ರಾಜ್ಯದ ಮಕ್ಕಳಿಗೆ ಕೇಂದ್ರದಿಂದ ಪುರಸ್ಕಾರ
ನವದೆಹಲಿ, ನವೆಂಬರ್ 15 : ಸಮಾಜಸೇವೆ, ನಾವೀನ್ಯತೆ, ಮಕ್ಕಳ ಕಲ್ಯಾಣ ವಿಭಾಗದಲ್ಲಿ ಸಾಧನೆಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಕೊಡುವ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗೆ ಈ ಬಾರಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಭಾಜನರಾಗಿದ್ದಾರೆ.
ನಾವೀನ್ಯತೆ ವಿಭಾಗದಲ್ಲಿನ ಸಾಧನೆಗಾಗಿ ಪುತ್ತೂರಿನ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ, ಸಮಾಜ ಸೇವೆ ವಿಭಾಗದಲ್ಲಿನ ಸಾಧನೆಗಾಗಿ ಬೆಂಗಳೂರಿನ ನಿಖಿಯಾ ಶಂಷೇರ್ ಅವರು ತಲಾ ₹ 10,000 ನಗದು ಮತ್ತು ರಜತ ಪದಕ ಪಡೆದರು. ಮಂಗಳವಾರ (ನವೆಂಬರ್ 15) ದೆಹಲಿಯ ರಾಷ್ಟ್ರಪ್ರತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಿಖಿಯಾ ಶಂಷೇರ್ ಕೆಲಸ ಮಾಡುತ್ತಿದ್ದು ಇದುವರೆಗೆ 7,700 ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ವೆಬ್ಸೈಟ್ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಮಕ್ಕಳ ಕಲಿಕೆಗೆ ಸಲಕರಣೆಗಳನ್ನು ವಿತರಿಸಿರುವ ಇವರ ಸಾಧನೆ ಗೌರವಿಸಿ ಪ್ರಶಸ್ತಿ ನೀಡಲಾಗಿದೆ.
ಪುತ್ತೂರಿನ ವಿದ್ಯಾರ್ಥಿ ಸ್ವಸ್ತಿಕ್ ಅವರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಬಳಸಿ ಕಾಂಕ್ರೀಟ್ಗೆ ಪರ್ಯಾಯವಾಗಿ ಬಳಸಬಹುದಾದ ವಸ್ತುವನ್ನು ಆವಿಷ್ಕರಿಸಿದ್ದಾರೆ. ಈ ಸಾಧನವು ಸವೆತ ನಿರೋಧಕ ಗುಣ ಹೊಂದಿರುವುದರಿಂದ ಕಡಲ್ಕೊರೆತವನ್ನು ತಡೆಯುವುದಕ್ಕೆ ಬಳಸಬಹುದೆಂಬ ಆಶಾವಾಧ ವ್ಯಕ್ತವಾಗಿದೆ. ನಿರ್ಮಾಣ ಕ್ಷೇತ್ರದಲ್ಲೂ ಇದನ್ನು ಬಳಸಬಹುದಾಗಿದೆ.
ಮಕ್ಕಳ ಕಲ್ಯಾಣದಲ್ಲಿ ತೊಡಗಿರುವ ಸಂಘ ಸಂಸ್ಥೆಗಳಿಗೂ ಇದೇ ಸಮಯದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ವಿತರಣೆ ಮಾಡಿದರು. ಎಚ್ಐವಿ ಏಡ್ಸ್ ಪೀಡಿತರು ಹಾಗೂ ಬಾಧಿತ ಮಕ್ಕಳ ಪಾಲನೆ, ಸಂರಕ್ಷಣೆಗೆ ಶ್ರಮಿಸುತ್ತಿರುವ ಮಹೇಶ ಪ್ರತಿಷ್ಠಾನದ ಮಹೇಶ್ ಜಾದವ್ ಅವರಿಗೆ ಮಕ್ಕಳ ಕಲ್ಯಾಣ ವಿಭಾಗದಲ್ಲಿ ₹ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಯಿತು. ಇವರ ಪ್ರತಿಷ್ಠಾನದಿಂದ ಅಂದಾಜು 4,000 ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ.
ಅಕ್ಷಯಪಾತ್ರೆ ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಕಾರ್ಯದಲ್ಲಿ ಉತ್ತಮ ಸಾಧನೆ ತೋರಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ನೂರಾರು ಬಾಲಕಾರ್ಮಿಕರನ್ನು ರಕ್ಷಿಸಿರುವ ಚಾಮರಾಜ ನಗರದ ಸೊಸೈಟಿ ಫಾರ್ ಟ್ರೈಬಲ್ ಅಂಡ್ ರೂರಲ್ ಡವಲಪ್ಮೆಂಟ್ ಸಂಸ್ಥೆಗೂ ಪ್ರಶಸ್ತಿ ನೀಡಲಾಗಿದೆ.