ಬಿಜೆಪಿ ಎಂದಿಗೂ ಮೋದಿ, ಅಮಿತ್ ಶಾ ಪಕ್ಷ ಆಗಲಾರದು: ನಿತಿನ್ ಗಡ್ಕರಿ
Recommended Video
ನವದೆಹಲಿ, ಮೇ 11: ಬಿಜೆಪಿಯು ಸಿದ್ಧಾಂತ ಆಧಾರಿತ ಪಕ್ಷ. ಅದು ಎಂದಿಗೂ ವ್ಯಕ್ತಿ ಕೇಂದ್ರಿತ ಆಗಲಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಬಿಜೆಪಿ 'ಮೋದಿ ಕೇಂದ್ರಿತ' ಆಗುತ್ತಿದೆ ಎಂಬ ಆರೋಪಗಳನ್ನು ನಿತಿನ್ ಗಡ್ಕರಿ ತಳ್ಳಿಹಾಕಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಹಿಂದೆಯೂ ಅಟಲ್ ಬಿಹಾರಿ ವಾಜಪೇಯಿ ಅಥವಾ ಎಲ್ಕೆ ಅಡ್ವಾಣಿ ಅವರ ಪಕ್ಷವಾಗಿರಲಿಲ್ಲ. ಮುಂದೆ ಅಮಿತ್ ಶಾ ಅಥವಾ ನರೇಂದ್ರ ಮೋದಿ ಅವರ ಪಕ್ಷವೂ ಆಗಿರಲು ಸಾಧ್ಯವಿಲ್ಲ ಎಂದು ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿಯು ಸಿದ್ಧಾಂತ ಆಧಾರಿತ ಪಕ್ಷ. ಬಿಜೆಪಿಯು ಮೋದಿ ಅವರ ಕೇಂದ್ರಿತವಾಗಿದೆ ಎಂಬುದು ತಪ್ಪು. ಮಿಗಿಲಾಗಿ ಬಿಜೆಪಿ ಮತ್ತು ನರೇಂದ್ರ ಮೋದಿ ಪರಸ್ಪರ ಪೂರಕವಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಮಾತನ್ನೇ ಪುನರುಚ್ಚರಿಸಿದ ನಿತಿನ್ ಗಡ್ಕರಿ
ಕಾಂಗ್ರೆಸ್ ಅಧ್ಯಕ್ಷ ಡಿಕೆ ಬರೂವಾ ಅವರು 1976ರಲ್ಲಿ ನೀಡಿದ 'ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ' ಘೋಷಣೆಯಂತೆ, 'ಮೋದಿ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಮೋದಿ' ಎಂಬ ರೀತಿ ಬಿಜೆಪಿ ಆಗಿದೆಯೇ ಎಂಬ ಪ್ರಶ್ನೆಗೆ ಗಡ್ಕರಿ, ಪಕ್ಷವು ಎಂದಿಗೂ 'ವ್ಯಕ್ತಿ ಕೇಂದ್ರಿತ' ಆಗಲಾರದು ಎಂದು ಸ್ಪಷ್ಟಪಡಿಸಿದರು.
'ಬಿಜೆಪಿ ಎಂದಿಗೂ ವ್ಯಕ್ತಿ ಕೇಂದ್ರಿತವಾಗಲಾರದು. ಇದು ಸಿದ್ಧಾಂತ ಅಧಾರಿತ ಪಕ್ಷ. ಬಿಜೆಪಿಯಲ್ಲಿ ಎಂದಿಗೂ 'ಕುಟುಂಬ ಆಡಳಿತ' ಇರಲಾರದು. ಪಕ್ಷವು ಮೋದಿ ಕೇಂದ್ರಿತವಾಗಿದೆ ಎನ್ನುವುದು ತಪ್ಪು ಗ್ರಹಿಕೆ. ಪಕ್ಷದ ಸಂಸದೀಯ ಮಂಡಳಿಯೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ' ಎಂದು ಹೇಳಿದರು.
ನನಗೆ ಕಾಂಗ್ರೆಸ್ ಬೆಂಬಲವಿದೆ ಎಂದ ಬಿಜೆಪಿಯ ನಿತಿನ್ ಗಡ್ಕರಿ
'ಪಕ್ಷವು ಪ್ರಬಲವಾಗಿದ್ದು, ಅದರ ನಾಯಕ ದುರ್ಬಲನಾಗಿದ್ದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ. ಅದೇ ರೀತಿ ನಾಯಕ ಪ್ರಬಲನಾಗಿದ್ದು ಪಕ್ಷವು ದುರ್ಬಲವಾಗಿದ್ದರೂ ಗೆಲುವು ಅಸಾಧ್ಯ. ಆದರೆ, ಜನಪ್ರಿಯ ನಾಯಕನೊಬ್ಬ ಸಾಮಾನ್ಯವಾಗಿ ಸಹವಾಗಿಯೇ ಮುಂಚೂಣಿಗೆ ಬರುತ್ತಾನೆ' ಎಂದರು.
ವಿರೋಧಿಗಳಿಂದ ಜಾತಿಯತೆ ವಿಷ
ಬಿಜೆಪಿಯು ಐದು ವರ್ಷಗಳಲ್ಲಿನ ತನ್ನ ಕೆಲಸ ಮತ್ತು ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸುವ ಬದಲು ರಾಷ್ಟ್ರೀಯವಾದವನ್ನು ಮುಂದಿಟ್ಟುಕೊಂಡು ಸಾಗುತ್ತಿದೆ ಎಂಬ ಆರೋಪವನ್ನು ಗಡ್ಕರಿ ತಳ್ಳಿಹಾಕಿದರು. ಪಕ್ಷದ ಅಭಿವೃದ್ಧಿ ಅಜೆಂಡಾವನ್ನು ಬೆಂಬಲಿಸಿಯೇ ಜನರು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ತರಲು ಮತ ಚಲಾಯಿಸಲಿದ್ದಾರೆ.
ಬಿಜೆಪಿಯ ಅಭಿವೃದ್ಧಿ ಅಜೆಂಡಾದ ದಿಕ್ಕು ತಪ್ಪಿಸಲು ವಿರೋಧಪಕ್ಷಗಳು ಜಾತೀಯತೆ ಮತ್ತು ಕೋಮುವಾದದ ವಿಷವನ್ನು ಬಿತ್ತಲು ಪ್ರಯತ್ನಿಸುತ್ತಿವೆ. ಆದರೆ, ಜನರು ನಮ್ಮೊಂದಿಗೆ ಇರುತ್ತಾರೆ ಹಾಗೂ ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂಬ ಖಚಿತತೆ ನನಗಿದೆ ಎಂದರು.
ಮೋದಿಗೆ ಪರ್ಯಾಯ ನಾಯಕನಾಗುವ ಆಸೆ ಇಲ್ಲ: ಗಡ್ಕರಿ ಸ್ಪಷ್ಟನೆ
ಬಡವರ, ಶೋಷಿತರ ಏಳ್ಗೆ ಗುರಿ
ರಾಷ್ಟ್ರೀಯವಾದ ನಮ್ಮ ಆತ್ಮ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ನಮ್ಮ ಧ್ಯೇಯ. ಬಡವರಿಗೆ, ಶೋಷಿತರಿಗೆ ಹಾಗೂ ಸಮಾಜದಲ್ಲಿ ಹಿಂದುಳಿದವರಿಗೆ ಆಹಾರ, ಬಟ್ಟೆ ಮತ್ತು ವಸತಿ ಒದಗಿಸುವುದು ನಮ್ಮ ಗುರಿ. ಪ್ರತಿ ಚುನಾವಣೆಯಲ್ಲಿಯೂ ರಾಷ್ಟ್ರೀಯ ಭದ್ರತೆ ಚರ್ಚೆಯ ವಸ್ತುವಾಗಿರುತ್ತದೆ. ನಾವು ಇದನ್ನು ವಿವಾದವನ್ನಾಗಿ ಮಾಡಿಲಿಲ್ಲ ಎಂದು ಹೇಳಿದರು.
ಮೋದಿ ಭಾಷಣಕ್ಕೆ ಸಮರ್ಥನೆ
ಚುನಾವಣಾ ಭಾಷಣಗಳಲ್ಲಿ ಪಾಕಿಸ್ತಾನ ಹಾಗೂ ಸೇನೆಯ ಕುರಿತು ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದನ್ನು ಸಮರ್ಥಿಸಿಕೊಂಡ ಗಡ್ಕರಿ, ಬಾಲಕೋಟ್ ವೈಮಾನಿಕ ದಾಳಿಯ ಕುರಿತು ಮಾಧ್ಯಮಗಳು ಎತ್ತಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ ಎಂದರು.
'ಇತ್ತೀಚೆಗೆ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಭಾರತ ತಕ್ಕ ಉತ್ತರ ನೀಡಿತು. ಈ ವಿಚಾರಗಳು ಬಂದಾಗ ಆಂತರಿಕ ಮತ್ತು ಬಾಹ್ಯ ಭದ್ರತಾ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬರುವುದು ಸಹಜ. ಇದರ ಹೊರತು ನಾವು ರಾಷ್ಟ್ರೀಯವಾದವನ್ನು ಚರ್ಚೆಯ ವಿಷಯವನ್ನಾಗಿ ಮಾಡಿರಲಿಲ್ಲ' ಎಂದು ಹೇಳಿದರು.
ಪುಲ್ವಾಮಾ ದಾಳಿ ಗುಪ್ತಚರ ವೈಫಲ್ಯವಲ್ಲ
ಪುಲ್ವಾಮಾ ದಾಳಿಯು ಗುಪ್ತಚರ ವೈಫಲ್ಯ ಎಂಬುದನ್ನು ಅವರು ನಿರಾಕರಿಸಿದರು. ಭಯೋತ್ಪಾದನಾ ಕೃತ್ಯಗಳನ್ನು ಗುಪ್ತಚರ ವೈಫಲ್ಯ ಎಂದು ಯಾವ ದೇಶವೂ ನೋಡುವುದಿಲ್ಲ. ಅದೊಂದು ಸುದೀರ್ಘ ಹೋರಾಟ. ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಬೇರೆ ದೇಶಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಗೂಢಚಾರಿಕೆ ಎನ್ನುವುದು ದೈವಿಕವಲ್ಲ, ಅದು ಮಾನವಿಕ. ಈ ಚರ್ಚೆಗಳು ಸರ್ಕಾರದೊಳಗೆ ನಡೆಯುವುದರಿಂದ ಅವು ರಹಸ್ಯವಾಗಿರುತ್ತವೆ ಎಂದು ವಿವರಿಸಿದರು.