ಫೆ.26ರಂದು ಭಾರತ್ ಬಂದ್; ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆಗಳು ಸ್ಥಗಿತ
ನವದೆಹಲಿ, ಫೆಬ್ರವರಿ 19: ಜಿಎಸ್ಟಿ (ಸರಕು ಸೇವಾ ತೆರಿಗೆ) ನಿಬಂಧನೆಗಳನ್ನು ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಫೆಬ್ರವರಿ 26ರಂದು ಭಾರತ್ ಬಂದ್ಗೆ ಕರೆ ನೀಡಲಾಗಿದೆ.
ದೇಶಾದ್ಯಂತ ಫೆಬ್ರವರಿ 26ರಂದು ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಲಿರುವುದಾಗಿ ಅಖಿಲ ಭಾರತ ವರ್ತಕರ ಸಂಘಟನೆ ಮಾಹಿತಿ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಎಸ್ಟಿ ನಿಯಮಗಳಲ್ಲಿ 950 ತಿದ್ದುಪಡಿಗಳನ್ನು ಮಾಡಲಾಗಿದೆ. ಜಿಎಸ್ಟಿ ಪೋರ್ಟಲ್ನಲ್ಲಿನ ಸಮಸ್ಯೆಗಳು ಹಾಗೂ ಅನುಸರಣೆಯಲ್ಲಿನ ನಿರಂತರ ಸಮಸ್ಯೆಗಳು ತೆರಿಗೆ ನಿಯಮದ ಮೇಲೆ ಪ್ರಭಾವ ಬೀರಿದ್ದು, ನಿಬಂಧನೆಗಳ ಮರುಪರಿಶೀಲನೆ ಅವಶ್ಯಕವಾಗಿದೆ ಎಂದು ಅಖಿಲ ಭಾರತ ವರ್ತಕರ ಸಂಘಟನೆ ಆಗ್ರಹಿಸಿದೆ. ಹೀಗಾಗಿ ದೇಶಾದ್ಯಂತ ಬಂದ್ ನಡೆಸಲು ತೀರ್ಮಾನಿಸಿದೆ. ಮುಂದೆ ಓದಿ...
ವರ್ತಕ ಸಂಘಟನೆಯಿಂದ 1500 ಕಡೆಗಳಲ್ಲಿ ಧರಣಿ
ಜಿಎಸ್ಟಿಯಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಬೇಕು. ಕಠಿಣ ನಿಬಂಧನೆಗಳ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಜಿಎಸ್ಟಿ ಮಂಡಳಿಯನ್ನು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಒಟ್ಟು 1500 ಕಡೆಗಳಲ್ಲಿ ಧರಣಿ ನಡೆಸಲಿರುವುದಾಗಿ ಸಿಎಐಟಿ ತಿಳಿಸಿದೆ.
ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?
ಜಿಎಸ್ಟಿ ಸರಳೀಕರಣಗೊಳಿಸಲು ಒತ್ತಾಯ
ಜಿಎಸ್ಟಿ ವ್ಯವಸ್ಥೆಯ ಪರಿಶೀಲನೆಯೊಂದಿಗೆ, ವ್ಯಾಪಾರಿಗಳು ಅದನ್ನು ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತೆ ಸರಳೀಕರಣಗೊಳಿಸಬೇಕು ಹಾಗೆಯೇ ತರ್ಕಬದ್ಧವಾಗಿಯೂ ಇರಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಪತ್ರಿಕಾ ಗೋಷ್ಠಿ ನಡೆಸಿದ್ದು, ಸರ್ಕಾರದೊಂದಿಗೆ ಈ ವಿಷಯದ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿಯೂ ಪ್ರತಿಭಟನೆ
ಅಖಿಲ ಭಾರತ ಸರಕು ಸಾಗಣೆದಾರರ ಅಭಿವೃದ್ಧಿ ಸಂಘ ಕೂಡ ಸಿಎಐಟಿಯ ಭಾರತ್ ಬಂದ್ಗೆ ಬೆಂಬಲ ನೀಡಿದ್ದು, ಫೆ.26ರಂದು ಚಕ್ಕಾ ಜಾಮ್ ನಡೆಸಲಿದೆ ಎಂದು ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳ ಹಲವು ನಗರಗಳಲ್ಲಿ ಆ ದಿನ ವಾಣಿಜ್ಯ ಮಾರುಕಟ್ಟೆಗಳನ್ನು ಮುಚ್ಚಲಾಗುವುದು. ಪ್ರತಿಭಟನೆ, ಧರಣಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ದೇಶಾದ್ಯಂತ 40,000 ವರ್ತಕರ ಸಂಘಗಳ ಬೆಂಬಲ
ದೇಶಾದ್ಯಂತ 40,000 ವರ್ತಕರ ಸಂಘಗಳು ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಜಿಎಸ್ಟಿ ಯಶಸ್ಸು ಕಾಣಬೇಕೆಂದರೆ ಸ್ವಯಂಪ್ರೇರಣೆಯಿಂದ ವ್ಯವಸ್ಥೆಯನ್ನು ಅನುಸರಿಸುವುದೂ ಮುಖ್ಯವಾಗುತ್ತದೆ. ಹೀಗಾಗಿ ಅನುಸರಣೆಗೆ ಸಾಧ್ಯವಾಗುವಂಥ ನಿಯಮ, ವ್ಯವಸ್ಥೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.