ಮಾನಹಾನಿ ಪ್ರಕರಣ: ಬೇಷರತ್ ಕ್ಷಮೆ ಕೋರಿದ ಕಪಿಲ್ ಮಿಶ್ರಾ
ನವದೆಹಲಿ, ಅಕ್ಟೋಬರ್ 29: ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ವಿರುದ್ಧ ಮಾನಹಾನಿ ಅಪರಾಧ ಪ್ರಕರಣವನ್ನು ದೆಹಲಿ ನ್ಯಾಯಾಲಯ ಅಂತ್ಯಗೊಳಿಸಿದೆ. ಎಎಪಿ ಮುಖಂಡ ಮತ್ತು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಕಪಿಲ್ ಮಿಶ್ರಾ ಬೇಷರತ್ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
ತಮ್ಮ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕಪಿಲ್ ಮಿಶ್ರಾ ವಿರುದ್ಧ 2017ರಲ್ಲಿ ಜೈನ್ ದೂರು ಸಲ್ಲಿಸಿದ್ದರು. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಮುಂದೆ ಬುಧವಾರ ಕಪಿಲ್ ಅವರು ಬೇಷರತ್ ಕ್ಷಮೆ ಕೋರಿದರು.
ಅರ್ನಬ್ ಗೋಸ್ವಾಮಿ ವಿರುದ್ಧ 200 ಕೋಟಿ ರು ಮಾನನಷ್ಟ ಮೊಕದ್ದಮೆ
'ಆರೋಪಿಯು (ಕಪಿಲ್ ಮಿಶ್ರಾ) ಸಲ್ಲಿಸಿರುವ ಹೇಳಿಕೆಯಂತೆ ಅವರು ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಕೋರಲು ಸಿದ್ಧರಿದ್ದಾರೆ. ದೂರುದಾರ ಸತ್ಯೇಂದರ್ ಜೈನ್ ಅವರು ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದ್ದು, ಹಾಲಿ ದೂರನ್ನು ಹಿಂದಕ್ಕೆ ಪಡೆದುಕೊಳ್ಳಬಹುದು' ಎಂದು ನ್ಯಾಯಾಲಯ ಹೇಳಿತು.
ಮಿಶ್ರಾ ಮತ್ತು ಜೈನ್ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ದೂರುದಾರರು ಅರ್ಜಿ ಹಿಂದಕ್ಕೆ ಪಡೆದುಕೊಂಡ ಬಳಿಕ ಮಾನಹಾನಿ ಪ್ರಕರಣವನ್ನು ಕೈಬಿಡಲಾಯಿತು.
2017ರಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 2ಕೋಟಿ ರೂ ಲಂಚದ ಹಣವನ್ನು ಜೈನ್ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿದ್ದರು. ಕೇಜ್ರಿವಾಲ್ ಅವರ ಸಂಬಂಧಿಯ 50 ಕೋಟಿ ರೂ ಮೌಲ್ಯದ ಭೂಮಿ ಡೀಲ್ಅನ್ನು ಸರಿಪಡಿಸಿಕೊಟ್ಟಿದ್ದಾರೆ ಎಂದೂ ಹೇಳಿದ್ದರು.