸರು ರಕ್ಷಿಸಿ ಅಲ್ಲಿಂದ ಕರೆದೊಯ್ದಿದ್ದಾರೆ. ನಂತರ ಸಮಾವೇಶ ಮುಂದುವರೆದಿದೆ. ಗಲಾಟೆಯಿಂದ ಜನರ ಗಮನವನ್ನು ಮರಳಿ ಸೆಳೆಯಲು ಅಮಿತ್ ಶಾ ಅವರು, 'ಭಾರತ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿಸಿದರು.
ಇದೇ ಸಮಾವೇಶದಲ್ಲಿ ಬಿಜೆಪಿಯ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು, ಸಿಎಎ ವಿರುದ್ಧ ಪ್ರತಿಭಟನಾಕಾರರಿಗೆ ಗುಂಡಿಕ್ಕಿ ಎಂಬ ಘೋಷಣೆಗಳನ್ನು ಕಾರ್ಯಕರಿಂದ ಕೂಗಿಸಿದ್ದಾರೆ. ಇದು ವಿವಾದ ಸೃಷ್ಟಿಸಿದೆ.
ಅಮಿತ್ ಶಾ ಆಗಮನಕ್ಕೂ ಮುನ್ನಾ ಠಾಕೂರ್ ಅವರು ವೇದಿಕೆ ಮೇಲಿನಿಂದ ಘೋಷಣೆಗಳನ್ನು ಕೂಗಿದರು. ಠಾಕೂರ್ ಅವರು 'ದೇಶದ್ರೋಹಿಗಳಿಗೆ' ಎಂದರೆ ಕಾರ್ಯಕರ್ತರು 'ಗುಂಡಿಕ್ಕಿ' ಎಂದು ಘೋಷಣೆ ಕೂಗಿದ್ದಾರೆ. ಘೋಷಣೆಯನ್ನು ಉತ್ತೇಜಿಸುವ ರೀತಿಯಲ್ಲಿ ಮಾತನಾಡಿದ ಠಾಕೂರ್ ಅವರು, 'ಇನ್ನೂ ಜೋರಾಗಿ ಕೂಗಿ' ಎಂದು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ.