ಸಿಎಎ ವಿರುದ್ಧ ಪ್ರತಿಭಟನೆ; ಚಂದ್ರಶೇಖರ್ ಆಜಾದ್ ಬಿಡುಗಡೆ
ನವದೆಹಲಿ, ಜನವರಿ 16 : ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜೈಲಿನಿಂದ ಬಿಡುಗಡೆಗೊಂಡರು. ಫೆಬ್ರವರಿ 16ರ ತನಕ ಯಾವುದೇ ಪ್ರತಿಭಟನೆ ನಡೆಸದಂತೆ ನ್ಯಾಯಾಲಯ ಅವರಿಗೆ ಸೂಚನೆ ನೀಡಿದೆ.
ಗುರುವಾರ ರಾತ್ರಿ ಚಂದ್ರಶೇಖರ್ ಆಜಾದ್ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು. ದೆಹಲಿ ಹೈಕೋರ್ಟ್ ಬುಧವಾರ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಕಳೆದ ಹಲವು ದಿನಗಳಿಂದ ಅವರು ಜೈಲಿನಲ್ಲಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಜಾಮಾ ಮಸೀದಿ ಆವರಣದಲ್ಲಿ ಪ್ರತಿಭಟನೆ ನಡೆದಾಗ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬಂಧಿಸಲಾಗಿತ್ತು. ಈ ಬಂಧನ ಭಾರೀ ಚರ್ಚೆಗೆ ಸಹ ಕಾರಣವಾಗಿತ್ತು.
ಚಂದ್ರಶೇಖರ್ ಆಜಾದ್ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ಹೈಕೋರ್ಟ್ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರತಿಭಟನೆ ಸಂವಿಧಾನಿಕ ಹಕ್ಕು. ಸಂಸತ್ ಏನು ಹೇಳಬೇಕಿತ್ತೋ ಅದನ್ನು ಹೇಳಿಲ್ಲ. ಆದ್ದರಿಂದ, ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು.
ಜಾಮಾ ಮಸೀದಿ ಆವರಣದಲ್ಲಿ ಜನರು ಧರಣಿ ಮಾಡುವುದಲ್ಲಿ ತಪ್ಪೇನಿದೆ. ದೆಹಲಿಯಲ್ಲಿರುವ ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆ ಎನ್ನುವಂತೆ ನೀವು ವರ್ತಿಸುತ್ತಿದ್ದೀರಿ ಎಂದು ನ್ಯಾಯಾಲಯ ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿತ್ತು.
ಚಂದ್ರಶೇಖರ್ ಆಜಾದ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿಸೆಂಬರ್ 20ರಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಜಾಮಾ ಮಸೀದಿಯಿಂದ ಜಂತರ್ ಮಂತರ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಆದರೆ, ಇದಕ್ಕೆ ಪೊಲೀಸರ ಅನುಮತಿ ಪಡೆದಿರಲಿಲ್ಲ.
ಪೊಲೀಸರ ಭದ್ರತೆಯಲ್ಲಿಯೇ ಅವರು ಉತ್ತರ ಪ್ರದೇಶದ ಶಹಾಪುರಕ್ಕೆ ತೆರಳಿದ್ದಾರೆ. ಚಂದ್ರಶೇಖರ್ ಆಜಾದ್ ನಾಲ್ಕುವಾರಗಳ ಕಾಲ ದೆಹಲಿಗೆ ಭೇಟಿ ನೀಡುವುದಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.