ಕೇಂದ್ರಕ್ಕೆ ಎಚ್ಚರಿಕೆ: ಕಾಮಣ್ಣನ ಮೂರ್ತಿ ಜೊತೆ ಕೃಷಿ ಕಾಯ್ದೆಗೂ ಬೆಂಕಿ!
ನವದೆಹಲಿ, ಮಾರ್ಚ್ 18: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮಾರ್ಚ್ 26ರಂದು ಸಂಪೂರ್ಣ ಭಾರತ್ ಬಂದ್ ನಡೆಸುವ ದಿನ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಆಂದೋಲನಕ್ಕೆ ರೈತರ ಸಿದ್ಧತ ತೀವ್ರಗೊಂಡಿದೆ.
ರೈತರ ಹೋರಾಟಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುವ ಹಿನ್ನೆಲೆ ಮಾರ್ಚ್ 26ರಂದು ದೇಶಾದ್ಯಂತ ಭಾರತ್ ಬಂದ್ ನಡೆಸುವುದಕ್ಕೆ ಕರೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ದೇಶವ್ಯಾಪ್ತಿ ವ್ಯಾಪಾರ ವಹಿವಾಟು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಅದಾಗಿ ಎರಡು ದಿನಕ್ಕೆ ಅಂದರೆ ಮಾರ್ಚ್ 28ರಂದು ಆಚರಿಸುವ ಹೋಳಿ ಹಬ್ಬದ ದಿನ ಕಾಮಣ್ಣನ ಜೊತೆಗೆ ಕೃಷಿ ಕಾಯ್ದೆಗಳನ್ನೂ ಕೂಡ ಸುಡುವುದಕ್ಕೆ ತೀರ್ಮಾನಿಸಲಾಗಿದೆ.
ರೈತ ಚಳವಳಿಯನ್ನು ರೈತ ಮುಖಂಡರೇ ಮುಂದುವರೆಸಲಿ; ಸಾಮಾಜಿಕ ಹೋರಾಟಗಾರರು ಕೊಂಚ ದೂರ ನಿಲ್ಲಿ...
"ಹೋಳಿ ಹಬ್ಬದ ದಿನವೇ ವಿವಾದಿತ ಕೃಷಿ ಕಾಯ್ದೆಗಳನ್ನು ಕಾಮಣ್ಣನ ಮೂರ್ತಿ ಜೊತೆಗೆ ಬೆಂಕಿಗೆ ಹಾಕಲಾಗುತ್ತದೆ. ಇದನ್ನು ಅರಿತುಕೊಂಡಾದರೂ ಕೇಂದ್ರ ಸರ್ಕಾರ ಕಾಯ್ದೆಗಳನ್ನು ರದ್ದುಗೊಳಿಸಬೇಕು ಹಾಗೂ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಲಿಖಿತ ರೂಪದಲ್ಲಿ ನೀಡಬೇಕು" ಎಂದು ಗಂಗಾನಗರ್ ಕಿಸಾನ್ ಸಮಿತಿಯ ಮುಖಂಡ ರಂಜಿತ್ ರಾಜು ಆಗ್ರಹಿಸಿದ್ದಾರೆ.
ಭಾರತ್ ಬಂದ್ಗೆ ಎಲ್ಲ ಕಡೆಯಿಂದ ಬೆಂಬಲ
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಮಾರ್ಚ್ 26ರಂದು ಕರೆ ನೀಡಿರುವ ಭಾರತ್ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದ ಎಲ್ಲ ವ್ಯಾಪಾರಿಗಳು, ಸಾರಿಗೆ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆ, ಯುವ ಸಂಘಟನೆಗಳು ಮತ್ತು ಮಹಿಳೆಯರು ಸಹ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತರ 112 ದಿನಗಳ ಪ್ರತಿಭಟನೆಗೆ ಶಕ್ತಿ
ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, 112 ದಿನಗಳೇ ಕಳೆದಿವೆ. ಇತ್ತೀಚಿಗೆ ರೈತರ ಹೋರಾಟಕ್ಕೆ ಹೊಸ ಶಕ್ತಿ ಬಂದಿದೆ. ಭಾರತ್ ಬಂದ್ ದಿನ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ರೈತರ ಹೋರಾಟವು 112 ದಿನಗಳಿಂದಲೂ ನಡೆಯುತ್ತಿದ್ದು, ತನ್ನ ಗುರಿಯತ್ತ ರೈತರು ಮುನ್ನುಗ್ಗುತ್ತಿದ್ದಾರೆ. ನೀವು ಮತ್ತು ನಾವು ಇಲ್ಲದೇ ಇಂಥದೊಂದು ಸುದೀರ್ಘ ಹೋರಾಟ ನಡೆಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕ ವಲಯದಲ್ಲೂ ಕೂಡ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಿಂದ ರೈತರಿಗೆ ನೀಡಿದ ಬದ್ಧತೆ ಉಲ್ಲಂಘನೆ
ವಿದ್ಯುತ್ ತಿದ್ದುಪಡಿ ಮಸೂದೆ 2021 ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರ ಬಗ್ಗೆಯೂ ಕೃಷ್ಣ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯಲ್ಲಿ ಯಾವುದೇ ತಿದ್ದುಪಡಿ ಮಾಡಿದರೂ ಕೇಂದ್ರ ಸರ್ಕಾರ ಜನವರಿಯಲ್ಲಿ ರೈತರಿಗೆ ನೀಡಿದ ಬದ್ಧತೆಯ ಉಲ್ಲಂಘನೆ ಮಾಡಿದಂತೆ ಆಗುತ್ತದೆ. "ನಾವು ಕೇಂದ್ರ ಸರ್ಕಾರದ ಜೊತೆಗೆ ನಡೆಸಿದ 12 ಸುತ್ತಿನ ಮಾತುಕತೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್ ಅವರು ವಿದ್ಯುತ್ ಕಾಯ್ದೆಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿದ್ದರು. ಮಾಧ್ಯಮಗಳಲ್ಲಿ ರೈತರ ಶೇ.50ರಷ್ಟು ಬೇಡಿಕೆಗಳಿಗೆ ಒಪ್ಪಿಕೊಳ್ಳಲಾಗಿದೆ ಎಂಬ ಬಗ್ಗೆ ವರದಿಗಳು ಬಂದಿವೆ. ಆದರೆ ಇದೀಗ ಕೇಂದ್ರ ಸರ್ಕಾರ ಮತ್ತೊಮ್ಮೆ ವಿದ್ಯುತ್ ತಿದ್ದುಪಡಿ ಮಸೂದೆ ಮಂಡಿಸುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ತಪ್ಪುತ್ತಿದೆ ಎಂದು ಕೃಷ್ಣ ಪ್ರಸಾದ್ ಆರೋಪಿಸಿದ್ದಾರೆ.
ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 113ನೇ ದಿನ
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 113ನೇ ದಿನಕ್ಕೆ ಕಾಲಿಟ್ಟಿದೆ.