ಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿ
ನವದೆಹಲಿ, ಮಾರ್ಚ್ 23: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಅತ್ಯಂತ ಅಚ್ಚರಿ ಮೂಡಿಸಿದ್ದು, 'ಎಲ್ ಕೆ ಅಡ್ವಾಣಿ ಆವರ ಬದಲಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದು!'
ಈ ಕುರಿತು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂದಿದ್ದವು. ಬಿಜೆಪಿ ತನ್ನ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಪರಿ ಇದು ಎಂದು ಟೀಕಿಸಿದ್ದವು. ಆದರೆ ಈ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ವಿಪಕ್ಷಗಳ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ.
ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಆರು ಬಾರಿ ಜಯಗಳಿಸುವಲ್ಲಿ ಅಮಿತ್ ಶಾ ಕೊಡುಗೆ ಸಾಕಷ್ಟಿದೆ. ವಿಪಕ್ಷಗಳು ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆ
ಗಾಂಧಿನಗರದಿಂದ ಅಮಿತ್ ಶಾ ಅವರನ್ನು ಕಣಕ್ಕಿಳಿಸಿರುವ ತನ್ನ ನಡೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.
ಅಡ್ವಾಣಿ ಗೆಲುವಿಗೆ ಶಾ ಕಾರಣ
ಅಡ್ವಾಣಿ ಅವರ ಪ್ರತಿ ಚುನಾವಣೆಯ ಗೆಲುವಿನ ಹಿಂದೆಯೂ ಇದ್ದಿದ್ದು ಅಮಿತ್ ಶಾ. ಅವರೇ ಗಾಂಧಿನಗರ ಕ್ಷೇತ್ರದ ಉಸ್ತುವಾರಿ ವಹಿಸಿ, ಕೆಲಸ ಮಾಡಿದ್ದರು. ಅಡ್ವಾಣಿ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿ, ಪ್ರವಾಸಕ್ಕೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಶಾ ಅವರೇ ಮುಂದೆ ನಿಂತು ಕೆಲಸ ಮಾಡಿ, ಅಡ್ವಾಣಿ ಅವರ ಗೆಲುವಿಗೆ ಶ್ರಮಿಸಿದ್ದರು ಎಂದು ಜಾವಡೇಕರ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ಬಿಜೆಪಿ ಭೀಷ್ಮ ಅಡ್ವಾಣಿಗೆ ಟಿಕೆಟ್ ಇಲ್ಲ
ರಾಜ್ಯ ಬಿಜೆಪಿ ನಾಯಕರ ಒತ್ತಾಯ
ಅಡ್ವಾಣಿ ಅವರ ಕ್ಷೇತ್ರದಲ್ಲಿ ಅಮಿತ್ ಶಾ ಅವರನ್ನು ಕಣಕ್ಕಿಳಿಸುವುದು ಕೇವಲ ಹೈಕಮಾಂಡ್ ನಿರ್ಧಾರವಲ್ಲ. ರಾಜ್ಯ ಬಿಜೆಪಿ ನಾಯಕರಿಂದಲೂ ಈ ಬಗ್ಗೆ ಒತ್ತಾಯವಿತ್ತು. ಮಾರ್ಚ್ 16 ರಂದು ಬಿಜೆಪಿ ಮೇಲ್ವಿಚಾರಕರ ತಂಡವೊಂದನ್ನು ಗಾಂಧಿನಗರಕ್ಕೆ ಗಳಿಸಿತ್ತು. ಆ ಸಂದರ್ಭದಲ್ಲೂ ಅಮಿತ್ ಶಾ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಹೆಚ್ಚಿನ ಕಾರ್ಯಕರ್ತರು ಹೇಳಿದ್ದರು ಎಂದು ರಾಜ್ಯ ಬಿಜೆಪಿ ಮುಖಂಡರಾದ ನಿಮಾಬೆನ್ ಆಚಾರ್ಯ ಹೇಳಿದರು.
91 ವರ್ಷ ವಯಸ್ಸಿನ ಅಡ್ವಾಣಿ
"ಮನಮೋಹನ್ ಸಿಂಗ್ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ, 'ಅವರಿಗೆ 86 ವರ್ಷ ವಯಸ್ಸಾಯ್ತು. ಅವರು ವಿಶ್ರಾಂತಿ ತೆಗೆದುಕೊಳ್ಳಲಿ' ಎನ್ನುತ್ತೀರಿ. ಅದೇ ಅಡ್ವಾಣಿ ಅವರು 91 ನೇ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸದಿದ್ದರೆ ಅದು ಬಿಜೆಪಿಯ ಕುತಂತ್ರ, ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎನ್ನುತ್ತೀರಿ' ನಿಮ್ಮ ತರ್ಕವೇ ಅರ್ಥವಾಗೋಲ್ಲ" ಎಂದು ಬಿಜೆಪಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು.
184 ಅಭ್ಯರ್ಥಿ ಮೊದಲ ಪಟ್ಟಿ ಬಿಡುಗಡೆ
ಮಾರ್ಚ್ 16 ರಂದು ಬಿಜೆಪಿ ಬಿಡುಗಡೆ ಮಾಡಿದ್ದ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 184 ಹೆಸರುಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(ವಾರಣಾಸಿ), ಸ್ಮೃತಿ ಇರಾನಿ(ಅಮೇಥಿ) ಸೇರಿದಂತೆ ಹಲವು ಪ್ರಮುಖರ ಹೆಸರಿತ್ತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.