ಬಿರಿಯಾನಿ ಬಗ್ಗೆ ಮಾತನಾಡಿದ ಉತ್ತರ ಪ್ರದೇಶ ಸಿಎಂಗೆ ನೋಟಿಸ್!
Recommended Video
ನವದೆಹಲಿ, ಫೆಬ್ರವರಿ.06: ರಾಷ್ಟ್ರ ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಪ್ರಚಾರ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೇಂದ್ರ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದೆ.
2020ರ ನವದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಶಾಹಿನ್ ಬಾಗ್ ಹೋರಾಟಗಾರರಿಗೆ ಬಿರಿಯಾನಿ": ಯೋಗಿ ವಿರುದ್ಧ ಎಫ್ಐಆರ್
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರಿಗೆ ದೆಹಲಿ ಸರ್ಕಾರವು ಬಿರಿಯಾನಿ ನೀಡುತ್ತಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದರು.
ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ನೋಟಿಸ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಆಯೋಗವು ಯೋಗಿ ಆದಿತ್ಯನಾಥ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಯೋಗಿ ಆದಿತ್ಯನಾಥ್ ಒಂದೇ ದಿನದ ಗಡುವು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಯೋಗಿ ಆದಿತ್ಯನಾಥ್ ಗೆ ನೋಟಿಸ್ ಜಾರಿಗೊಳಿಸಿದೆ. ಕಳೆದ ವಾರ ನಡೆಸಿದ ಪ್ರಚಾರದ ವೇಳೆ ಯೋಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವಂತಾ ಹೇಳಿಕೆ ನೀಡಿದ್ದಾರೆ. ಹೀಗಾಗಿ ಫೆಬ್ರವರಿ.07ರ ಶುಕ್ರವಾರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಯೋಗಿ ಆದಿತ್ಯನಾಥ್ ಗೆ ಸವಾಲ್ ಹಾಕಿದ್ದ ಆಪ್
ಇನ್ನು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯೋಗಿ ಆದಿತ್ಯನಾಥ್ ಮಾಡಿರುವ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಆಪ್ ಸವಾಲ್ ಹಾಕಿತ್ತು. ಆಪ್ ಸಂಸದ ಸಂಜಯ್ ಸಿಂಗ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಗುಂಡೇಟಿನ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಯೋಗಿ ಆದಿತ್ಯನಾಥ್ ಲಘುವಾಗಿ ಟೀಕಿಸಿದ್ದರು. ಬಾಯಿ ಮಾತಿಗೆ ಬಗ್ಗದ ಜನರು ಪೊಲೀಸರ ಬಂದೂಕಿಗೆ ಬಗ್ಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಶಿವನ ಭಕ್ತರು ಎಂದಾದರೂ ಅಹಿಂಸೆ ಬೆಂಬಲಿಸುವುದು ಉಂಟೇ. ಆದರೆ, ಮಾತಿಗೆ ಬಗ್ಗದ ಜನರನ್ನು ಗುಂಡೇಟಿನಿಂದಲೇ ಬಗ್ಗಿಸುವುದು ಅನಿವಾರ್ಯ ಎಂದು ಯೋಗಿ ಕಿಡಿ ಕಾರಿದ್ದರು.