ತಬ್ಲಿಘಿ ಜಮಾತ್ ಸಂಪೂರ್ಣ ನಿಷೇಧಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ
ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗಿ ಹರಡಲು ತಬ್ಲಿಘಿ ಜಮಾತ್ ಕಾರಣವಾಗಿದೆ. ಜಮಾತ್ ಹಾಗೂ ಮರ್ಕಾಜ್ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ದೆಹಲಿಯ ನಿಜಾಮುದ್ದೀನ್ ನಲ್ಲಿರುವ ತಬ್ಲಿಘಿ ಜಮಾತ್ ನ ಮರ್ಕಾಜ್(ಪ್ರಮುಖ ಕೇಂದ್ರ) ಈಗ ಕೊರೊನಾವೈರಸ್ ಹಬ್ಬಿಸಿದ ಹಾಟ್ ಸ್ಪಾಟ್ ಎನಿಸಿಕೊಂಡಿದೆ. ಇಲ್ಲಿ ಮಾರ್ಚ್ ಎರಡನೇ ವಾರ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಕೊವಿಡ್19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ದೆಹಲಿಯಲ್ಲದೆ, ದೇಶದೆಲ್ಲೆಡೆ ವೈರಸ್ ಹರಡಲು ಈ ಕಾರ್ಯಕ್ರಮ ಕಾರಣವಾಗಿದೆ.
ಪರಾರಿಯಾಗಲು ಯತ್ನಿಸಿದ 8 ತಬ್ಲೀಗ್ ಜಮಾತ್ ಸದಸ್ಯರ ಬಂಧನ
ದೇಶದಲ್ಲಿ ಕೊರೊನಾವೈರಸ್ ಕುರಿತ ಆತಂಕ ಹೆಚ್ಚಾಗಲು ಈ ಸಂಘಟನೆ ಹಾಗೂ ದೆಹಲಿಯ ಕೇಂದ್ರ ಕಾರಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.
ತಬ್ಲಿಘಿ ಜಮಾತ್ ಬ್ಯಾಂಕ್ ಖಾತೆ ವ್ಯವಹಾರವನ್ನು ಸ್ಥಗಿತಗೊಳಿಸಬೇಕು. ಭಯೋತ್ಪಾದಕರಿಗೆ ನರ್ಸರಿ ಶಾಲೆಯಂತೆ ಮರ್ಕಾಜ್ ಬಳಸಲಾಗುತ್ತಿದೆ ಎಂದು ಜೈನ್ ಆರೋಪಿಸಿದ್ದಾರೆ.
ತಬ್ಲಿಘಿ ಜಮಾತ್ ಅಂದರೆ ಏನು? ಅದರ ಸುತ್ತ ಮುತ್ತ
ಮರ್ಕಾಜ್ ಹೋಗಿ ಬಂದವರ ಪೈಕಿ 1023 ಮಂದಿಗೆ ಕೊವಿಡ್19 ಪಾಸಿಟಿವ್ ಎಂದು ಪರೀಕ್ಷಾ ವರದಿ ಬಂದಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಬಂದು ಸೋಂಕು ತಗುಲಿದವರ ಸಂಖ್ಯೆ ತಮಿಳುನಾಡು ಹಾಗೂ ದೆಹಲಿ ನಿವಾಸಿಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ.