ಮೊದಲ ದಿನವೇ ಸಂಸತ್ನಲ್ಲಿ ಗದ್ದಲಕ್ಕೆ ಕಾರಣವಾದ ಸಾದ್ವಿ ಪ್ರಜ್ಞಾ ಸಿಂಗ್
ನವದೆಹಲಿ, ಜೂನ್ 17: ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆದಾಗಿನಿಂದಲೂ ವಿವಾದದ ಕೇಂದ್ರ ಬಿಂದು ಆಗಿರುವ ಸಾದ್ವಿ ಪ್ರಜ್ಞಾ ಸಿಂಗ್ ಅವರು ಇಂದು ಲೋಕಸಭೆಯ ಅಧಿವೇಶನದ ಮೊದಲ ದಿನವೇ ಗದ್ದಲಕ್ಕೆ ಕಾರಣವಾದರು.
ಭೋಪಾಲ್ ಕ್ಷೇತ್ರದಿಂದ ಆಯ್ಕೆ ಆಗಿ ಬಂದಿರುವ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರು ಇಂದು ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇವರ ಪ್ರಮಾಣ ವಚನ ಸ್ವೀಕಾರವೇ ಇಂದು ಗದ್ದಲಕ್ಕೆ ಕಾರಣವಾಯಿತು.
ಪ್ರಮಾಣ ವಚನ ಸ್ವೀಕರಿಸಲು ಬಂದ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು, ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮುಂದಾದರು. ಎರಡು ಸಾಲು ಪ್ರಮಾಣ ವಚನ ಓದುತ್ತಿದ್ದಂತೆ ಸಂಸತ್ನ ಅಧಿಕಾರಿ ಅವರನ್ನು ತಡೆದು ತಂದೆಯ ಹೆಸರು ಹೇಳುವಂತೆ ಸೂಚಿಸಿದರು.
ದಿಗ್ವಿಜಯ್ ಸಿಂಗ್ ಸೋಲು: ಆತ್ಮಾಹುತಿಗೆ ಮುಂದಾದ ಸ್ವಾಮೀಜಿ
ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಪ್ರಮಾಣ ವಚನ ಸ್ವೀಕಾರದ ವೇಳೆ ತಮ್ಮ ಗುರುವಿನ ಹೆಸರನ್ನು ತಮ್ಮ ಹೆಸರಿನ ಜೊತೆ ಹೇಳಿದ್ದರು, ಆದರೆ ಈ ಹೆಸರನ್ನು ಅವರು ದಾಖಲೆಯಲ್ಲಿ ನೀಡಿರಲಿಲ್ಲ. ಇದು ಕೆಲವು ಸಮಯ ಗದ್ದಲಕ್ಕೆ ಕಾರಣವಾಯಿತು.
ಗುರುಗಳ ಹೆಸರು ಹೇಳಿದ ಸಾದ್ವಿ ಪ್ರಜ್ಞಾ ಸಿಂಗ್
ನಾನು ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಪೂರ್ಣ ಚೇತನಾನಂದ್ ಅದ್ವೇಶಾನಂದ್ ಗಿರಿ ಎಂದು ಪ್ರಜ್ಞಾ ಸಿಂಗ್ ಅವರು ಪ್ರಮಾಣ ವಚನ ಪ್ರಾರಂಭಿಸಿದ್ದರು, ಆದರೆ ಪೂರ್ಣ ಚೇತನನಾಂದ್ ಅದ್ವೇಶಾನಂದ್ ಗಿರಿ ಎಂಬುದು ಅವರ ಹೆಸರಾಗಿರಲಿಲ್ಲ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಯಿತು, ವಿರೋಧ ಪಕ್ಷಗಳೂ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು.
ಮಾಲೆಗಾಂವ್ ಸ್ಫೋಟದ ಬಗ್ಗೆ ಗೊತ್ತೇ ಇಲ್ಲ ಎಂದ ಸಂಸದೆ ಸಾಧ್ವಿ ಪ್ರಗ್ಯಾ
ವಿರೋಧ ಪಕ್ಷಗಳ ಸದಸ್ಯರ ಮೇಲೆ ಸಿಟ್ಟು ಪ್ರದರ್ಶನ
ವಿರೋಧ ಪಕ್ಷಗಳ ಸದಸ್ಯರು ತಮ್ಮ ವಿರುದ್ಧ ದನಿ ಎತ್ತರಿಸಿದ್ದನ್ನು ಕಂಡು ಸಾದ್ವಿ ಪ್ರಜ್ಞಾ ಸಿಂಗ್ ಅವರು ಸಿಟ್ಟಾದರು. ಆದರೆ ಈ ವೇಳೆ ವಿರೋಧ ಪಕ್ಷದವರನ್ನು ಸಮಾಧಾನಪಡಿಸಿದ ಹಂಗಾಮಿ ಸ್ಪೀಕರ್, ದಾಖಲೆಗಳನ್ನು ಪರಿಶೀಲಿಸಿ, ತಂದೆಯ ಹೆಸರನ್ನು ಮಾತ್ರವೇ ಹೆಸರಿನೊಂದಿಗೆ ಜೋಡಿಸಿ, ದೇವರು ಅಥವಾ ಸಂವಿಧಾನದ ಹೆಸರಿನಲ್ಲಿ ಮಾತ್ರವೇ ಪ್ರತಿಜ್ಞೆ ಸ್ವೀಕರಿಸಲು ಸೂಚಿಸಿದರು.
ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ
ಎರಡು ವಿಫಲ ಯತ್ನಗಳ ನಂತರ ಮೂರನೇ ಬಾರಿಗೆ ಸಾದ್ವಿ ಪ್ರಜ್ಞಾ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈಗಾಗಲೇ ಹಲವು ವಿವಾದಗಳ ಕೇಂದ್ರ ಬಿಂದು ಆಗಿರುವ ಸಾದ್ವಿ ಪ್ರಜ್ಞಾ ಸಿಂಗ್ ಅವರು ಸಂಸತ್ನ ಮೊದಲ ದಿನವೇ ವಿವಾದ ಎಬ್ಬಿಸಿದರು.
'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!
ಭಯೋತ್ಪಾದನೆ ಆರೋಪಿ ಪ್ರಜ್ಞಾ ಸಿಂಗ್
ಸಾದ್ವಿ ಪ್ರಜ್ಞಾ ಸಿಂಗ್ ಅವರು ಮಲೆಗಾಂವ್ ಸ್ಪೋಟದ ಆರೋಪಿ ಆಗಿದ್ದಾರೆ. ನ್ಯಾಯಾಲಯದ ವಿಚಾರಣೆಯನ್ನು ಅವರು ಎದುರಿಸುತ್ತಿದ್ದಾರೆ, ಅವರಿಗೆ ಟಿಕೆಟ್ ನೀಡಿದ್ದರ ಬಗ್ಗೆ ಭಾರಿ ವಿವಾದ ಆಗಿತ್ತು, ಆ ನಂತರ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಹ ಅವರು ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಎರಡು ದಿನಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು.
ನಾಥೋರಾಮ್ ಗೋಡ್ಸೆ ಬಗ್ಗೆ ಹೇಳಿಕೆ
ಚುನಾವಣೆ ನಡೆದ ನಂತರವೂ ಸಹ ನಾಥೋರಾಮ್ ಗೂಡ್ಸೆ ಬಗ್ಗೆ ಪ್ರೀತಿಯ ಮಾತುಗಳನ್ನಾಡಿ, ಅವನನ್ನು ದೇಶಭಕ್ತನೆಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದರು, ಮೋದಿ ಸಹ 'ನಾನು ಸಾದ್ವಿಯನ್ನು ಕ್ಷಮಿಸಲಾರೆ' ಎಂದು ಹೇಳಿಕೆ ನೀಡಿದ್ದರು.