ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಸಂಸದ ತೇಜಸ್ವಿ ಆತಂಕ
ನವದೆಹಲಿ, ಜುಲೈ 10: ಲೋಕಸಭೆಯ ಮುಂಗಾರು ಅಧಿವೇಶನದಲ್ಲಿಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯ ಬಗ್ಗೆ ಮಾತನಾಡಿದರು.
ಶೂನ್ಯ ವೇಳೆಯಲ್ಲಿ ಮಾತನಾಡಿ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಅಕ್ರಮ ವಲಸಿಗರ ಬಗ್ಗೆ ಸರಿಯಾದ ಲೆಕ್ಕಾಚಾರ ಸಿಗುತ್ತಿಲ್ಲ. ದೇಶದ ಸುರಕ್ಷತೆಗೆ ಮಾರಕವಾಗುತ್ತಿದೆ, ಸ್ಥಳೀಯರ ಉದ್ಯೋಗವನ್ನು ವಲಸಿಗರು ಕಸಿದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ
ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ (ಜೆಎಂಬಿ) ಗೆ ಸೇರಿದ ಶಂಕಿತ ಉಗ್ರ ಹಬಿಬುರ್ ರೆಹಮಾನ್ ಹಾಗೂ ಆತನ 6 ಸಹಚರರು ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂಬ ವಿಷಯ ಎನ್ಐಎ ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದನ್ನು ತೇಜಸ್ವಿ ಸೂರ್ಯ ಉಲ್ಲೇಖಿಸಿದರು. ಹೀಗಾಗಿ, ಕೇಂದ್ರ ಸರ್ಕಾರವು ಎನ್ ಆರ್ ಸಿಯನ್ನು ಕರ್ನಾಟಕ, ಬೆಂಗಳೂರಿಗೂ ವಿಸ್ತರಿಸಬೇಕು, ಈ ಮೂಲಕ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡರು.
ಚಿಕ್ಕಬಾಣಾವಾರದ ಮನೆಯ ಮೇಲೆ ಇತ್ತೀಚೆಗೆ ಎನ್ಐಎ ದಾಳಿ ನಡೆಸಿ, 5 ಗ್ರೇನೇಡ್, 1 ಟೈಂ ಬಾಂಬ್, 3 ವಿದ್ಯುತ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು, ಇವುಗಳನ್ನು ಬಳಸಿ ಸುಧಾರಿತ ಬಾಂಬ್ ತಯಾರಿಕೆಯಲ್ಲಿ ಶಂಕಿತ ಉಗ್ರರು ತೊಡಗಿದ್ದರು ಎಂದು ತಿಳಿದು ಬಂದಿದೆ. ಹಬಿಬುರ್ ಸಹಚರರಾದ ಅಜಿವುಲ್ ಮೊಂಡಲ್, ರಫು ಕುಲ್ ಮಿಯಾ ಅವರು ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರ ಮುನೀರ್ ಎಲ್ಲರೂ ಒಂದೇ ಉಗ್ರ ಸಂಘಟನೆಯ ಸದಸ್ಯರಾಗಿದ್ದು, ಕರ್ನಾಟಕದಲ್ಲಿ ಇನ್ನು ಕೆಲವು ಸ್ಲೀಪರ್ ಸೆಲ್ ಗಳನ್ನು ನಿರ್ಮಿಸಿರುವ ಅನುಮಾನ ವ್ಯಕ್ತವಾಗಿದೆ.