ಹಕ್ಕಿಜ್ವರ: ಕೋಳಿ ಮಾಂಸ ಮತ್ತು ಉತ್ಪನ್ನಗಳ ಮಾರಾಟ ನಿಷೇಧ
ನವದೆಹಲಿ, ಜನವರಿ.13: ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ಉತ್ತರ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ಕೋಳಿ ಮಾಂಸ ಬಳಕೆ ನಿಷೇಧಿಸಿ ಆದೇಶ ಹೊರಡಿಸಿವೆ.
ಕೋಳಿ ಮಾಂಸ ಹಾಗೂ ಮೊಟ್ಟೆಯಿಂದ ತಯಾರಿಸುವ ಆಹಾರವನ್ನು ನಿಷೇಧಿಸಲಾಗಿದೆ. ಮಹಾನಗರ ಪಾಲಿಕೆ ಆದೇಶದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅಂತಹ ಹೋಟೆಲ್ ಮತ್ತು ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
85 ರೂ.ಗೆ 1 ಕೆಜಿ ಕೋಳಿ ಮಾಂಸ: ಇದು ಹಕ್ಕಿಜ್ವರದ ಪ್ರಭಾವ
ಉತ್ತರ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಮಾಂಸ ಮಾರಾಟ ಅಂಗಡಿಗಳಲ್ಲಿ ಕೋಳಿ ಮಾಂಸ ಕತ್ತರಿಸುವುದು, ಸಂಗ್ರಹಿಸಿಡುವುದು, ಕೋಳಿ ಮಾಂಸ ಮಾರಾಟವನ್ನು ತಕ್ಷಣದಿಂದಲೇ ನಿರ್ಬಂಧಿಸಿ ಆದೇಶಿಸಲಾಗಿದೆ. ಮುಂದಿನ ಆದೇಶದವರೆಗೂ ಈ ನಿರ್ಬಂಧವು ಜಾರಿಯಲ್ಲಿರಲಿದೆ ಎಂದು ಮಹಾನಗರ ಪಾಲಿಕೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯಲ್ಲಿ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸುವ ಆದೇಶ
ಕೋಳಿ ಮಾಂಸ ಮತ್ತು ಮೊಟ್ಟೆ ಉತ್ಪನ್ನಗಳ ಸೇವನೆ ನಿರ್ಬಂಧವನ್ನು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿದೆ. ಎಲ್ಲರೂ ಶ್ರದ್ಧೆಯಿಂದ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಹಕ್ಕಿಜ್ವರದ ಅಪಾಯದಿಂದ ರಕ್ಷಿಸಿಕೊಳ್ಳುವುದಕ್ಕೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಲಾಗಿದೆ.
ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೂ ಮುನ್ನ ಎಚ್ಚರಿಕೆ
ಆರೋಗ್ಯ ಇಲಾಖೆಯು ಅರ್ಧ ಬೇಯಿಸಿದ ಕೋಳಿ ಮಾಂಸ, ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಅರ್ಧ ಕುಚ್ಚಿರುವ ಮೊಟ್ಟೆ ಸೇವನೆ ಮಾಡದಂತೆ ಎಚ್ಚರಿಕೆ ನೀಡಿದೆ. ಸಂಪೂರ್ಣವಾಗಿ ಬೇಯಿಸಿದ ಕೋಳಿ ಮಾಂಸ ಸೇವನೆ ಮಾತ್ರ ಸುರಕ್ಷಿತವಾಗಿದೆ. 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 30 ನಿಮಿಷಗಳ ಕಾಲ ಬೇಯಿಸಿದ ಮಾಂಸವನ್ನು ಮಾತ್ರ ಸೇವಿಸುವಂತೆ ಸೂಚಿಸಲಾಗಿದೆ.
ಹೋಲ್ ಸೇಲ್ ಮಾಂಸ ಮಾರಾಟ ಮಾರುಕಟ್ಟೆ ಬಂದ್
ನವದೆಹಲಿಯಲ್ಲಿ 8 ಹಕ್ಕಿಗಳ ಮಾದರಿ ಪರೀಕ್ಷಾ ವರದಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದನ್ನು ಪಶು ಸಂಗೋಪನಾ ಇಲಾಖೆ ದೃಢಪಡಿಸಿದೆ. ಮಯೂರ್ ವಿಹಾರ್ 3ನೇ ಹಂತದ ಪಾರ್ಕ್ ನಲ್ಲಿದ್ದ ನಾಲ್ಕು, ಸಂಜಯ್ ಕೆರೆಯಲ್ಲಿನ ಮೂರು ಹಾಗೂ ದ್ವಾರಕದ ಒಂದು ಪಕ್ಷಿಗಳ ಮಾದರಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದನ್ನು ಭೋಪಾಲ್ ಮೂಲದ ಪ್ರಯೋಗಾಲಯವು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಘಜಿಪುರ್ ನಲ್ಲಿರುವ ಮಾಂಸದ ಮಾರುಕಟ್ಟೆಯನ್ನು ಬಂದ್ ಮಾಡಿಸಲಾಗಿದೆ. ಪ್ರತಿನಿತ್ಯ 250-300 ಟನ್ ಮಾಂಸದ ವಹಿವಾಟು ನಡೆಯುವ ಹೋಲ್ ಸೇಲ್ ಮಾರುಕಟ್ಟೆ ಬಂದ್ ಮಾಡಿರುವುದರಿಂದ 2.5 ಕೋಟಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂದು ಘಜಿಪುರ್ ಹೋಲ್ ಸೇಲ್ ಮಾರುಕಟ್ಟೆಯ ಜನರಲ್ ಸಕ್ರೆಟರಿ ಮೊಹಮ್ಮದ್ ಸಲೀಮ್ ಹೇಳಿದ್ದಾರೆ.
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ನವದೆಹಲಿಯಲ್ಲಿ ಹಕ್ಕಿಜ್ವರ ಹರಡುವಿಕೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಹಕ್ಕಿಜ್ವರದ ಬಗ್ಗೆ ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಹಕ್ಕಿಜ್ವರವು ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ವಿರಳವಾಗಿದೆ. ಅಲ್ಲದೇ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಈ ಹಕ್ಕಿಜ್ವರವು ಹರಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಹಕ್ಕಿಜ್ವರದ ಆತಂಕ ಎದುರಿಸುತ್ತಿರುವ ರಾಜ್ಯಗಳು
ದೇಶದ 13 ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಸಿಕೊಂಡಿರುವುದು ದೃಢಪಟ್ಟಿದೆ. ನವದೆಹಲಿ, ಕೇರಳ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಭೀತಿ ಎದುರಾಗಿದೆ. ಈ ರಾಜ್ಯಗಳಲ್ಲಿ ಸಾವನ್ನಪ್ಪಿರುವ ಹಕ್ಕಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆದರೆ ಹರಿಯಾಣದಲ್ಲಿ ಮಾತ್ರ ಕೋಳಿಗಳಲ್ಲಿ ಹಕ್ಕಿಜ್ವರ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇನ್ನು, ಉಳಿದ ರಾಜ್ಯಗಳಲ್ಲಿ ಕೋಳಿ ಹೊರತಾದ ವಲಸೆ ಪಕ್ಷಿಗಳು, ಕಾಗೆಗಳು ಮತ್ತು ಬಾತುಕೋಳಿಗಳಲ್ಲಿ ಹಕ್ಕಿಜ್ವರ ತಗುಲಿರುವುದು ವರದಿಯಾಗಿದೆ.