ಭಾರತದ ಪ್ರೇಮಸೌಧದೆದುರು ಬೆಲ್ಜಿಯಂನ ಪ್ರಣಯಪಕ್ಷಿಗಳು..!
ನವದೆಹಲಿ, ನವೆಂಬರ್ 07: ಆಗ್ರಾದ ಪ್ರೇಮಸೌಧ, ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಗೆ ನವೆಂಬರ್ 6, ಸೋಮವಾರದಂದು ವಿಶೇಷ ಕಳೆ ಬಂದಿತ್ತು. ಮೊಟ್ಟ ಮೊದಲ ಬಾರಿಗೆ ಏಳು ದಿನಗಳ ಭಾರತ ಯಾತ್ರೆಯಲ್ಲಿರುವ ರಾಜದಂಪತಿ ಫಿಲಿಪ್ ಮತ್ತು ರಾಣಿ ಮತಿಲ್ಡ್ ಅವರ ಆಗಮನ ತಾಜ್ ಮಹಲ್ ನ ಎಂದಿನ ಸೊಬಗಿಗೆ ಮತ್ತಷ್ಟು ಮೆರಗು ನೀಡಿತ್ತು.
ಉಭಯ ದೇಶಗಳ ನಡುವಿನ ವಾಣಿಜ್ಯ ವ್ಯವಹಾರ ಮತ್ತು ಹೂಡಿಕೆಗಳಿಗೆ ಸಹಕಾರ ನೀಡುವ ಕುರಿತು ಪ್ರಧಾನಿ ನರೇಮದ್ರ ಮೋದಿ ಮತ್ತು ಬೆಲ್ಜಿಯಂ ರಾಜ ಫಿಲಿಪ್ ಚರ್ಚೆ ನಡೆಸಿದ್ದಾರೆ. ಇದರೊಟ್ಟಿಗೆ ಭಾರತದ ಪ್ರಸಿದ್ಧ ಸ್ಥಳಗಳಿಗೂ ಭೇಟಿ ನೀಡಿದ ಫಿಲಿಪ್ ದಂಪತಿ, ದೆಹಲಿಯ ರಾಜ್ ಘಾಟ್ ಗೆ ತೆರಳಿ ಗಾಂಧೀಜಿಯವರ ಸಮಾಧಿಗೆ ನಮನಸಲ್ಲಿಸಿದರು.
ಈ ಇಬ್ಬರು ರಾಜದಂಪತಿ ತಾಜ್ ಮಹಲ್ ಎದುರು ನಿಂತಿದ್ದ ಚಿತ್ರ, ಭಾರತದ ಪ್ರೇಮಸೌಧದೆದುರು ಬೆಲ್ಜಿಯಂನ ಪ್ರಣಯಪಕ್ಷಿಗಳು ವಿಹರಿಸುತ್ತಿರುವಂತಿದೆ. ಇದರೊಟ್ಟಿಗೆ ಪ್ರಧಾನಿ ಮೋದಿಯವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಚಿತ್ರ, ಟ್ರಂಫ್ ದಂಪತಿಯ ಚುಂಬನದ ದೃಶ್ಯ ಸೇರಿದಂತೆ ದೇಶ ವಿದೇಶದ ಸುದ್ದಿಗುಚ್ಛ ಚಿತ್ರ ಸಮೇತ ನಿಮ್ಮಮುಂದಿದೆ...
ಪ್ರಣಯ ಪಕ್ಷಿಗಳು
ಬೆಲ್ಜಿಯಂನ ರಾಜದಂಪತಿಗಳಾದ ಫಿಲಿಪ್ ಮತ್ತು ರಾಣಿ ಮತಿಲ್ಡ್ ಭಾರತದ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಸುಂದರ ಸೌಧ ತಾಜ್ ಮಹಲ್ ಎದುರು ವಿಹರಿಸಿದ್ದು ಹೀಗೆ.
ನತದೃಷ್ಟರ ಆತ್ಮಕ್ಕೆ ಶಾಂತಿ ಸಿಗಲಿ...
ಇಬ್ಬರು ವ್ಯಕ್ತಿಗಳು ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದ ಶೂಟೌಟ್ ದುರ್ಘಟನೆಯಲ್ಲಿ ಮಡಿದ 27 ಜನರ ಆತ್ಮಕ್ಕೆ ಶಾಂತಿ ಕೋರಿದ ಕ್ಷಣ.
ದಿಗ್ಗಜರ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದರು. ಚೆನ್ನೈನಲ್ಲಿ ನಡೆದ ಪ್ಲಾಟಿನಂ ಜುಬಿಲಿ ಕಾರ್ಯಕ್ರಮವೊಂದು ಇಬ್ಬರು ದಿಗ್ಗಜರ ಭೇಟಿಗೆ ವೇದಿಕೆಯಾಯಿತು. ಈ ಭೇಟಿಗೆ ಬೇರೇನಾದರೂ ರಾಜಕೀಯ ಅರ್ಥವಿದೆಯಾ ಎಂಬುದನ್ನು ಕಾದುನೋಡಬೇಕಷ್ಟೆ.
ಮತ್ತು ತುಂಬಿದ ಮುತ್ತು...!
ಸೌತ್ ಕೋರಿಯ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡಾಲ್ಡ್ ಟ್ರಂಪ್, ಪೈವೋಂಗ್ಟೇಕ್ ನ ಒಸಾನ್ ಆರ್ ಬೇಸ್ ಗೆ ಭೇಟಿ ನೀಡಿದಾಗ ಪತ್ನಿ ಮಿಲಿನಿಯಾ ಟ್ರಂಪ್ ರನ್ನು ಚುಂಬಿಸಿದ ಕ್ಷಣ.
ನವದೆಹಲಿಯಲ್ಲಿ ಕರ್ನಾಟಕದ ಕೃಷಿ ಸಚಿವರು
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದನ್ನುದ್ದೇಶಿಸಿ ಕರ್ನಾಟಕದ ಕೃಷಿ ಸಚಿವ ಕೃಷ್ಣ ಭೈರೇ ಗೌಡ, ಪಂಜಾಬ್ ಸಚಿವ ಮನ್ ಪ್ರೀತ್ ಬಾದಲ್ ಮತ್ತು ಪಾಂಡಿಚೇರಿಯ ಕೃಷಿ ಸಚಿವ ಆರ್.ಕಮಲಕಣ್ಣನ್ ಮಾತನಾಡುತ್ತಿದ್ದ ಕ್ಷಣ.
ಪರಶುರಾಮ ಸನ್ನಿಧಿಯಲ್ಲಿ ರವಿಶಾಸ್ತ್ರಿ
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ತಿರುವನಂತಪುರದ ತಿರುವಳ್ಳಂನ ಶ್ರೀ ಪರಶುರಾಮ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಕೋಹ್ಲಿ ಶಪಥ!
ಕೇರಳ ಪೊಲೀಸರ ಮಾದಕ ವ್ಯಸನ ವಿರೋಧಿ ಹೋರಾಟದ ಭಾಗವಾಗಿ ತಿರುವನಂತಪುರಂ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್ ಟು ಕ್ರಿಕೆಟ್, ನೊ ಟು ಡ್ರಗ್ಸ್ ಅಭಿಯಾನದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ನೊ ಟು ಡ್ರಗ್ಸ್ ಎಂದು ಶಪಥ ಮಾಡಿದರು. ಅವರೊಂದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಪಸ್ಥಿತರಿದ್ದರು.
ಗೆದ್ದು ಬಂದ ವೀರ ವನಿತೆಯರು!
ಏಶ್ಯಾ ಕಪ್ ಅನ್ನು ಗೆದ್ದ ಭಾರತೀಯ ಮಹಿಳಾ ಹಾಕಿ ತಂಡದ ವನಿತೆಯರು ಗೆದ್ದು ಬಂದ ಟ್ರೋಪಿಯೊಂದಿಗೆ ಬೀಗಿದ್ದು ಹೀಗೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಭಿಮಾನಿಗಳು ಹೆಮ್ಮೆಯಿಂದ ಸ್ವಾಗತಿಸಿದರು.