ಸಂಪುಟ ವಿಸ್ತರಣೆ ಹೈಕಮಾಂಡ್ ನಿರಾಸಕ್ತಿ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ
ನವದೆಹಲಿ, ಆಗಸ್ಟ್ 16: ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಕೇಳಲು ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರಿಗೆ ನಿರಾಸೆಯಾಗಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಷ್ಟೇನೂ ಆಸಕ್ತಿ ತೋರಿಲ್ಲವಾದ್ದರಿಂದ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ನಿನ್ನೆ ಸಂಜೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದಾರೆ. ಇಂದು ಸಂಜೆ ಪಕ್ಷದ ವರಿಷ್ಠರ ಭೇಟಿ ಮಾಡಬೇಕಿತ್ತು. ಆದರೆ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಮಯ ನೀಡಿಲ್ಲ.
ಹಿರಿಯ ಶಾಸಕರಿಗೆ ದೊಡ್ಡ ಆಘಾತ: ಯಡಿಯೂರಪ್ಪ ಸಂಪುಟ ವಿಸ್ತರಣೆ ಸರ್ಕಸ್
ಇಂದು ಸಂಜೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಯಡಿಯೂರಪ್ಪ ಅವರ ಸಭೆ ನಿಗದಿಯಾಗಿತ್ತು. ಆದರೆ ಈ ಸಭೆ ರದ್ದಾಗಿದೆ. ಅಷ್ಟೆ ಅಲ್ಲದೆ ನಾಳೆ ಅಮಿತ್ ಶಾ ಅವರೊಂದಿಗೆ ಇದ್ದ ಸಭೆಯೂ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಡಿಯೂರಪ್ಪ ಅವರು ಪಟ್ಟಿಯೊಂದನ್ನು ತಯಾರಿಸಿಕೊಂಡು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಆದರೆ ಈ ಪಟ್ಟಿ ಹೈಕಮಾಂಡ್ಗೆ ಪೂರ್ಣ ಒಪ್ಪಿಗೆ ಇಲ್ಲ ಎನ್ನಲಾಗುತ್ತಿದೆ. ಹಾಗಾಗಿಯೇ ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿದೆ.
ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್: ಇಲ್ಲಿದೆ ಸಂಭಾವ್ಯ ಪಟ್ಟಿ
ಹೈಕಮಾಂಡ್ ಒಲವಿರುವ ಪಟ್ಟಿಯಲ್ಲಿ ಹಿರಿಯರನೇಕರಿಗೆ ವಿಶ್ರಾಂತಿ ನೀಡಲಾಗಿದೆ. ಇದು ಯಡಿಯೂರಪ್ಪ ಅವರಿಗೆ ಒಪ್ಪಿತವಿಲ್ಲ. ಅಷ್ಟೆ ಅಲ್ಲದೆ ಹಲವು ಯಡಿಯೂರಪ್ಪ ಆಪ್ತರಿಗೆ ಸಂಪುಟ ಅವಕಾಶ ನೀಡಲು ಹೈಕಮಾಂಡ್ ನಕಾರ ಹೇಳಿದೆ.
ಆಗಸ್ಟ್ 18 ಅಥವಾ 19 ರಂದು ಸಂಪುಟ ವಿಸ್ತರಣೆ ಪಕ್ಕಾ ಎಂದು ಈ ಹಿಂದೆ ಯಡಿಯೂರಪ್ಪ ಅವರೇ ಹೇಳಿದ್ದರು. ಆದರೆ ಹೊಸ ಬೆಳವಣಿಗೆಗಳ ಪ್ರಕಾರ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬ ಆಗಲಿದೆ.
ಸಂಪುಟ ವಿಸ್ತರಣೆ: ಇಂದು ರಾತ್ರಿ ಯಡಿಯೂರಪ್ಪ ದೆಹಲಿಗೆ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಮೂರು ವಾರಕ್ಕೂ ಹೆಚ್ಚಾಗಿದೆ. ಆದರೆ ಈ ವರೆಗೆ ಸಂಪುಟ ವಿಸ್ತರಣೆ ಆಗಿಲ್ಲ. ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ. ಆದರೆ ಹೈಕಮಾಂಡ್ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರದಿರುವುದು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.