ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?
ನವದೆಹಲಿ, ನವೆಂಬರ್ 08: ಅಪನಗದೀಕರಣಕ್ಕೆ ಒಂದು ವರ್ಷ ಸಂದಿರುವ ಹೊತ್ತಲ್ಲಿ ಹಲವು ಗಣ್ಯರು ನೋಟು ನಿಷೇಧದ ಕುರಿತು ತಮ್ಮ ಅನಿಸಿಕೆಯನ್ನು ಹೊರಹಾಕಿದ್ದಾರೆ. ಕೆಲವರು ಅಪನಗದೀಕರಣ ಸರ್ಕಾರದ ಯಶಸ್ವೀ ನಡೆ, ಈ ನಡೆಯಿಂದ ಭಾರತದ ಆರ್ಥಿಕ ವ್ಯವಸ್ಥೆ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ ಎಂದರೆ, ಮತ್ತೆ ಕೆಲವರು ಅಪನಗದೀಕರಣವನ್ನು ಒಂದು ದುರಂತ ಎಂದು ವ್ಯಾಖ್ಯಾನಿಸಿದ್ದಾರೆ.
ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ
ಸಾಮಾಜಿಕ ಜಾಲತಾಣಗಳಲ್ಲೂ ಅಪನಗದೀಕರಣ ಸಾಕಷ್ಟು ಸುದ್ದಿ ಮಾಡುತ್ತಿದೆ. 500 ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧಿಸಿ, ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸುತ್ತಿದ್ದಂತೆಯೇ ಲಕ್ಷಾಂತರ ಜನ ಮನೆಯಿಂದ ಹೊರಗೋಡಿ, ಎಟಿಎಂ ಮುಂದೆ ಸಾಲುಗಟ್ಟಿದ್ದರು. ನಗದು ವ್ಯವಹಾರಕ್ಕೆ ಬ್ರೇಕ್ ಬಿತ್ತು. ಬ್ಯಾಂಕುಗಳ ನೌಕರರು ತಿಂಗಳಾನುಗಟ್ತಲೆ ಒಂದು ದಿನವೂ ರಜೆಯಿಲ್ಲದ ದುಡಿಯಬೇಕಾಯ್ತು. ಕೆಲವು ಸಾವಿನ ಪ್ರಕರಣಗಳೂ ಕೇಳಿಬಂದವು.
ಅಪನಗದೀಕರಣದ ಮೂಲ ಉದ್ದೇಶ ಕಪ್ಪು ಹಣದ ನಿಯಂತ್ರಣ, ತನ್ಮೂಲಕ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಅಂಕುಷ ಹಾಕುವುದಾಗಿತ್ತು. ಈ ಉದ್ದೇಶ ಈಡೇರಿದೆಯಾ ಎಂದರೆ ಬಿಜೆಪಿ ನಾಯಕರು ಎದೆತಟ್ಟಿಕೊಂದು 'ಹೌದು' ಎನ್ನುತ್ತಾರೆ. ಇವೆಲ್ಲ ಬೊಗಳೆ ಎಂಬುದು ಪ್ರತಿಪಕ್ಷಗಳ ಟೀಕೆ. ಒಟ್ಟಿನಲ್ಲಿ ಈ ಪರ ವಿರೋಧದ ಟೀಕೆಯ ನಡುವಲ್ಲೇ ಅಪನಗದೀಕರಣದ ಒಂದು ವರ್ಷ ಮುಗಿದಿದೆ. ಈ ಸಂದರ್ಭದಲ್ಲಿ ನೋಟು ನಿಷೇಧದ ಬಗ್ಗೆ ಗಣ್ಯರು ಏನಂತಾರೆ ಎಂಬುದನ್ನು ನೀವೇ ಕೇಳಿ...
ಭಯೋತ್ಪಾದನೆ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ
ಅಪನಗದೀಕರಣ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಏಕೆಂದರೆ ಈ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ಸಿಗುತ್ತಿದ್ದ ಹಣದ ಪೂರೈಕೆ ನಿಂತಿದೆ ಎಂದು ಅವರು ನೋಟು ನಿಷೇಧವನ್ನು ಶ್ಲಾಘಿಸಿದ್ದಾರೆ.
ಕಪ್ಪು ಹಣದ ವಿರುದ್ಧ ಮುಕ್ತ ಹೋರಾಟ
ಅಪನಗದೀಕರಣ ಎಂಬುದು ಕಪ್ಪು ಹಣದ ವಿರುದ್ಧದ ಪರಿಣಾಮಕಾರಿ ಹೋರಾಟ. ಒಂದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ದಿಟ್ಟ ನಡೆ ನಿಜಕ್ಕೂ ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಗ್ ಅಭಿಪ್ರಾಯಪಟ್ಟಿದ್ದಾರೆ.
ಕಪ್ಪು ಹಣವೊಂದು ಶಾಪ
ಕಪ್ಪುಹಣವೆಂಬುದು ಬಡವರಿಗೆ ಒಂದು ಶಾಪ. ಇದು ಶ್ರೀಸಾಮಾನ್ಯನ ಬದುಕನ್ನು ಸಂಕಷ್ಟಕ್ಕೆ ನೂಕಿತ್ತು. ಅಪನಗದೀಕರಣವೆಂಬುದು ಈ ಸಂಕಷ್ಟವನ್ನು ದೂರಮಾಡುವಲ್ಲಿ ಹೋರಾಡಿದೆ. ಆ ಕಾರಣದಿಂದ ನ.8 ನ್ನು ಕಪ್ಪುಹಣ ವಿರೋದಿ ದಿನವನ್ನಾಗಿ ಆಚರಿಸೋಣ ಎಂದು ಬಿಜೆಪಿ ನಾಯಕ ಪಿ.ಮುರಳೀಧರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಕಪ್ಪು ಹಣ ಕಳೆದುಕೊಂಡವರಿಗೆ ಭೀತಿ!
ಇಡೀ ದೇಶವೂ ಅಪನಗದೀಕರಣವನ್ನು ಒಪ್ಪಿಕೊಂಡಿದೆ. ಆದರೆ ಯಾರು ತಮ್ಮ ಕಪ್ಪು ಹಣವನ್ನು ಕಳೆದುಕೊಂಡಿದ್ದಾರೋ ಅಂಥವರು ಅಪನಗದೀಕರಣದ ಯಶಸಸ್ಸನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಅಷ್ಟೆ, ಎಂದು ಬಿಜೆಪಿ ಮುಖಂಡ ಶಹನ್ವಾಜ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.