ಬೆಂಗಳೂರಿಗರ ಕುಡಿಯುವ ನೀರಿನ ಹಕ್ಕು ರಕ್ಷಿಸಿ: ಬಿ ಪ್ಯಾಕ್ ಮನವಿ
ನವದೆಹಲಿ, ಸೆಪ್ಟೆಂಬರ್ 21: ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ನೇತೃತ್ವದಲ್ಲಿ ಬೆಂಗಳೂರು ನಾಗರಿಕರ ಗುಂಪು ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಕಾನೂನು ಹೋರಾಟದ ಮಧ್ಯೆ ಬೆಂಗಳೂರು ಹಾಗೂ ಹತ್ತಿರದ ಜಿಲ್ಲೆಗಳ ನಿವಾಸಿಗಳ ಕುಡಿಯುವ ನೀರಿನ ಹಕ್ಕು ರಕ್ಷಿಸಲು ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದೆ.
ಮುಂದಿನ ವಿಚಾರಣೆಯಲ್ಲಿ ನಾಗರಿಕರ ಗುಂಪು ಮನವಿ ಸಲ್ಲಿಸಲು ಅವಕಾಶ ನೀಡಬೇಕೆ ಬೇಡವೆ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. "ಸೆ.27ರಂದು ಮುಖ್ಯ ವಿಚಾರಣೆ ಜೊತೆಗೆ ನಿಮ್ಮ ಮನವಿಯನ್ನೂ ಆಲಿಸುತ್ತೇವೆ" ಎಂದು ಯು.ಯು.ಲಲಿತ್ ತಿಳಿಸಿದ್ದಾರೆ. ಹಿರಿಯ ವಕೀಲ ಹರೀಶ್ ಸಾಳ್ವೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ ಪ್ಯಾಕ್) ಪರವಾಗಿ ವಕಾಲತ್ತು ವಹಿಸಲಿದ್ದಾರೆ.[ಕಿರಣ್ ಮಜುಂದಾರ್ ಷಾ ವಿರುದ್ಧ ವಾಟಾಳ್ ವಾಗ್ದಾಳಿ]
ಬೆಂಗಳೂರು ನಾಗರಿಕರಿಗೆ ಅಗತ್ಯವಾದ ಕುಡಿಯುವ ನೀರು ದೊರೆಯಬೇಕು. ಜೀವನಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಹಕ್ಕನ್ನು ಸುಪ್ರೀಂ ಕೋರ್ಟ್ ರಕ್ಷಿಸಬೇಕು ಎಂದು ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಉಅಪಾಧ್ಯಕ್ಷ ಮೋಹನ್ ದಾಸ್ ಪೈ ಹೇಳಿದ್ದಾರೆ.
ಅಂತರ ರಾಜ್ಯ ನೀರು ಹಂಚಿಕೆ ವಿವಾದ ನಡೆಯುತ್ತಿರುವಾಗ ಈ ರೀತಿ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಬಾರದು ಎಂದು ತಮಿಳುನಾಡನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಶೇಖರ್ ನಾಫಡೆ ಹೇಳಿದ್ದಾರೆ. "ಬೆಂಗಳೂರಿನಲ್ಲಿ ಕಾವೇರಿ ಗಲಭೆಯಾದ ನಂತರ ಅರ್ಜಿದಾರರಿಂದ ಮನವಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಯಲ್ಲಿ ಉದ್ಭವವಾಗಿರುವ ಸನ್ನಿವೇಶಕ್ಕೆ ಪರಿಹಾರ ಸೂಚಿಸಬೇಕು" ಎಂದು ಮನವಿ ಮಾಡಲಾಗಿದೆ.[ತಮಿಳುನಾಡು ಬೆಳೆಗಾಗಿ ಬೆಂಗಳೂರಿನ ಕುಡಿಯುವ ನೀರಿನ ತ್ಯಾಗ]
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಬೆಂಗಳೂರಿಗೆ ವರ್ಷಕ್ಕೆ 19 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಿಗೆ ಅಂದಾಜು 26 ಟಿಎಂಸಿ ಅಡಿ ನೀರು ಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹಾರಂಗಿ, ಹೇಮಾವತಿ ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ಸೆ.16ಕ್ಕೆ 28.77 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ ಕಾವೇರಿ ಕೊಳ್ಳದ ಕುಡಿಯುವ ನೀರಿಗಾಗಿ 26 ಟಿಎಂಸಿ ನೀರು ಬೇಕಾಗುತ್ತದೆ. ತಮಿಳುನಾಡಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಬೆಂಗಳೂರು ಮತ್ತಿತರ ಪಟ್ಟಣಗಳ ನಾಗರಿಕರಿಗೆ ಸ್ರರಬರಾಜು ಮಾಡಲು ನೀರಿರುವುದಿಲ್ಲ ಎಂದು ತಿಳಿಸಿದ್ದಾರೆ.