ಬೆಂಗಳೂರಿನ ಯುವಕರ ಕಾರ್ಯ ಮೆಚ್ಚಿದ ಆಸ್ಕರ್ ಫರ್ನಾಂಡಿಸ್
ದೆಹಲಿ, ಮೇ 12: ಯುವಕರು ಅಡ್ಡ ದಾರಿ ಹಿಡಿಯುವ ಈ ಕಾಲದಲ್ಲಿ ನಾಡು- ನುಡಿ, ಸಂಸ್ಕೃತಿಗೆ ಒತ್ತು ನೀಡುವ ಉತ್ಸವ ಬೆಂಗಳೂರಿನ ಯುವಕರು ಮಾಡಿರುವುದು ಮೆಚ್ಚುಗೆಯ ವಿಚಾರ, ಸಮಸ್ತ ಕರ್ನಾಟಕದ ಕಲೆ ಸಂಸ್ಕೃತಿಯ ಪ್ರದರ್ಶನ ಪ್ರತಿ ತಿಂಗಳು ದೆಹಲಿಯಲ್ಲಿ ನಡೆಯುತ್ತಿರಲಿ, ವಿವಿಧ ಕ್ಷೇತ್ರಗಳ ವಿಶೇಷ ಸಾಧಕರಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಬೆಂಗಳೂರಿನ ಸ್ನೇಹ ಸಾಂಸ್ಕೃತಿಕ ಸಂಘ ವತಿಯಿಂದ ಈಚೆಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ನಾಡುನುಡಿ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಕಲಬುರಗಿ ಸುಲೆಪೇಟೆ ಏಕದಂಡಗಿ ಮಠದ ದೊಡ್ಡೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ದೆಹಲಿ ಜನಕಪುರಿ ಕನ್ನಡ ಕೂಟದ ಅಧ್ಯಕ್ಷ ಎನ್.ಆರ್.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರಿನ ಡಾ.ವಿಶ್ವನಾಥ ನಾಯಕ್, ಬೆಳಗಾವಿಯ ಡಾ.ಶಿವಾನಂದ ರಾಥೋರ್, ಮಹಾಂತೇಶ್ ವಾಲಿ, ಗೋಕಾಕ್, ರಾಯಭಾಗದ ಬೈರು ಅಣ್ಣಪ್ಪ ಚೌಗ್ಲೆ, ಮುದೋಳದ ಪ್ರಭು ಬುಗಟಗಿ ಮಠ, ಕರ್ನಾಟಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್ ಬೆಂಗಳೂರು, ಮೋನಪ್ಪ ಜಿ. ಪತ್ತಾರ್ ತೆಲಗಿ ಬಿಜಾಪುರ, ಯಾದಗರಿಯ ಬಸವರಾಜ್ ಭಾನರಾ, ಅಪ್ಜಲ್ಪುರದ ಡಾ.ಎಸ್.ಎಸ್.ಗಡ್ಡಿ,
ಶಹಾಪೂರದ ತಿಪ್ಪಣ್ಣ ಕ್ಯಾತನಾಳ್ ಹಾಗೂ ಕೆಂಭಾವಿಯ ಮೌನೇಶ್ ಹೇಳಾವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದೆಹಲಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಿಕ್ಷಣ ಕ್ಷೇತ್ರದ ಪಿ.ಸಿ. ಶ್ರೀನಿವಾಸ್, ಚಿತ್ರಕಲೆಯಲ್ಲಿ ಸುಧೀಂದ್ರ ಪಡ್ನಿಸ್, ಭರತ ನಾಟ್ಯದಲ್ಲಿ ಸಪ್ನಾ ಶ್ರೀನಾಥ್ ಮತ್ತು ಕರಾಟೆ ಕ್ಷೇತ್ರದಲ್ಲಿ ವಿಷ್ಣು ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.
ದೆಹಲಿ ಕನ್ನಡಿಗರಿಂದ ಸಾಂಸ್ಕೃತಿಕ ವೈಭವ, ಸ್ವರಾಂಜಲಿ ಮೆಲೋಡಿಸ್ ತಂಡದಿಂದ ಗೀತಗಾಯನ ಮತ್ತು ಕಲಾವಿದೆ ಸಪ್ನಾ ಅವರ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ಬೆಂಗಳೂರು ಸ್ನೇಹ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಂಜಿತ್ ಎಂ, ಕರ್ನಾಟಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್ ಬೆಂಗಳೂರು, ಜನಕಪುರಿ ಕನ್ನಡ ಕೂಟದ ವೆಂಕಟೇಶ, ಕಲಬುರ್ಗಿ ವಿಶ್ವಕರ್ಮ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ವಿರೇಂದ್ರ ಇನಾಂದರ್, ದೆಹಲಿಯ ಕೃಷ್ಣ ಭಟ್ ಉಪಸ್ಥಿತರಿದ್ದರು.
ಉತ್ಸವದ ಸಂಘಟಕರಾದ ಪತ್ರಕರ್ತ ರಾಯಚೂರಿನ ಮಾರುತಿ ಬಡಿಗೇರ್ ಸ್ವಾಗತಿಸಿದರು.