ಈ ಯುವ ಸಂಸದನ ಭಾಷಣ ಕೇಳಿರೆಂದು ಖುದ್ದು ಮೋದಿಯೇ ಹೇಳಿದ್ದಾರೆ!
ನವದೆಹಲಿ, ಆಗಸ್ಟ್ 06: ಜಮ್ಮು ಕಾಶ್ಮೀರ ವಿಭಜನೆ ವಿಧೇಯಕದ ಬಗ್ಗೆ ಇಂದು ಲೋಕಸಭೆಯಲ್ಲಿ ಅತ್ಯಂತ ಮಹತ್ವದ ಚರ್ಚೆ ನಡೆಯಿತು. ಅಮಿತ್ ಶಾ, ಶಶಿ ತರೂರ್, ಅಭಯ್ ರಂಜನ್ ಚೌಧರಿ ಸೇರಿದಂತೆ ಇನ್ನೂ ಹಲವು ಪ್ರಮುಖರು ತಮ್ಮ ವಿಷಯ ಮಂಡಿಸಿದರು. ಆದರೆ ಗಮನ ಸೆಳೆದಿದ್ದು ಮಾತ್ರ ಬಿಜೆಪಿಯ ಯುವ ಸಂಸದರೊಬ್ಬರ ಭಾಷಣ.
ಜಮ್ಮು ಕಾಶ್ಮೀರದ ಲಡಾಕ್ ಲೋಕಸಭೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಬಂದಿರುವ ಬಿಜೆಪಿಯ ಯುವ ಸಂಸದ ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್ ಅವರು ಜಮ್ಮು ಕಾಶ್ಮೀರ ವಿಭಜನೆ ವಿಧೇಯಕದ ಪರವಾಗಿ ಸಂಸತ್ತಿನಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ.
ಮೋದಿ, ಶಾ ರನ್ನೂ ಮಂತ್ರಮುಗ್ಧರನ್ನಾಗಿಸಿದ ಲಡಾಕ್ ಸಂಸದ ತ್ಸೆರಿಂಗ್
ಖುದ್ದು ಮೋದಿಯವರೇ ಈ ಯುವ ಸಂಸದನ ಭಾಷಣದ ತುಣುಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, ಕೇಳಲೇಬೇಕಾದ ಭಾಷಣ ಎಂದು ಹೇಳಿದ್ದಾರೆ. ಅವರು ಮಾತ್ರವಲ್ಲೇ ಅಮಿತ್ ಶಾ ಅವರೂ ಸಹ ಈ ವಿಡಿಯೋವನ್ನು ಟ್ವೀಟ್ ಮಾಡಿ, ಯುವ ಸಂಸದ ಜಮ್ಯಾಂಗ್ ಬಗ್ಗೆ ಒಳ್ಳೆಯ ಮಾತುಗಳಾಡಿ, ಕೇಳಲೇ ಬೇಕಾದ ಭಾಷಣವೆಂದು ಶಾ ಕೂಡ ಮನವಿ ಮಾಡಿದ್ದಾರೆ.
ಸದನದಲ್ಲಿ ಮಾತನಾಡಿದ ಜಮ್ಯಾಂಗ್ ಸೆರಿಂಗ್ ನಂಗ್ಯಾಲ್, ಲಡಾಕ್ನ ಜನರು 71 ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶವಾಗಲು ಹೋರಾಟ ನಡೆಸುತ್ತಿದ್ದರು, ಆಗಲೇ ಅವರು ನೆಹರೂ ಅವರಿಗೆ ಮನವಿ ಮಾಡಿದ್ದರು. ಆದರೆ ಅದು ಈಗ ಆಗಿದೆ ಎಂದರು.
ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ನಮ್ಮ ಲಡಾಕಿ ಜನರ ಭಾಷೆ, ಸಂಸ್ಕೃತಿ, ಜೀವನ ಪದ್ಧತಿ ಎಲ್ಲವೂ ಮೂಲೆಗುಂಪಾಗಲು ಆರ್ಟಿಕಲ್ 370 ಮತ್ತು ಕಾಂಗ್ರೆಸ್ ಕಾರಣ ಎಂದ ಜಮ್ಯಾಂಗ್ ಲಡಾಕ್ನ ಜನ ಮಾತ್ರವಲ್ಲ ಕಾರ್ಗಿಲ್ ಜನರೂ ಸಹ ಕೇಂದ್ರಾಡಳಿತ ಪ್ರದೇಶವಾಗಲೆಂದೇ ಈ ಬಾರಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದರು. ಜಮ್ಯಾಂಗ್ ಲಡಾಕ್ನ ಬಿಜೆಪಿ ಸಂಸದರಾಗಿದ್ದಾರೆ.
|
'ಆರ್ಟಿಕಲ್ 370 ರದ್ದಿನಿಂದ ಎರಡು ಕುಟುಂಬಕ್ಕೆ ಮಾತ್ರ ನಷ್ಟ'
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಹೋದರೆ ಕೇವಲ ಎರಡು ಕುಟುಂಬಕ್ಕೆ ಮಾತ್ರವೇ ನಷ್ಟವಾಗುತ್ತದೆ. ಅವರ ದಿನದ ರೊಟ್ಟಿ ಅವರಿಗೆ ಸಿಗುವುದಿಲ್ಲ ಎಂದು ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮಫ್ತಿ ಕುಟುಂಬದ ಬಗ್ಗೆ ವ್ಯಂಗ್ಯ ಮಾಡಿದ ಅವರು, ಆರ್ಟಿಕಲ್ 370 ರದ್ದಾದರೆ ಕಾಶ್ಮೀರ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
'ಲಡಾಕ್ಗಾಗಿ ಮೊಸಳೆ ಕಣ್ಣಿರು ಸುರಿಸಲಾಗುತ್ತಿದೆ'
ನಿನ್ನೆಯಿಂದ ಇಲ್ಲಿ ಲಡಾಕ್ಗಾಗಿ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆ. ನಾವು ವರ್ಷಾನುಗಟ್ಟಲೆಯಿಂದ ನಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಲೇ ಬರುತ್ತಿದ್ದೇವೆ ಆದರೆ ನಮಗೆ ನಮ್ಮ ಹಕ್ಕು ಕೊಟ್ಟಿಲ್ಲ, ಎಲ್ಲ ಅನುದಾನಗಳು ಕಾಶ್ಮೀರಿಗಳಿಗೆ ಹೋಗುತ್ತಿತ್ತು, ಜಮ್ಮು ದವರು ಸ್ವಲ್ಪ ತೆಗೆದುಕೊಳ್ಳುತ್ತಿದ್ದರು. ಲಡಾಕ್ಗೆ ಸ್ವಲ್ಪವೂ ಸಿಗುತ್ತಿರಲಿಲ್ಲ ಕನಿಷ್ಟ ಕೇಂದ್ರೀಯ ವಿಶ್ವವಿದ್ಯಾಲಯವನ್ನೂ ಕೊಟ್ಟಿರಲಿಲ್ಲ, ಆದರೆ ಮೋದಿ ಅದನ್ನು ಕೊಟ್ಟರು ಎಂದು ಜಮ್ಯಾಂಗ್ ಹೇಳಿದರು.
ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು?
'ಕಾಶ್ಮೀರಿ ಪಂಡಿತರನ್ನು ಹೊರಹಾಕಿದ್ದು ಜಾತ್ಯಾತೀತತೆಯಾ?'
'ನಿನ್ನೆಯಿಂದ ಜಾತ್ಯಾತೀತತೆ, ಸಮಾನತೆಯ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ. ಆರ್ಟಿಕಲ್ 370 ಬಳಸಿ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಹೊರಗಟ್ಟಿದ್ದು ನಿಮ್ಮ ಜಾತ್ಯಾತೀತೆಯಾ, ಲಡಾಕ್ನಲ್ಲಿ ಬೌದ್ಧರ ಸಂಖ್ಯೆ ಹೆಚ್ಚಿತ್ತು, ಆದರೆ ಈಗ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಇದು ನಿಮ್ಮ ಸಮಾನತೆಯಾ? ಎಂದು ಅವರು ಪ್ರಶ್ನೆ ಮಾಡಿದರು.
'ಲಡಾಕ್ನ ಜನ ಕಾಶ್ಮೀರದ ಧ್ವಜವನ್ನು ಹಿಂದೆಯೇ ತಿರಸ್ಕರಿಸಿದ್ದಾರೆ'
ಕೆಟ್ಟ ರಾಜಕೀಯವನ್ನು ನೀವು ಕಣಿವೆಯಲ್ಲಿ ಮಾಡಿದ್ದೀರಿ. ಲೆಹ್-ಕಾರ್ಗಿಲ್ ಜಿಲ್ಲೆ ಮಾಡಿ, ಬೌದ್ಧರು, ಮುಸ್ಲಿಮರು ಹೊಡೆದಾಡುವಂತೆ ಮಾಡಿದಿರಿ. ಇಲ್ಲಿ ಯಾರೋ ಕಾಶ್ಮೀರದ ಧ್ವಜದ ಬಗ್ಗೆ ಮಾತನಾಡಿದರು. ಆದರೆ ನಾವು ಲಡಾಕ್ನ ಜನ 2011 ರಲ್ಲಿಯೇ ಆ ಧ್ವಜವನ್ನು ತಿರಸ್ಕರಿಸಿ ಭಾರತ ಧ್ವಜ ನೆಟ್ಟಿದ್ದೇವೆ ಎಂದು ಜಮ್ಯಾಂಗ್ ಹೇಳಿದರು.
ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್!
'ಆ ಎರಡು ಕುಟುಂಬಗಳ ಅಪ್ಪನ ಆಸ್ತಿಯಲ್ಲ ಕಾಶ್ಮೀರ'
ಕಾಶ್ಮೀರದ ಆ ಎರಡು ಕುಟುಂಬಗಳು (ಅಬ್ದುಲ್ಲಾ, ಮುಫ್ತಿ) ಕಾಶ್ಮೀರದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿವೆ. ಅವರೂ ಸಹ ಕಾಶ್ಮೀರ ಸಮಸ್ಯೆಯ ಭಾಗ ಎಂದ ಅವರು, ಆ ಎರಡು ಕುಟುಂಬಗಳು ಕಾಶ್ಮೀರವನ್ನು ಅಪ್ಪನ ಆಸ್ತಿ ಎಂದುಕೊಂಡು ಬಿಟ್ಟಿದ್ದಾರೆ ಎಂದು ಅಬ್ಬರಿಸಿದರು.
'ಪಂಚಾಯಿತಿ ಚುನಾವಣೆ ಬೇಡ, ಲೋಕಸಭೆ, ವಿಧಾನಸಭೆ ಬೇಕು'
ಪಂಚಾಯಿತಿ ಚುನಾವಣೆ ಬೇಡ, ಆದರೆ ತಮ್ಮ ಕುರ್ಚಿಯ ವಿಷಯ ಬಂದಾಗ ಮಾತ್ರ ಚುನಾವಣೆ ಬೇಕು ಇದೆಂತಹಾ ಪ್ರಜಾಪ್ರಭುತ್ವ ಎಂದ ಅವರು, ನಾವು ಭಾರತದ ಭಾಗ ಆಗಲು ಬಯಸಿದ್ದೆವು ಅದು ಇಂದು ಆಗಿದೆ. ಯಾರು ಗೊಂದಲದಲ್ಲಿದ್ದೀರೋ ಅವರೂ ಸಹ ಈ ವಿಧೇಯಕದ ಪರ ಮತ ಹಾಕಿ ಎಂದು ಮನವಿ ಮಾಡಿದರು.
'ಮರಳಿ ಗೂಡು ಸೇರುತ್ತೇವೆ' ಕಾಶ್ಮೀರದ ಗಾಯಕಿ ಕಣ್ತುಂಬಿ ಹೇಳಿದ ಮಾತು...
ಬಿಜೆಪಿ ನಾಯಕರಿಂದ ಭಾರಿ ಬೆಂಬಲ
ಜಮ್ಯಾಂಗ್ ಅವರ ಭಾಷಣಕ್ಕೆ ಸದನದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸದಸ್ಯರು ಭಾರಿ ಕರತಾಡನ ಮಾಡಿದರು. ವ್ಯಂಗ್ಯ, ಸಿಟ್ಟು, ಅಂಕಿ-ಅಂಶ, ಕವಿತೆ ಎಲ್ಲವೂ ಒಳಗೊಂಡಿದ್ದ ಅವರ ಭಾಷಣ ಸದನದಲ್ಲಿ ಉತ್ತಮ ಪರಿಣಾಮ ಬೀರಿತು. ಮುಂದಿನ ಸಾಲಿನಲ್ಲಿ ಕೂತಿದ್ದ ಬಿಜೆಪಿಯ ನಾಯಕರುಗಳಾದ ಅಮಿತ್ ಶಾ, ರಾಜನಾಥ ಸಿಂಗ್, ಸ್ಮೃತಿ ಇರಾನಿ ಇನ್ನೂ ಹಲವರು ಪದೇ-ಪದೇ ಮೇಜು ಕುಟ್ಟಿ ಯುವ ಸಂಸದನ ಮಾತಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಮ್ಯಾಂಗ್ ಅವರ ಭಾಷಣ ಮುಗಿಯುತ್ತಿದ್ದಂತೆ ಸ್ಮೃತಿ ಇರಾನಿ ಅವರು, ಜಮ್ಯಾಂಗ್ ಬಳಿ ತೆರಳಿ ಅಭಿನಂದನೆ ಸಲ್ಲಿಸಿದರು. ಹಲವು ಬಿಜೆಪಿ ಪ್ರಮುಖರು ಜಮ್ಯಾಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು.