Just in: ಅತ್ಯಾಚಾರ ಆರೋಪಿಗೆ ಜಾಮೀನು, ಹೈಕೋರ್ಟ್ ಮೊರೆ ಹೋದ ಸಂತ್ರಸ್ತೆ
ನವದೆಹಲಿ, ಜುಲೈ 21: ರಾಜಸ್ಥಾನದ ಸಚಿವರೊಬ್ಬರ ಪುತ್ರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಗುರುವಾರ ದೆಹಲಿ ಹೈಕೋರ್ಟ್ನ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರ ಪೀಠವು ರಾಜ್ಯಗಳು (ಎನ್ಸಿಟಿ ದೆಹಲಿ) ಮತ್ತು ಆರೋಪಿ ರೋಹಿತ್ ಜೋಷಿಗೆ ನೋಟಿಸ್ ಜಾರಿ ಮಾಡಿದೆ. ರೋಹಿತ್ ಜೋಷಿಯಿಂದ ಪ್ರತಿಕ್ರಿಯೆ ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 23 ರಂದು ನಡೆಯಲಿದೆ.
ಪತಿ ಅತ್ಯಾಚಾರವೆಸಗಿದರೂ ವಿನಾಯ್ತಿಲ್ಲ: ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಈ ಪ್ರಕರಣದಲ್ಲಿ ರಾಜ್ಯದ ಪರ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ವಕೀಲ ಅಮಿತ್ ಸಾಹ್ನಿ ವಾದ ಮಂಡಿಸಿದ್ದರು. ಸಂತ್ರಸ್ತ ಮಹಿಳಾ ಅರ್ಜಿದಾರರ ಪರ ವಕೀಲರಾದ ಮೋನಿಶ್ ಪಾಂಡಾ ಮತ್ತು ಅಭಿಷೇಕ್ ಪತಿ ಅರ್ಜಿ ಸಲ್ಲಿಸಿದ್ದಾರೆ.
ರಾಜಸ್ಥಾನ ಸಚಿವರೊಬ್ಬರ ಪುತ್ರ ಆರೋಪಿ ರೋಹಿತ್ ಜೋಷಿಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ ಆದೇಶವು ಅಸ್ತುನಿಷ್ಠ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ವಿಚಾರಣೆಯ ನ್ಯಾಯಾಲಯವು ಆರೋಪದ ಸ್ವರೂಪ ಮತ್ತು ಘಟನೆಯ ಸಂದರ್ಭದ ತೀವ್ರತೆ, ಜಾಮೀನಿನ ಮೇಲೆ ಬಿಡುಗಡೆಯಾದರೆ ಆರೋಪಿ ಕಾಣೆಯಾಗುವ, ಅಪರಾಧ ಪುನರಾವರ್ತನೆಯಾಗುವ ಸಾಧ್ಯತೆ, ಸಾಕ್ಷಿಗಳು ಪ್ರಭಾವಕ್ಕೊಳಗಾಗುವ ಅಪಾಯವನ್ನು ಪರಿಗಣಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅತ್ಯಾಚಾರ ಆರೋಪಿಯು ರಾಜಸ್ಥಾನ ವಿಧಾನಸಭೆಯ ಹಾಲಿ ಸಚಿವರೊಬ್ಬರ ಪುತ್ರನಾಗಿದ್ದು, ತನಿಖಾ ಪ್ರಕ್ರಿಯೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಮತ್ತು ಅರ್ಜಿದಾರರು/ಸಾಕ್ಷಿಗಳಿಗೆ ಬಲವಂತಪಡಿಸುವ ಮತ್ತು ಬೆದರಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಆದರೆ, ಆರೋಪಿಗಳಿಗೆ ಜಾಮೀನು ನೀಡುವಾಗ ಈ ಎಲ್ಲ ಅಂಶಗಳನ್ನೂ ಕಡೆಗಣಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ನಿರೀಕ್ಷಣಾ ಜಾಮೀನು ಪಡೆದ ನಂತರ ಆರೋಪಿಯು ತಾನು ನೀಡಿದ 07.05.2022 ರ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರುವ ಸಲುವಾಗಿ ತನ್ನನ್ನು ಬೆದರಿಸಲು ನಿರಂತರ ಪ್ರಯತ್ನಗಳನ್ನು ಮಾಡಿದ್ದಾನೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದಲ್ಲದೆ, ಜೂನ್ 11 ರಂದು, ಆರೋಪಿ ಸಂತ್ರಸ್ತೆಯ ಮುಖದ ಮೇಲೆ ರಾಸಾಯನಿಕಗಳನ್ನು ಎಸೆದು, ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಹಾಕಲು ಗೂಂಡಾಗಳನ್ನು ಕಳುಹಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿದಾರರ ಪ್ರಕಾರ, ಕಳೆದ ವರ್ಷ ಆಕೆ ಆರೋಪಿ ಮತ್ತು ಆತನ ಸ್ನೇಹಿತರೊಂದಿಗೆ ಸವಾಯಿ ಮಾಧೋಪುರಕ್ಕೆ ಹೋಗಿದ್ದರು. ಈ ವೇಳೆ ಆರೋಪಿಯು ನಿದ್ದೆ ಮಾತ್ರೆಗಳನ್ನು ಜ್ಯೂಸಿನಲ್ಲಿ ಬೆರೆಸಿ ಆಕೆಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ. ನಗ್ನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿಕೊಂಡು ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾನೆ. ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಮದುವೆಯಾಗಲು ಬಯಸುತ್ತೇನೆ ಎಂದು ಆಕೆಗೆ ಭರವಸೆ ನೀಡಿದ್ದರು ಎಂದು ಮಹಿಳೆ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.