ಲೋಕಸಭೆಯಲ್ಲಿ ಮಾತ್ರವಲ್ಲ, ಇನ್ನು ರಾಜ್ಯಸಭೆಯಲ್ಲಿಯೂ ಎನ್ಡಿಎ ದರ್ಬಾರು
ನವದೆಹಲಿ, ಜುಲೈ 1: ಪ್ರಮುಖ ಹಾಗೂ ಚರ್ಚಾಸ್ಪದವಾದ ಅನೇಕ ಮಸೂದೆಗಳನ್ನು ಮಂಡಿಸಿ ಲೋಕಸಭೆಯಲ್ಲಿ ಅದನ್ನು ಅಂಗೀಕರಿಸಿದ್ದರೂ ರಾಜ್ಯಸಭೆಯಲ್ಲಿ ಸದಸ್ಯರ ಸಂಖ್ಯೆಯ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ತನ್ನ ಕೊರಗನ್ನು ನಿವಾರಿಸಿಕೊಳ್ಳಲಿದೆ.
ಜಪಾನ್ನಲ್ಲಿ ನಡೆದ ಜಿ20 ಶೃಂಗಸಭೆಗೆ ತೆರಳುವ ಮುನ್ನ ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ನಮಗೆ ಬಹುಮತ ಇಲ್ಲದ ಕಾರಣ ಮೇಲ್ಮನೆಯಲ್ಲಿ ಮಾತನಾಡಲು ಅವಕಾಶಕ್ಕಾಗಿ ಈಗಲೂ ನಿಮ್ಮನ್ನು ಬೇಡಿಕೊಳ್ಳುವಂತಾಗಿದೆ. ಕೈಜೋಡಿಸಿಕೊಂಡು ನಿಮ್ಮ ಬಳಿ ಬರಬೇಕಾಗಿದೆ' ಎಂದು ಖಾರವಾಗಿ ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪದ ಜತೆ ಪ್ರತಿಭಟನೆ ನಡೆಸಿದ್ದರು. ಆದರೆ, ಮೋದಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಅಂಶಗಳನ್ನು ಮುಂದಿಟ್ಟಿದ್ದರು. ತ್ರಿವಳಿ ತಲಾಖ್ ಮತ್ತು ಪೌರತ್ವ ತಿದ್ದುಪಡಿ ಮಸೂದೆ ಸೇರಿದಂತೆ ಅನೇಕ ಮಹತ್ವದ ಮಸೂದೆಗಳು ಲೋಕಸಭೆಯಲ್ಲಿ ಮೋದಿ ಸರ್ಕಾರದಿಂದ ಅಂಗೀಕೃತವಾದರೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಗದೆ ಐದು ವರ್ಷಗಳಿಂದ ಹಾಗೆಯೇ ಉಳಿದಿದೆ. ಇದಕ್ಕೆ ಕಾರಣ ರಾಜ್ಯಸಭೆಯಲ್ಲಿ ಎನ್ಡಿಎ ಬಹುಮತದ ಕೊರತೆ ಅನುಭವಿಸುತ್ತಿರುವುದು.
ಮೇಲ್ಮನೆಯಲ್ಲಿ ಬಹುಮತ, ಪ್ರಧಾನಿ ಮೋದಿ ಚಿಂತೆ ಮಾಡ್ತಿಲ್ಲವೇಕೆ?
ಆದರೆ, ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿನ ರಾಜಕೀಯ ಸಂಖ್ಯಾಬಲದಲ್ಲಿಯೂ ಬದಲಾವಣೆಗಳಾಗುತ್ತಿವೆ. ಇದಕ್ಕೆ ಕಾರಣ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ನಾಲ್ವರು ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್ಎಲ್ಡಿ) ಒಬ್ಬ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿರುವುದು. ಇದರಿಂದ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಶಕ್ತಿ 76ಕ್ಕೆ ತಲುಪಿದೆ. ಇನ್ನು ಮುಂದೆ ಮಸೂದೆಗಳ ಮಂಡನೆಗಾಗಿ ಎನ್ಡಿಎ ರಾಜ್ಯಸಭೆಯಲ್ಲಿ ಕೈಮುಗಿದು ಬೇಡಿಕೊಳ್ಳಬೇಕಾದ ಸ್ಥಿತಿ ಎದುರಾಗುವ ಸಾಧ್ಯತೆ ಕಡಿಮೆ.
ಜುಲೈ 5ರಂದು ರಾಜ್ಯಸಭೆ ಚುನಾವಣೆ
ಜುಲೈ 5ರಂದು ರಾಜ್ಯಸಭೆಯ ಆರು ಸೀಟುಗಳಿಗೆ ಚುನಾವಣೆ ನಡೆಯಲಿದೆ. ಒಡಿಶಾದಿಂದ ಮೂರು, ಗುಜರಾತ್ನಿಂದ ಎರಡು ಮತ್ತು ಬಿಹಾರದಿಂದ ಒಬ್ಬ ಸಂಸದರ ಆಯ್ಕೆ ನಡೆಯಬೇಕಿದೆ. ಒಡಿಶಾ ಮತ್ತು ಬಿಹಾರದಿಂದ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜತೆಗೆ ಬಿಜೆಪಿಯು ಒಡಿಶಾದಲ್ಲಿ ಒಂದು ಮತ್ತು ಅದರ ಮಿತ್ರ ಪಕ್ಷ ಎಲ್ಜೆಪಿ ಬಿಹಾರದಲ್ಲಿ ನೀಡಿದ ಒಂದು ಸೀಟನ್ನು ಗೆದ್ದುಕೊಂಡಿವೆ.
ಗುಜರಾತ್ನಲ್ಲಿ ರಾಜ್ಯಸಭೆಗೆ ಎರಡು ಸೀಟುಗಳಿಗಾಗಿ ಚುನಾವಣೆ ನಡೆಯಲಿದೆ. ಅಲ್ಲಿ ಬಿಜೆಪಿ 100 ಮತ್ತು ಕಾಂಗ್ರೆಸ್ 75 ಶಾಸಕರ ಬಲವನ್ನು ಹೊಂದಿದೆ. ಅವಧಿ ಮುಗಿಯುವ ಮುನ್ನವೇ ಎರಡು ಸೀಟುಗಳು ಖಾಲಿಯಾಗಿರುವುದರಿಂದ ಏಕಕಾಲಕ್ಕೆ ಪ್ರತ್ಯೇಕ ಮತದಾನಗಳು ನಡೆಯಲಿವೆ.
ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಟಿಡಿಪಿ ವಕ್ತಾರ ದಿನಕರ್
ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್
ಎರಡೂ ಸೀಟುಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ನಾಯಕರೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂಕೋರ್ಟ್, ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಗುಜರಾತ್ನಲ್ಲಿನ ಈ ಎರಡೂ ಸ್ಥಾನಗಳನ್ನು ಬಿಜೆಪಿ ಮರಳಿ ತನ್ನ ವಶಕ್ಕೆ ಪಡೆದುಕೊಳ್ಳುವುದು ನಿಶ್ಚಿತ.
115ಕ್ಕೆ ಏರಲಿದೆ ಎನ್ಡಿಎ ಸಂಖ್ಯಾಬಲ
ಹೀಗೆ ರಾಜ್ಯಸಭಾ ಚುನಾವಣೆಗಳು ಮುಗಿದ ಬಳಿಕ ಬಿಜೆಪಿ ತನ್ನ ಬಲವನ್ನು 78ಕ್ಕೆ ಹೆಚ್ಚಿಸಿಕೊಳ್ಳಲಿದೆ. ಈ ಮೂಲಕ ರಾಜ್ಯಸಭೆಯಲ್ಲಿ ಎನ್ಡಿಎ ಸದಸ್ಯರ ಒಟ್ಟು ಸಂಖ್ಯೆಯನ್ನು 115ಕ್ಕೆ ಏರಿಸಿಕೊಳ್ಳಲಿದೆ. ಇದರಲ್ಲಿ ಎಐಎಡಿಎಂಕೆ, ಜೆಡಿಯು, ಶಿರೋಮಣಿ ಅಕಾಲಿ ದಳ, ಶಿವಸೇನಾ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ನಾಗ್ಫಾ ಪೀಪಲ್ಸ್ ಫ್ರಂಟ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಅಸಾಂ ಗಣ ಪರಿಷದ್, ಸಿಕ್ಕಿ ಡೆಮ್ರಾಕ್ರಟಿಕ್ ಫ್ರಂಟ್, ಆರು ಮಂದಿಯಲ್ಲಿ ಮೂವರು ಸ್ವತಂತ್ರ ಸದಸ್ಯರು ಮತ್ತು ನಾಲ್ವರಲ್ಲಿ ಮೂವರು ನಾಮನಿರ್ದೇಶಿತ ಸಂಸದರು ಸೇರಿದ್ದಾರೆ.
ಟಿಡಿಪಿ ಎಂಪಿಗಳು ಬಿಜೆಪಿಗೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಳ
ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ನೆರವು
ರಾಜ್ಯಸಭೆಯು ಪ್ರಸ್ತುತ 235 ಸೀಟುಗಳನ್ನು ಹೊಂದಿದ್ದು, ಚುನಾವಣೆಯ ಬಳಿಕ ಅದರ ಸಂಖ್ಯೆ 241ಕ್ಕೆ ಏರಲಿದೆ. ರಾಜ್ಯಸಭೆ ಚುನಾವಣೆಯ ನಂತರ ಆಡಳಿತಾರೂಢ ಬಿಜೆಪಿ 121ರ ಅರ್ಧದಷ್ಟು ಸಂಖ್ಯೆಯ ಗಡಿ ತಲುಪಲು ಆರು ಸೀಟುಗಳ ಕೊರತೆ ಅನುಭವಿಸಲಿದೆ. ಐವರು ರಾಜ್ಯಸಭಾ ಸಂಸದರನ್ನು ಹೊಂದಿರುವ ಬಿಜು ಜನತಾ ದಳ ಮತ್ತು ಇಬ್ಬರು ಸಂಸದರನ್ನು ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಜತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಮೋದಿ ಸರ್ಕಾರವು ಮಸೂದೆಗಳನ್ನು ಅಂಗೀಕರಿಸಲು ಅಗತ್ಯ ಬಲ ಪಡೆದುಕೊಳ್ಳುವುದು ಬಹುತೇಕ ಖಚಿತ.
ಮುಂದಿನ ವರ್ಷ ಸಿಗಲಿವೆ 9 ಸೀಟುಗಳು
ಮುಂದಿನ ವರ್ಷದ ವೇಳೆಗೆ ಪರಿಸ್ಥಿತಿ ಇನ್ನೂ ಬಿಜೆಪಿ ಸರ್ಕಾರದ ಪರವಾಗಲಿದೆ. ಉತ್ತರ ಪ್ರದೇಶದಿಂದ 9 ರಾಜ್ಯಸಭಾ ಸೀಟುಗಳು ಖಾಲಿಯಾಗಲಿವೆ. ಈ ರಾಜ್ಯದ 403 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸದಸ್ಯ ಬಲ ಹೊಂದಿದೆ. ಇದರಿಂದಾಗಿ ಎಲ್ಲ ಒಂಬತ್ತು ಸೀಟುಗಳನ್ನೂ ಬಿಜೆಪಿ ಸುಲಭವಾಗಿ ಗೆಲ್ಲುವ ಅವಕಾಶವಿದೆ. ಇದರಿಂದ ರಾಜ್ಯಸಭೆಯಲ್ಲಿ ಎನ್ಡಿಎ ಬಲ 124ಕ್ಕೆ ಮುಟ್ಟಲಿದೆ. ರಾಜ್ಯಸಭೆಯಲ್ಲಿ ಗರಿಷ್ಠ 245 ಸದಸ್ಯರು ಇರಲಿದ್ದು, ಎನ್ಡಿಎ ಅರ್ಧಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಲಿದೆ.