ಎಎಪಿ ಗೆಲುವು: ದೆಹಲಿಯಲ್ಲಿ ಬಿರಿಯಾನಿ ವ್ಯಾಪಾರ ಜೋರು
Recommended Video
ನವದೆಹಲಿ, ಫೆಬ್ರವರಿ 12: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಭಾರಿಸಿದ್ದೇ ತಡ ದೆಹಲಿಯಲ್ಲಿ ಬಿರಿಯಾನಿ ವ್ಯಾಪಾರ ಜೋರಾಗಿಬಿಟ್ಟಿದೆ.
ಹೌದು, ದೆಹಲಿಯಲ್ಲಿ ನಿನ್ನೆಯಿಂದ ಬಿರಿಯಾನಿ ವ್ಯಾಪಾರ ಜೋರಾಗಿದೆ. ಎಎಪಿ ಗೆಲುವು ಸನಿಹವಾಗುತ್ತಲೂ ದೆಹಲಿಯ ಹೋಟೆಲ್ಗಳಲ್ಲಿ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಬಂತಂತೆ. ಹೀಗೆಂದು ಕೆಲವು ಹೋಟೆಲ್ಗಳ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
'ಫೆಬ್ರವರಿ 11 ರಂದು ಬಿರಿಯಾನಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು ಬಂದಿತ್ತು. ಸಂಜೆಯ ಮೇಲಂತೂ ಬೇಡಿಕೆ ಇನ್ನಷ್ಟು ಹೆಚ್ಚಾಯಿತು' ಎಂದು ಹೋಟೆಲ್ ಮಾಲೀಕರೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. ಕೆಲವು ಹೋಟೆಲ್ಗಳು ಬಿರಿಯಾನಿ ಮೇಲೆ ರಿಯಾಯಿತಿಯನ್ನೂ ಘೋಷಿಸಿ ಒಳ್ಳೆಯ ವ್ಯಾಪಾರವನ್ನೇ ಮಾಡಿದವು ಎಂದೂ ಅವರು ಹೇಳಿದ್ದಾರೆ.
ದೆಹಲಿ ಚುನಾವಣೆ: ಭಾರೀ ಅಂತರದಿಂದ ಗೆದ್ದ 7 ಅಭ್ಯರ್ಥಿಗಳು ಇವರೇ
ದೆಹಲಿ ಚುನಾವಣೆ ಸಮಯದಲ್ಲಿ 'ಬಿರಿಯಾನಿ' ಚರ್ಚೆಯ ವಿಷಯವಾಗಿತ್ತು. ಸುದ್ದಿ ಪತ್ರಿಕೆಗಳ ಮುಖಪುಟ, ಟಿವಿಗಳ ಪ್ರೈಮ್ ಟೈಮ್ಗಳಲ್ಲೂ ಸ್ಥಾನ ಪಡೆದಿತ್ತು. ಇದಕ್ಕೆ ಕಾರಣ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ.
ಬಿರಿಯಾನಿ ಮಾತನಾಡಿದ್ದ ಯೋಗಿ ಆದಿತ್ಯನಾಥ
ದೆಹಲಿ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ, 'ಎಎಪಿಯು ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ಬಿರಿಯಾನಿ ಹಂಚುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದರು. ಯೋಗಿ ಅವರ ಈ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಎಎಪಿ ಮತ್ತು ಶಾಹೀನ್ ಬಾಗ್ ಪ್ರತಿಭಟನಾಕಾರರು ಇದನ್ನು ಕಟುವಾಗಿ ವಿರೋಧಿಸಿದ್ದರು.
ಪ್ರತಿಭಟನಾಕಾರರಿಗೆ ಎಎಪಿ ಬೆಂಬಲ: ಬಿಜೆಪಿ ಆರೋಪ
ಎಎಪಿಯು ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಪ್ರತಿಭಟನಾಕಾರರು ಎಎಪಿಯ ಹಣಬಲದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಗಳನ್ನು ಬಿಜೆಪಿ ಮಾಡಿತ್ತು. ಆದರೆ ಶಾಹೀನ್ ಬಾಗ್ ಬರುವ ಓಕ್ಲಾ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಎಎಪಿ ಅಮಾನತ್ ಉಲ್ಲಾ ಅವರು ಗೆದ್ದು ಬೀಗಿದರು.
'ರಾಜಕಾರಣಿಗಳಿಗೆ ಬಿರಿಯಾನಿ ಕಳಿಸುವ ಮನಸ್ಸಾಗಿದೆ'
ದೆಹಲಿ ಫಲಿತಾಂಶದ ಬಳಿಕ ಮಾತನಾಡಿದ ಶಾಹೀನ್ ಬಾಗ್ ಪ್ರತಿಭನಾಕಾರ ಮಹಿಳೆ ಶರವರಿ, 'ಶಾಹೀನ್ ಬಾಗ್ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದ ರಾಜಕಾರಣಿಗಳಿಗೆ ಬಿರಿಯಾನಿ ಕಳಿಸುವ ಮನಸ್ಸಾಗುತ್ತಿದೆ' ಎಂದಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷವು 70 ರಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 8 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಒಂದೂ ಸ್ಥಾನದಲ್ಲಿ ಗೆದ್ದಿಲ್ಲ. ಅರವಿಂದ ಕೇಜ್ರಿವಾಲ್ ಅವರು ಎರಡನೇ ಬಾರಿಗೆ ದೆಹಲಿ ಸಿಎಂ ಆಗಿ ಫೆಬ್ರವರಿ 16 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.