ದೀದಿ ಬೆಂಬಲಕ್ಕೆ ಕೇಜ್ರಿವಾಲ್, ಛೀಮಾರಿ ಹಾಕಿದ ಬಿಜೆಪಿ
ನವದೆಹಲಿ, ಫೆಬ್ರವರಿ 06: ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಬೆಂಬಲಕ್ಕೆ ನಿಂತು, ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕೂತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಬೆಂಬಲಿಸಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಬಿಜೆಪಿ ಛೀಮಾರಿ ಹಾಕಿದೆ.
ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ
ಒಂದು ಕಾಲದಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರಿ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದರೇ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿಬಿಐ Vs ಮಮತಾ ಕದನದ ಕೇಂದ್ರಬಿಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಯಾರು?
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ವಿಚಾರಣೆಗೆ ಹಾಜರಾಗಬೇಕೆಂದು ಸುಪ್ರೀ ಕೋರ್ಟ್ ಆದೇಶಿಸಿದ್ದನ್ನು, 'ಮಮತಾ ಬ್ಯಾನರ್ಜಿ ಹೋರಾಟಕ್ಕೆ ಸಂದ ಜಯ' ಎಂದು ಕೇಜ್ರಿವಾಲ್ ಬಣ್ಣಿಸಿದ್ದರು. ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟು ಛೀಮಾರಿ ಹಾಕಿದ್ದನ್ನೂ ಯಾವ ರೀತಿಯಲ್ಲಿ ಜಯ ಎಂದು ಬಣ್ಣಿಸುತ್ತೀರಿ ಎಂದು ಬಿಜೆಪಿ ಕೇಳಿದೆ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು.
ಸಿಬಿಐ v/s ಮಮತಾ ಬ್ಯಾನರ್ಜಿ ಯುದ್ಧ: ಪ್ರಮುಖ ಘಟನಾವಳಿಗಳು
ಈ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳನ್ನು ತಡೆದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆದಿತ್ತು. ತನಿಖೆಗೆ ಬಂದ ಸಿಬಿಐಯ ಈ ಕ್ರಮವನ್ನು ಖಂಡಿಸಿರುವ ದೀದಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದರು.