ಸಚಿನ್ ಗೆ ಭಾರತ ರತ್ನ: ರಾಹುಲ್ ಗಾಂಧಿ 'ಕೈ'ವಾಡ?
ನವದೆಹಲಿ, ನ.23: ಭಾರತ ಕ್ರಿಕೆಟ್ ರಂಗದ ಧ್ರುವತಾರೆ ಸಚಿನ್ ರಮೇಶ್ ತೆಂಡೂಲ್ಕರ್ ಕಳೆದ ವಾರವಷ್ಟೇ ಭಾರತ ರತ್ನ ಪುರಸ್ಕೃತರಾಗಿದ್ದಾರೆ. ಆದರೆ ಸಚಿನ್ ಪ್ರತಿಭೆ ಏನೇ ಇರಲಿ ರಾಜಕೀಯವಾಗಿ ಸಚಿನ್ ಗೆ ಭಾರತ ರತ್ನ ದಕ್ಕುವಲ್ಲಿ ಯಾರ ಕೈವಾಡ/ ಶಿಫಾರಸಿತ್ತು ಎಂಬುದು ಇದೀಗ ಬಯಲಾಗಿದೆ.
ಕೆಲ ಮೂಲಗಳ ಪ್ರಕಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಿಶೇಷ ಮುತುವರ್ಜಿ ವಹಿಸಿದ್ದರ ಫಲವಾಗಿ ಸಚಿನ್ ಗೆ ಭಾರತ ರತ್ನ ಸಂದಾಯವಾಗಿದೆಯಂತೆ. ಅಂದರೆ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಕೊಡಿಸಿದ್ದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ! ಸಾರ್ವತ್ರಿಕ ಚುನಾವಣೆ ಕಾಲ ಸನ್ನಿಹಿತವಾಗುತ್ತಿರುವಾಗ ಇಂತಹ ನಡೆ ಪಕ್ಷದ ಹಿತ ಕಾಯುತ್ತದೆ ಎಂಬ ಎಣಿಕೆಯೂ ಇಲ್ಲಿ ಕೆಲಸ ಮಾಡಿದೆ ಎನ್ನಲಾಗಿದೆ.
ವಾದವೇನು?: ರಾಹುಲ್ ಗಾಂಧಿಗೆ ಸಚಿನ್ ತೆಂಡೂಲ್ಕರ್ ಅಂದರೆ ಪಂಚಪ್ರಾಣ. ಇತ್ತೀಚಿನ ವರ್ಷಗಳಲ್ಲಿ ಸಚಿನ್ ಆಟವನ್ನು ರಾಹುಲ್ ಮಿಸ್ ಮಾಡಿಕೊಂಡಿದ್ದೇ ಇಲ್ಲ. ಹಾಗಾಗಿ, ಸಚಿನ್ ವಿದಾಯ ಹೇಳಲು ಸಾಕ್ಷಿಯಾದ ವಾಂಖೇಡೆ ಸ್ಟೇಡಿಯಂಗೆ ಭೇಟಿ ಕೊಟ್ಟ ಯುವರಾಜ, ತನ್ನ ನೆಚ್ಚಿನ ಆಟಗಾರನ ಕೊನೆಯ ಆಟವನ್ನು ಮನಸಾರೆ ವೀಕ್ಷಿಸಿ ಆನಂದಿಸಿದ್ದರು. ಚುನಾವಣೆಯ ಪ್ರಚಾರ ಸಮಾವೇಶವನ್ನು ರದ್ದುಗೊಳಿಸಿ ರಾಹುಲ್, ಸಚಿನ್ ಆಟವನ್ನು ವೀಕ್ಷಿಸಲು ಬಂದಿದ್ದು ವಿಶೇಷವಾಗಿತ್ತು.
ಆ ವೇಳೆ ಅದೇನನ್ನಿಸಿತೋ ಏನೋ ರಾಹುಲ್ ಗಾಂಧಿ ಅಂದು ಸಂಜೆಯೇ ಮನಮೋಹನ್ ಸಿಂಗ್ ಮತ್ತು ಇತರ ಆಪ್ತರೊಂದಿಗೆ ಚರ್ಚೆ ನಡೆಸಿ, ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವಂತೆ ಶಿಫಾರಸ್ಸು ಮಾಡಿದರು.
ಅದನ್ನು ಶಿರಸಾವಹಿಸಿ ಪಾಲಿಸಿದ ಪ್ರಧಾನಿ ಸಿಂಗ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಈ ಬಗ್ಗೆ ಪತ್ರವನ್ನು ಬರೆದರು. ಅಚ್ಚರಿ ಎಂದರೆ, ಪ್ರಧಾನಿ ಸಿಂಗ್ ಕಳುಹಿಸಿದ ಪತ್ರ ರಾಷ್ಟ್ರಪತಿಯವರಿಗೆ ತಲುಪಿದ್ದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯ ಸಮಯದಲ್ಲಿ.
ಮುಂದೆ ಕೇವಲ ಅರ್ಧ ಗಂಟೆಯೊಳಗೆ ರಾಷ್ಟ್ರಪತಿಯವರು ಸಚಿನ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಶಿಫಾರಸ್ಸು ಪತ್ರಕ್ಕೆ ಸಹಿ ಹಾಕಿ ಹಿಂದಿರುಗಿಸಿದರು. ರಾಷ್ಟ್ರಪತಿಯವರ ಅಂಕಿತ ಬೀಳುತ್ತಿದ್ದಂತೆಯೇ ಈ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಅಧಿಕೃತ ಘೋಷಣೆಯೂ ಹೊರಬಿದ್ದಿತು.