ಟಿಕೆಟ್ ಸಿಗದ ಬೇಸರದಲ್ಲಿ ಬಿಜೆಪಿ ತೊರೆದ ದೆಹಲಿ ಸಂಸದ
ನವದೆಹಲಿ, ಏಪ್ರಿಲ್ 24: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಸಂಭಾಳಿಸುವುದು ಪ್ರಮುಖ ಪಕ್ಷಗಳಿಗೆ ತಲೆನೋವಿನ ವಿಷಯವಾಗಿದೆ. ಅದರಲ್ಲೂ ದೆಹಲಿಯಲ್ಲಿ ಅಚ್ಚರಿಯ ರೀತಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದ್ದು, ಹಾಲಿ ಸಂಸದರಿಗೆ ಆಘಾತವಾಗಿ ಪರಿಣಮಿಸಿದೆ. ಟಿಕೆಟ್ ಸಿಗದ ಬೇಸರದಲ್ಲಿ ದೆಹಲಿ ಸಂಸದ ಉದಿತ್ ರಾಜ್ ಅವರು ಬಿಜೆಪಿ ತೊರೆದಿದ್ದಾರೆ.
ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಉದಿತ್ ರಾಜ್ ಬದಲಿಗೆ ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರಿಂದ ನೊಂದ ಉದಿತ್ ರಾಜ್ ಅವರು ಬುಧವಾರದಂದು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ.
ಇನ್ನು ಐದು ವರ್ಷ ನರೇಂದ್ರ ಮೋದಿ ಆಡಳಿತ ಕಾಣಬೇಕಿದೆ: ಸನ್ನಿ ಡಿಯೋಲ್
ಉದಿತ್ ರಾಜ್ ಅವರು ಸೋಮವಾರದಂದು ಟ್ವೀಟ್ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದರು. ಅಮಿತ್ ಶಾ ಜೀ, ನಾನು ನಿಮ್ಮೊಂದಿಗೆ ಮಾತನಾಡಲು ಹಲವು ಬಾರಿ ಯತ್ನಿಸಿದೆ. ನಿಮಗೆ ಎಸ್ಎಂಎಸ್ ಕೂಡಾ ಕಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಲು ಯತ್ನಿಸಿದೆ. ಮನೋಜ್ ತಿವಾರಿ ಅವರು ಕೂಡಾ ನನಗೆ ಟಿಕೆಟ್ ಸಿಗಲಿದೆ ಎಂದು ಭರವಸೆ ನೀಡಿದ್ದರು. ನಿರ್ಮಲಾ ಸೀತಾರಾಮನ್ ಅವರನ್ನು ಸಂಪರ್ಕಿಸಲು ಯತ್ನಿಸಿದೆ, ಅರುಣ್ ಜೇಟ್ಲಿ ಅವರಿಗೂ ಮನವಿ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
ನನಗೆ ಟಿಕೆಟ್ ಸಿಗದಿದ್ದರೆ ದಲಿತರಿಗೆ ಆಗುವ ಅನ್ಯಾಯ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ. ದಲಿತರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಟ್ವೀಟ್ ಮಾಡಿದ್ದರು. 2014ರಲ್ಲಿ ರಾಜ್ ಅವರು ಆಮ್ ಆದ್ಮಿ ಪಕ್ಷ (ಎಎಪಿ)ದ ರಾಖಿ ಬಿರ್ಲಾ ಅವರನ್ನು ಒಂದು ಲಕ್ಷಕ್ಕೂ ಅಧಿಕ ಅಂತರದಿಂದ ಸೋಲಿಸಿದ್ದರು. ವಾಯುವ್ಯ ದೆಹಲಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ರಾಜೇಶ್ ಲಿಲೊಥಿಯಾ ಸ್ಪರ್ಧಿಸುತ್ತಿದ್ದಾರೆ. ಆದರೆ, ಈಗ ಉದಿತ್ ರಾಜ್ ಅವರ ಪ್ರವೇಶದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸುವುದೋ ಇಲ್ಲವೋ ಕಾದು ನೋಡಬೇಕಿದೆ.