ದೆಹಲಿಯ ಮೃಗಾಲಯದಲ್ಲಿ ಸಿಂಹದ ಬಳಿ ಜಿಗಿದ ವ್ಯಕ್ತಿ ಅಪಾಯದಿಂದ ಪಾರು
ನವದೆಹಲಿ, ಅಕ್ಟೋಬರ್ 17: ದೆಹಲಿಯ ರಾಷ್ಟ್ರೀಯ ಮೃಗಾಲಯದಲ್ಲಿ ಗುರುವಾರ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ದಿಢೀರನೇ ಸಿಂಹ ಇರುವ ಸ್ಥಳದ ಬಳಿ ಜಿಗಿದು, ಅದಕ್ಕೆ ಹತ್ತಿರ ಸುಳಿದಾಡಿ ಸುದ್ದಿ ಆಗಿದ್ದಾನೆ. ಮೃಗಾಲಯದ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡಿದ್ದರಿಂದ ಸಿಂಹದಿಂದ ಯಾವುದೇ ಅಪಾಯ ಆಗದಂತೆ ಆತ ಪಾರಾಗಿದ್ದಾನೆ.
ಬಿಹಾರ ಮೂಲದ ರೆಹಮಾನ್ ಖಾನ್ ಸಿಂಹದ ಬಳಿ ಸುಳಿದಾಡಿದ ವ್ಯಕ್ತಿ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ ಹನ್ನೆರಡು ಮೂವತ್ತರ ಹೊತ್ತಿಗೆ ಈ ಘಟನೆ ನಡೆದಿದ್ದು, ಸದ್ಯಕ್ಕೆ ಸನ್ನಿವೇಶ ಹತೋಟಿಯಲ್ಲಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಸಿಂಹದ ಎದುರಲ್ಲೇ ಚೇಷ್ಟೆ ಮಾಡಿದ ಮಹಿಳೆ: ವಿಡಿಯೋ ವೈರಲ್
ಈ ಘಟನೆ ನಡೆಯುವ ವೇಳೆ ಸ್ಥಳದಲ್ಲಿ ಇದ್ದವರು ಸಿಂಹದ ಗಮನವನ್ನು ಆತನಿಂದ ಬೇರೆಡೆ ಸೆಳೆಯಲು ಯತ್ನಿಸಿದ್ದಾರೆ. ಕೆಲವರು ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ.
"ಕಬ್ಬಿಣದ ಗ್ರಿಲ್ ಹಾರಿ, ಸಿಂಹದ ಬಳಿಗೆ ಆ ವ್ಯಕ್ತಿ ತೆರಳಿದ್ದಾನೆ. ಆತನನ್ನು ನೋಡಿದರೆ ಮಾನಸಿಕ ಸ್ತಿಮಿತ ಕಳೆದುಕೊಂಡಂತೆ ಕಾಣುತ್ತಾನೆ. ಯಾವುದೇ ಗಾಯಗಳಾಗದೇ ಆತನನ್ನು ಹೊರಗೆ ಕರೆತರಲಾಗಿದೆ" ಎಂದು ಡಿಸಿಪಿ ತಿಳಿಸಿದ್ದಾರೆ.
A man jumped into the lion enclosure at Delhi zoo on Thursday afternoon. He was rescued by the zookeepers. @the_hindu pic.twitter.com/cSE3Qe3v58
— Saurabh Trivedi (@saurabh3vedi) October 17, 2019
ಐದು ವರ್ಷದ ಹಿಂದೆ ಇಂಥದ್ದೇ ಒಂದು ಘಟನೆ ಸಂಭವಿಸಿತ್ತು. ಇಪ್ಪತ್ತೆರಡು ವರ್ಷದ ವ್ಯಕ್ತಿಯೊಬ್ಬ ಬಿಳಿ ಹುಲಿಯನ್ನು ಇಟ್ಟಿದ್ದ ಸ್ಥಳದ ಬಳಿ ಬಿದ್ದಿದ್ದ. ಆ ನಂತರ ಹುಲಿ ಆತನನ್ನು ಕೊಂದಿತ್ತು.