ಕಂಡು ಕೇಳರಿಯದ ದೆಹಲಿ ವಾಯುಮಾಲಿನ್ಯದ ಹಿಂದೆ ಪಾಕ್, ಚೀನಾ!
ನವದೆಹಲಿ, ನ 6: ದೇಶದ ರಾಜಧಾನಿ ನವದೆಹಲಿಯಲ್ಲಿ ಕಂಡು ಕೇಳರಿಯದ ವಾಯು ಮಾಲಿನ್ಯಕ್ಕೆ ಬಿಜೆಪಿ ಮುಖಂಡರೊಬ್ಬರು ತನ್ನದೇ ರೀತಿಯಲ್ಲಿ ಕಾರಣ ಕಂಡುಕೊಂಡಿದ್ದಾರೆ.
ಮೀರಠ್ ನಲ್ಲಿ ಮಾತನಾಡುತ್ತಿದ್ದ ಬಿಜೆಪಿ ಮುಖಂಡ ವಿನೀತ್ ಅಗರವಾಲ್, "ಹರಿಯಾಣ ಮತ್ತು ಪಂಜಾಬ್ ನಲ್ಲಿ ಅಕ್ಟೋಬರ್, ನವೆಂಬರ್ ನಲ್ಲಿ ಬೆಳೆ ಖಟಾವ್ ಆದ ನಂತರ, ಗದ್ದೆಗೆ ಬೆಂಕಿ ಹಚ್ಚುವ ಪರಿಪಾಠ ಹಿಂದಿನಿಂದಲೂ ಇದೆ. ಅದು ಈ ಬಾರಿ ಆರಂಭವಾಗಿದ್ದಲ್ಲ" ಎಂದು ಹೇಳಿದ್ದಾರೆ.
ವಾಯುಮಾಲಿನ್ಯ ಹೆಚ್ಚಳ: ತಾಜ್ಮಹಲ್ ಗೇಟಿನ ಬಳಿ ಗಾಳಿ ಶುದ್ಧೀಕರಣ ಘಟಕ
"ಈ ಹಿಂದೆ ಆಗದಿದ್ದದ್ದು ಈ ಬಾರಿ ಇಷ್ಟು ಮಾಲಿನ್ಯವೇಕೆ" ಎಂದು ಪ್ರಶ್ನಿಸಿರುವ ವಿನೀತ್, "ಇದು ದುಷ್ಟ ಪಾಕಿಸ್ತಾನ ಮತ್ತು ಪಕ್ಕದ ಚೀನಾದಿಂದ ಯಾಕಾಗಿರಬಾರದು" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
"ಯುದ್ದದಲ್ಲಿ ನಮ್ಮನ್ನು ಜಯಿಸಲು ಸಾಧ್ಯವಿಲ್ಲ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿರುವ ವಿಚಾರ. ಹಾಗಾಗಿ, ವಾಯು ಮಾಲಿನ್ಯದ ಮೂಲಕ ಸೇಡು ತೀರಿಸಿಕೊಳ್ಳುವ ಸಾಧ್ಯತೆ ಏಕೆ ಇಲ್ಲದಿಲ್ಲ" ಎನ್ನುವ ಪ್ರಶ್ನೆಯನ್ನು ಬಿಜೆಪಿ ಮುಖಂಡ ಎತ್ತಿದ್ದಾರೆ.
ವಾಯು ಮಾಲಿನ್ಯ ಹೊಗಲಾಡಿಸಲು ಹೋಮ ಮಾಡಿ ಎಂದ ಬಿಜೆಪಿ ಮುಖಂಡ
"ನನ್ನ ಈ ಹೇಳಿಕೆಯನ್ನು ಮೋದಿ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು" ಎಂದು ಮನವಿ ಮಾಡಿರುವ ಅಗರವಾಲ್, "ಮೋದಿ ಪ್ರಧಾನಿ, ಅಮಿತ್ ಶಾ ಗೃಹಸಚಿವರಾದ ನಂತರ, ಪಾಕಿಸ್ತಾನ ತೀವ್ರ ಹತಾಶೆಗೊಂಡಿದೆ" ಎಂದು ಹೇಳಿದ್ದಾರೆ.
"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ಅದು ಈಗ ವಿಚಾರವಲ್ಲ. ಈಗ ಕೃಷಿಕರ ಯುಗ. ಮೋದಿ ಮತ್ತು ಶಾ, ಕೃಷ್ಣಾರ್ಜುನರಂತೆ. ಇವರಿಬ್ಬರು ಸೇರಿ, ದೆಹಲಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ" ಎನ್ನುವ ವಿಶ್ವಾಸದ ಮಾತನ್ನು ವಿನೀತ್ ಅಗರವಾಲ್ ಆಡಿದ್ದಾರೆ.