'ರಫೇಲ್ ಸತ್ಯ ಪರಿಕರ್ ಗೆ ಗೊತ್ತಿದೆ, ಅದಕ್ಕೆ ಅವರ ಬಗ್ಗೆ ಮೋದಿಗೆ ಹೆದರಿಕೆ'
ನವದೆಹಲಿ, ಜನವರಿ 30: ರಫೇಲ್ ಬಗ್ಗೆ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕರ್ ಗೆ ಸತ್ಯ ಗೊತ್ತಿದೆ. ಆದ್ದರಿಂದಲೇ ಪರಿಕರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಭಯ ಎಂದು ಮತ್ತೊಮ್ಮೆ ಬುಧವಾರ ವಾಗ್ದಾಳಿ ನಡೆಸಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
ನರೇಂದ್ರ ಮೋದಿಗೆ ಮನೋಹರ್ ಪರಿಕರ್ ಅಂದರೆ ಭಯ. ಪರಿಕರ್ ವಿರುದ್ಧವಾಗಿ ಮೋದಿ ಏನನ್ನೂ ಹೇಳಲು ಸಾಧ್ಯವಿಲ್ಲ ಮತ್ತು ಅದಕ್ಕೆ ಕಾರಣ ರಫೇಲ್ ಕಡತಗಳು ಎಂದು ನವದೆಹಲಿಯಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ರಫೇಲ್ ಬಗ್ಗೆ ರಾಹುಲ್ ಸುಳ್ಳು ಹೇಳಿದರೆ? ಪರಿಕ್ಕರ್ ಪತ್ರದಲ್ಲಿರುವುದೇನು?
ಪ್ರಧಾನಿ ಹಾಗೂ ರಕ್ಷಣಾ ಸಚಿವೆಯನ್ನು ರಫೇಲ್ ಗೆ ಸಂಬಂಧಿಸಿದಂತೆ ನಾವು ಮೂರ್ನಾಲ್ಕು ಪ್ರಶ್ನೆಗಳನ್ನು ಕೇಳಿದೆವು. ಮೋದಿ ಅದಕ್ಕೆ ಉತ್ತರಿಸಲಿಲ್ಲ. ಅವರು ಅಲ್ಲಿ-ಇಲ್ಲಿ ನೋಡಿದರು, ಆದರೆ ನಮ್ಮ ಕಣ್ಣಲ್ಲಿ ನೋಡಲಿಲ್ಲ ಎಂದು ರಾಹುಲ್ ಆರೋಪ ಮಾಡಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕರ್, ಸ್ವತಃ ತಮ್ಮ ರಾಜ್ಯ್ ಸಂಪುಟ ಸಭೆಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ತನ್ನ ಬಳಿ ರಫೇಲ್ ಗೆ ಸಂಬಂಧಿಸಿದ ಕಡತಗಳು ಇವೆ. ನನ್ನನ್ನು ಗೋವಾ ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತೊಗೆಯಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ರಫೇಲ್ ಬಗ್ಗೆ ರಾಹುಲ್ ಹೇಳಿದ ಸುಳ್ಳು? ಪರಿಕ್ಕರ್ ಪತ್ರದಲ್ಲಿರುವುದೇನು?
ನನ್ನ ಭೇಟಿಯನ್ನು ಚಿಲ್ಲರೆ ರಾಜಕಾರಣದ ಲಾಭಕ್ಕೆ ರಾಹುಲ್ ಬಳಸುತ್ತಿದ್ದಾರೆ ಎಂದು ಮನೋಹರ್ ಪರಿಕರ್ ಹೇಳಿದ ದಿನವೇ ರಾಹುಲ್ ಗಾಂಧಿ ಪ್ರತಿಕ್ರಿಯೆ ಬಂದಿದೆ. ಅಂದ ಹಾಗೆ ರಾಹುಲ್ ಗಾಂಧಿ ಮಂಗಳವಾರ ಮಾತನಾಡಿ, ರಫೇಲ್ ನ ಹೊಸ ಒಪ್ಪಂದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಮನೋಹರ್ ಪರಿಕರ್ ತಿಳಿಸಿದ್ದಾಗಿ ಹೇಳಿದ್ದರು.