'ಪ್ರಧಾನಿಯನ್ನು ಹೇಡಿ ಅಂದ ಕೇಜ್ರಿವಾಲ್ ಕ್ಷಮೆ ಕೇಳಲಿ'
ನವದೆಹಲಿ, ಡಿಸೆಂಬರ್ 15 : ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಹೇಡಿ, ಸೈಕೋಪಾತ್' ಎಂದು ಜರಿದಿರುವ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಕೂಡಲೆ ಕ್ಷಮೆ ಕೇಳಬೇಕೆಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ.
ಅರವಿಂದ್ ಕೇಜ್ರಿವಾಲ್ ಅವರ ನಂಬಿಗಸ್ತ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿಯ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇಜ್ರಿವಾಲ್, ನನ್ನ ಕಚೇರಿಯ ಕಡತಗಳನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ದಾಳಿ ನಡೆಸಿದೆ. ಈ ದಾಳಿ ನಡೆಸಿದ ಮೋದಿ ಹೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಹೇಡಿ' ಎಂದು ಹೀಯಾಳಿಸಿದ್ದು ನಾಚಿಕೆಗೇಡಿನದ್ದು, ಇಂತಹ ಪದ ಬಳಸುವ ಅಗತ್ಯವೇ ಇರಲಿಲ್ಲ. ಅವರು ಪ್ರಧಾನಿಯ ಕ್ಷಮೆ ಕೇಳಲೇಬೇಕು" ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ರವಿ ಶಂಕರ್ ಪ್ರಸಾದ್ ಅವರು ಆಗ್ರಹಿಸಿದರು. [ಅರವಿಂದ್ vs ಮೋದಿ ಟ್ರೆಂಡಿಂಗ್, ಬಿಸಿ ಬಿಸಿ ಚರ್ಚೆ]
ರಾಜೇಂದ್ರ ಕುಮಾರ್ ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳುವ ಮುನ್ನ ಅರವಿಂದ್ ಕೇಜ್ರಿವಾಲ್ ಅವರು ಎಚ್ಚರಿಕೆ ವಹಿಸಿಲ್ಲ. ಆದರೆ, ಈ ಪ್ರಕರಣಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂದು ರವಿ ಶಂಕರ್ ಪ್ರಸಾದ್ ವಿವರಣೆ ನೀಡಿದರು.
ಪ್ರಥಮ ಮಾಹಿತಿ ವರದಿ ದಾಖಲಿಸುವ ಮುನ್ನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ವಿರುದ್ಧ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಸಿಬಿಐ ಪರಿಶೀಲಿಸಿದೆ. ನ್ಯಾಯಾಲಯ ಸರ್ಚ್ ವಾರಂಟ್ ನೀಡಿದ ನಂತರವೇ ಸಿಬಿಐ ಅವರ ಕಚೇರಿಯ ಮೇಲೆ ದಾಳಿ ನಡೆಸಿದೆ. ಕಾನೂನಿನ ಪ್ರಕಾರ, ದಾಳಿ ಮಾಡುವ ಮುನ್ನ ಅವರ ಪರವಾನಗಿ ಕೇಳುವ ಅಗತ್ಯವಿಲ್ಲ ಎಂದು ಪ್ರಸಾದ್ ನುಡಿದರು. [ಕಿಚ್ಚು ಹಚ್ಚಿದ ಸಿಬಿಐ ದಾಳಿ, ಪ್ರಮುಖ ಘಟನಾವಳಿ]
ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಕೇಜ್ರಿವಾಲ್ ಅವರ ಹೇಳಿಕೆಗೆ ಪ್ರತಿಯಾಗಿ, ಸಿಬಿಐ ದಾಳಿಗೆ ಕೇಜ್ರಿವಾಲ್ ನೀಡಿರುವ ಪ್ರತಿಕ್ರಿಯೆ ಅಸಹ್ಯಕರವಾದದ್ದು. ನಂಬಲರ್ಹ ದೂರು ಬಂದ ನಂತರವೇ ಸಿಬಿಐ ಕ್ರಮ ತೆಗೆದುಕೊಂಡಿದೆ. ಅವರು ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದರೆ, ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಈ ಪ್ರಕರಣ ಕೇಂದ್ರ ಸರಕಾರ ಮತ್ತು ದೆಹಲಿ ಸರಕಾರದ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಎರಡೂ ಸರಕಾರಗಳ ನಡುವಿನ ತಿಕ್ಕಾಟಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಇದೀಗ ಪತ್ರಿಕಾಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು ಮೋದಿ ಸರಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ['ಮೋದಿ ತಪ್ಪು ಒಪ್ಪಿಕೊಂಡ್ರೆ ನಾನು ಕ್ಷಮೆ ಕೇಳುತ್ತೇನೆ']