'ಶರದ್ ಹೇಳಿಕೆ ಮೋದಿ ವಿರುದ್ಧವಲ್ಲ, ರಾಮನ ವಿರುದ್ಧ': ಉಮಾಭಾರತಿ
ದೆಹಲಿ, ಜುಲೈ 20: ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವರ್ ಹೇಳಿಕೆಗೆ ಬಿಜೆಪಿ ನಾಯಕಿ ಉಮಾ ಭಾರತಿ ತಿರುಗೇಟು ನೀಡಿದ್ದಾರೆ.
ರಾಮ ಜನ್ಮಭೂಮಿ ಟ್ರಸ್ಟ್ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಕೆಲಸಕ್ಕೆ ಅಡಿಪಾಯ ಹಾಕಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಶರದ್ ಪವರ್ ''ದೇವಾಲಯವನ್ನು ನಿರ್ಮಿಸುವುದರಿಂದ ಕೋವಿಡ್ ನಿರ್ಮೂಲನೆಗೆ ಸಹಾಯವಾಗುತ್ತದೆ ಎಂದು ಕೆಲವರು ಭಾವಿಸಿದ್ದಾರೆ' ಎಂಬ ಹೇಳಿಕೆ ನೀಡಿದ್ದರು.
ರಾಮ ಮಂದಿರ ನಿರ್ಮಿಸಿದರೆ ಕೊವಿಡ್-19 ಹೋಗಲಾಡಿಸಲು ಸಾಧ್ಯವೆ?
ಎನ್ಸಿಪಿ ನಾಯಕ ಮುಖ್ಯಸ್ಥನ ಈ ಹೇಳಿಕೆಗೆ ಬಿಜೆಪಿ ನಾಯಕಿ ಉಮಾ ಭಾರತಿ ಪ್ರತಿಕ್ರಿಯಿಸಿ ''ಅವರ ಹೇಳಿಕೆ ಮೋದಿ ವಿರುದ್ಧವಲ್ಲ, ರಾಮನ ವಿರುದ್ಧ'' ಎಂದಿದ್ದಾರೆ.
'ಕೊರೊನಾ ವೈರಸ್ ನಿರ್ಮೂಲನೆ ಮಾಡುವುದು ಮಹಾರಾಷ್ಟ್ರ ಸರ್ಕಾರದ ಆಧ್ಯತೆಯಾಗಿದೆ. ಆದರೆ ಕೆಲವರು ದೇವಾಲಯವನ್ನು ನಿರ್ಮಿಸುವುದು ಅದರ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ' ಎಂದು ಶರದ್ ಪವರ್ ಹೇಳಿದ್ದರು.
ಇಷ್ಟೊತ್ತಿಗಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಕೊರೊನಾ ವೈರಸ್ ಲಾಕ್ಡೌನ್ ಕಾರಣ ಕಾರ್ಯಾರಂಭವನ್ನು ಮುಂದೂಡಲಾಗಿತ್ತು. ಇದೀಗ, ರಾಮಮಂದಿರಕ್ಕೆ ಅಡಿಪಾಯ ಹಾಕುವ ಕಾರ್ಯಕ್ರಮ ನಿಗದಿ ಮಾಡುವ ಬಗ್ಗೆ ಶನಿವಾರ ಟ್ರಸ್ಟ್ ಸದಸ್ಯರು ಸಭೆ ಸೇರಿದ್ದರು.
ಈ ಸಭೆಯಲ್ಲಿ ಅಂತಿಮ ದಿನಾಂಕ ನಿಗದಿ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರಿಗೆ ಆಹ್ವಾನ ಸಹ ನೀಡಲಾಗಿದೆಯಂತೆ. ಆಗಸ್ಟ್ ಮೊದಲ ವಾರದಲ್ಲಿ ದೇಗುಲ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.