ರಫೇಲ್ ಡೀಲ್ ತೀರ್ಪು ವಿಮರ್ಶೆ : ಭೂಷಣ್ ಮಂಡಿಸಿರುವ ವಾದವೇನು?
ನವದೆಹಲಿ, ಏಪ್ರಿಲ್ 10 : ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲು ಕೇವಲ ಒಂದೇ ದಿನ ಇರುವಾಗ, ರಫೇಲ್ ಡೀಲ್ ಹಗರಣದ ಪುನರ್ ವಿಮರ್ಶೆ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
2018ರ ಡಿಸೆಂಬರ್ 14ರಂದು ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿ ಹೊರಡಿಸಲಾಗಿದ್ದ ತೀರ್ಪನ್ನು ಅಮೂಲಾಗ್ರವಾಗಿ ಪುನರ್ ವಿಮರ್ಶೆ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ರಫೇಲ್ ಡೀಲ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.
ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ
ರಕ್ಷಣಾ ಸಚಿವಾಲಯದಿಂದ ಕಳುವಾಗಿವೆ ಅಥವಾ ಕಾಪಿ ಮಾಡಿಕೊಳ್ಳಲಾಗಿದೆ ಎನ್ನಲಾಗಿರುವ ದಾಖಲೆಗಳನ್ನು ಪರಿಗಣಿಸಬಾರದು ಎಂಬ ಕೇಂದ್ರದ ಆಕ್ಷೇಪಣೆಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದ್ದ ನ್ಯಾಯಪೀಠ ತಿರಸ್ಕರಿಸಿದೆ. ವಿಭಾಗೀಯ ಪೀಠದಲ್ಲಿ ನ್ಯಾ.ಕೆಎಸ್ ಕೌಲ್, ನ್ಯಾ. ಕೆ.ಎಂ. ಜೋಸೆಫ್ ಕೂಡ ಇದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಿ ಹಿಂದೂ ಮತ್ತು ದಿ ಕಾರವಾನ್ ಮ್ಯಾಗಜಿನ್ ಪ್ರಕಟಿಸಿರುವ ವರದಿಗಳ ಆಧಾರದ ಮೇಲೆ ಈ ಪ್ರಕರಣವನ್ನು ಮರು ಪರಿಶೀಲಿಸಬೇಕೆಂದು ಅರ್ಜಿದಾರರಾಗಿರುವ ಪ್ರಶಾಂತ್ ಭೂಷಣ್, ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರು ಆಗ್ರಹಿಸಿದ್ದಾರೆ. ರಿವ್ಯೂ ಅರ್ಜಿಯನ್ನು ಮೆರಿಟ್ ಆಧಾರದ ಮೇಲೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ದಾಖಲೆಗಳನ್ನು ಎಲ್ಲಿಯೂ ಪ್ರಕಟಿಸುವಂತಿಲ್ಲ
ಕಳುವಾಗಿವೆ ಎನ್ನಲಾದ ದಾಖಲೆಗಳನ್ನು, ಇಂಡಿಯನ್ ಎವಿಡೆನ್ಸ್ ಆಕ್ಟ್ ಪ್ರಕಾರ, ಅವನ್ನು ಎಲ್ಲಿಯೂ ಪ್ರಕಟಿಸುವಂತಿಲ್ಲ ಎಂದು ಅಟಾರ್ನಿ ಜನರಲ್ ಆಕ್ಷೇಪಿಸಿದ್ದರು. ರಫೇಲ್ ಡೀಲ್ ಗೆ ಸಂಬಂಧಿಸಿದಂತೆ, ಕೇಂದ್ರದಿಂದ ಭ್ರಷ್ಟಾಚಾರ ಸಾಬೀತುಪಡಿಸುವಂಥ, ಕೆಲ ಪ್ರಮುಖ ದಾಖಲೆಗಳು ತನ್ನ ಬಳಿ ಇವೆ ಎಂದು ದಿ ಹಿಂದೂ ಲೇಖನ ಪ್ರಕಟಿಸಿತ್ತು. ಇದನ್ನು ವಿರೋಧಿಸಿರುವ ಪ್ರಶಾಂತ್ ಭೂಷಣ್ ಅವರು, ಈ ದಾಖಲೆಗಳು ಈಗಾಗಲೆ ಪಬ್ಲಿಕ್ ಡೊಮೇನ್ ನಲ್ಲಿ ಇರುವುದರಿಂದ ಎವಿಡೆನ್ಸ್ ಆಕ್ಟ್ ಅಡಿಯಲ್ಲಿ ರಕ್ಷಣಾ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಭೂಷಣ್, ಶೌರಿ ಮತ್ತು ಸಿನ್ಹಾ ಅರ್ಜಿ
2018ರ ಡಿಸೆಂಬರ್ 14ರಂದು ನೀಡಲಾಗಿದ್ದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಮಾಜಿ ಕೇಂದ್ರ ಸಚಿವರುಗಳಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರು ಅರ್ಜಿ ಸಲ್ಲಿಸಿದ್ದಾರೆ. ಆ ತೀರ್ಪಿಗೆ ತಿದ್ದುಪಡಿ ಮಾಡಬೇಕೆಂದು ಕೇಂದ್ರ ಸರಕಾರ ಸಲ್ಲಿಸಿರುವ ಅರ್ಜಿ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಯೊಂದಿಗೆ, ಮರು ಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದೆ.
ರಫೇಲ್ ಡೀಲ್ ಪುಸ್ತಕವನ್ನು ಮುಟ್ಟುಗೋಲು ಹಾಕಿದ್ದು ಯಾರು?
ಪ್ರಶಾಂತ್ ಭೂಷಣ್ ಪ್ರಖರ ವಾದ
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ದಾಖಲೆಯ ಮೂಲವನ್ನು ಸಂರಕ್ಷಿಸುವ ಹಕ್ಕನ್ನು ಮಾಧ್ಯಮಕ್ಕೆ ನೀಡಲಾಗಿದೆ. 2ಜಿ ಮತ್ತು ಕಲ್ಲಿದ್ದಲು ಹಗರಣದಲ್ಲಿ ಕೂಡ ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ಕಚೇರಿಯಲ್ಲಿದ್ದ ಸಂದರ್ಶಕರ ನೋಂದಣಿ ಪುಸ್ತಕವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿತ್ತು. ಆ ದಾಖಲೆಗಳನ್ನು ಹೇಗೆ ಪಡೆಯಲಾಗಿತ್ತು ಎಂಬುದನ್ನು ಪರಿಗಣಿಸಿರಲಿಲ್ಲ ಎಂದು ಕೇಂದ್ರದ ವಿರುದ್ಧ ತಿರುಗಿಬಿದ್ದಿರುವ ವಕೀಲ ಪ್ರಶಾಂತ್ ಭೂಷಣ್ ಅವರು ವಾದ ಮಂಡಿಸಿದ್ದಾರೆ.
ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಶೌರಿ, ಭೂಷಣ್ ಸಿಬಿಐ ಭೇಟಿ!
ಮೂಲ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದ್ದೇನು?
ಭಾರತದ ವಾಯು ಸೇನೆಗೆ ಗುಣಮಟ್ಟದ ಅಗತ್ಯವಾಗಿ ಬೇಕಾಗಿರುವುದು ನಿರ್ವಿವಾದಿತವಾಗಿದ್ದರಿಂದ ಅವುಗಳ ಬೆಲೆ ನಿಗದಿಯ ಬಗ್ಗೆ ತಾನು ಮೂಗು ತೂರಿಸುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಅಲ್ಲದೆ, ರಫೇಲ್ ಜೆಟ್ ವಿಮಾನ ತಯಾರಕ ಕಂಪನಿ ಡಸ್ಸಾಲ್ಟ್ ನಿಂದ ಆಫ್ ಸೆಟ್ ಪಾರ್ಟನರ್ ಆಯ್ಕೆಯಲ್ಲಿ ಯಾವುದೇ ತಪ್ಪು ಎಸಗಲಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು. ಅರ್ಜಿದಾರರು ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?
ಅಂಬಾನಿ ಮಾಲಿಕತ್ವದ ರಿಲಯನ್ಸ್ ಡಿಫೆನ್ಸ್
ಆಫ್ ಸೆಟ್ ಪಾರ್ಟನರ್ ಆಯ್ಕೆ ವಿಮಾನ ತಯಾರಕ ಕಂಪನಿಯದಾದ್ದರಿಂದ ಇದರಲ್ಲಿ ಕೇಂದ್ರ ಸರಕಾರದ ಕೈವಾಡ ಏನೂ ಇರುವುದಿಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬುದರ ಪರಾಮರ್ಶೆ ಮಾಡುವ ಜವಾಬ್ದಾರಿ ನ್ಯಾಯಾಲಯದ್ದಲ್ಲ. ಯಾವುದೋ ಮಾಧ್ಯಮದಲ್ಲಿ ಪ್ರಕಟವಾದ ಸಂದರ್ಶದ ಆಧಾರದ ಮೇಲೆ ಸರಿ ತಪ್ಪಿನ ಪರಾಮರ್ಶೆ ಮಾಡುವುದು ಸಾಧ್ಯವಲ್ಲ. ಕೋರ್ಟ್ ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತ್ತು. ಅನಿಲ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಫ್ ಸೆಟ್ ಪಾರ್ಟನರ್ ಅನ್ನಾಗಿ ತೆಗೆದುಕೊಳ್ಳಬೇಕೆಂದು ಕೇಂದ್ರ ಸರಕಾರವೇ ಶಿಫಾರಸು ಮಾಡಿತ್ತು ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲ್ಲಾಂಡೆ ಹೇಳಿದ್ದನ್ನು ಕೋರ್ಟ್ ಪರಿಗಣಿಸಿರಲಿಲ್ಲ.