ಜೋಕೆ, ಒಂದು whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು!
Recommended Video
ನವದೆಹಲಿ, ನವೆಂಬರ್ 20: ಉದ್ವೇಗದಲ್ಲಿ whatsapp ನಲ್ಲಿ ಮಾಡಿದ ಒಂದು ಮೆಸೇಜ್ ಗೆ ನಿಮ್ಮನ್ನು ಜೈಲಿಗೂ ತಳ್ಳುವಷ್ಟು ತಾಕತ್ತಿದೆ! ತಮಾಷೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು 'ಸೆನ್ಸಾರ್' ಇಲ್ಲದೆ ಹಂಚಿಕೊಂಡ ಹಲವರು ಈಗಾಗಲೇ ಕಂಬಿ ಎಣಿಸಿಬಂದಿದ್ದಾರೆ, ಎಣಿಸುತ್ತಿದ್ದಾರೆ ಕೂಡ. ಯಾವುದೇ ವಿವಾದಾತ್ಮಕ ವಿಷಯಗಳ ಕುರಿತು ಸಂದೇಶ ಕಳಿಸುವ ಮುನ್ನ ಹತ್ತುಬಾರಿ ಯೋಚಿಸಬೇಕಾದ ಅಗತ್ಯವಿದೆ ಎಂಬುದಂತೂ ಸತ್ಯ!
ಜೈಲು ಸೇರುವಂತೆ ಮಾಡಿದ ವಾಟ್ಸ್ ಆಪ್ ಪ್ರೊಫೈಲ್ ಚಿತ್ರ
ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಕಾಲ. ಬೆಳಗ್ಗೆ ಕಣ್ಣು ಬಿಡುತ್ತಿದ್ದ ಹಾಗೇ ವಾಟ್ಸ್ ಆಪ್, ಫೇಸ್ ಬುಕ್ ದರ್ಶನವಾಗಲೇಬೇಕು. ಒಂದು ನಿಮಿಷ ಇಂಟರ್ನೆಟ್ ಕೈಕೊಟ್ಟರೆ ಏನೋ ತಳಮಳ!
ಮೋದಿ ಬಗ್ಗೆ ಅವಹೇಳನ, ವಾಟ್ಸಪ್ ಗ್ರೂಪ್ ಅಡ್ಮಿನ್ ಅಂದರ್
ಹಲವು ಸಂದರ್ಭಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿರುವ, ಸೆಲೆಬ್ರಿಟಿಗಳೂ ಶ್ರೀಸಾಮಾನ್ಯರ ಕೈಗೆಟುಕುವಂತೆ ಮಾಡುವ ಕೊಂಡಿಯಾಗಿರುವ ಸಾಮಾಜಿಕ ಮಾಧ್ಯಮಗಳು ಹಲವು ಬಾರಿ ಸೆನ್ಸೇಶನ್ ಸೃಷ್ಟಿಸುವಲ್ಲಿಯೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕೇ ಹಲವು ಅಹಿತಕರ ಘಟನೆಗಳೂ ನಡೆದಿವೆ.
ಗಂಗಾ ನದಿಯನ್ನು ಟೀಕಿಸಿದ್ದಕ್ಕೆ ಕಂಬಿ ಭಾಗ್ಯ!
ಫೇಸ್ ಬುಕ್ ನಲ್ಲಿ ಗಂಗಾ ನದಿ ಮತ್ತು ಬಿಜೆಪಿಯ ರಾಮ ಮಂದಿರ ನಿರ್ಮಾಣದ ಯೋಜನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ 18 ವರ್ಷದ ಜಾಕಿರ್ ಅಲಿ ತ್ಯಾಗಿ ಎಂಬುವವರನ್ನೂ ಬಂಧಿಸಲಾಗಿತ್ತು. 42 ದಿನಗಳ ಕಾಲ ಇವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸ್ಟೀಲ್ ಪ್ಲಾಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆತ ಜೈಲಿಗೆ ತೆರಳಿದ ನಂತರ ತನ್ನ ಕೆಲಸವನ್ನೂ ಕಳೆದುಕೊಂಡಿದ್ದ!
ಪ್ರಧಾನಿಯ ಟೀಕಿಸಿ ಜೈಲಿಗೆ ಹೋದ ಮೀರತ್ ಪತ್ರಕರ್ತ
ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ಮೀರತ್ ನ ಅಫ್ಘನ್ ಸೋನಿ ಎಂಬ ಪತ್ರಕರ್ತರೊಬ್ಬರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಮೋದಿಯವರ ಕುರಿತು ವಿವಾದಾತ್ಮಕ ವಿಡಿಯೋವೊಂದನ್ನು ಅವರು ಪೋಸ್ಟ್ ಮಾಡಿದ್ದೇ ಅವರ ಬಂಧನಕ್ಕೆ ಕಾರಣ.
ಠಾಕ್ರೆಯವರನ್ನು ಟೀಕಿಸಿದ್ದ ಮಹಿಳೆಯರ ಬಂಧನ
ಶಿವ ಸೇನಾ ಮುಖ್ಯಸ್ಥರಾಗಿದ್ದ ಬಾಳ್ ಠಾಕ್ರೆ ನಿಧನರಾದ ಸಂದರ್ಭದಲ್ಲಿ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಮಹಿಳೆ ಮತ್ತು ಆ ಸ್ಟೇಟಸ್ ಅನ್ನು ಲೈಕ್ ಮಾದಿದ್ದ ಮಹಿಳೆ ಇಬ್ಬರನ್ನೂ ಬಂಧಿಸಲಾಗಿತ್ತು. ಅಭಿವ್ಯಕ್ತಿಸ್ವಾತಂತ್ರ್ಯ ನಾಶವಾಗುತ್ತಿದದೆ ಎಂದು ಆ ಸಂದರ್ಭದಲ್ಲೂ ದನಿಯೆದ್ದಿತ್ತು.
ಅಭಿಪ್ರಾಯ ಮಂಡಿಸುವಾಗ ಎಲ್ಲೆಮೀರದಿರಿ!
ಜಾತಿ, ಮತ ಇಂಥ ಸೂಕ್ಷ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕಾದ್ದು ಮುಖ್ಯ. ಸಮಾಜದ ಸ್ವಾಸ್ಥ್ಯ ಕದಡುವಂಥ ಸನ್ನಿವೇಶಗಳು, ಕೋಮು ಸೌಹಾರ್ದಕ್ಕೆ ದಕ್ಕೆ ತರುವಂಥ ಅಥವಾ ಸಾಮಾಜಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿಯ ತೇಜೋವಧೆ ಮಾಡಿದರೆ ಅಂಥವರನ್ನು ಜೈಲಿಗೆ ತಳ್ಳಬಹುದಾಗಿದೆ. ಮಾಹಿತಿ-ತಂತ್ರಜ್ಞಾನ 66 A ಕಾಯ್ದೆಯಡಿಯಲ್ಲಿಇದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಏನಿದೆ ಐಟಿ ಕಾಯ್ದೆ 66 A ಯಲ್ಲಿ?
ಕಂಪ್ಯೂಟರ್ ಅಥವಾ ತಂತ್ರಜ್ಞಾನದ ಮೂಲಕ ಕಳಿಸುವ ಯಾವುದೇ ಸಂದೇಶ ಯಾರದೇ ತೇಜೋವಧೆ ಮಾಡಿದಲ್ಲಿ, ಹಿಂಸೆಗೆ ಪ್ರಚೋದನೆ ನೀಡಿದಲ್ಲಿ, ವ್ಯಕ್ತಿಯನ್ನು ಹಾದಿತಪ್ಪಿಸಿದಲ್ಲಿ ಅಂಥ ನಡೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಸಂದೇಶ, ಚಿತ್ರ, ಆಡಿಯೋ, ವಿಡಿಯೋ ಅಥವಾ ಇನ್ಯಾವುದೇ ರೀತಿಯಲ್ಲಿ ತಂತ್ರಜ್ಞಾನ ಬಳಸಿ ಕಳಿಸಿದ ವಿವಾದಾತ್ಮಕ ಸಂದೇಶಗಳನ್ನು ಕಳಿಸುವುದು ಶಿಕ್ಷಾರ್ಹ ಅಪರಾಧವೆನ್ನಿಸಿದೆ.