ಡಿ.ಕೆ.ಶಿವಕುಮಾರ್ಗೆ ಮತ್ತೆ ನಿರಾಸೆ: ಅ.25 ರವರೆಗೆ ಜೈಲು ವಾಸ ಮುಂದುವರಿಕೆ
Recommended Video
ನವದೆಹಲಿ, ಅಕ್ಟೋಬರ್ 15: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ನಿರಾಸೆ ಆಗಿದೆ. ಡಿಕೆಶಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಲಾಗಿದೆ.
ನ್ಯಾಯಾಂಗ ಬಂಧನ ಅವಧಿ ಮುಗಿದಿದ್ದ ಕಾರಣ ಇಂದು ನ್ಯಾಯಾಲಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಹಾಜರುಪಡಿಸಲಾಗಿತ್ತು. ಇಂದು ಆದೇಶ ಹೊರಡಿಸಿದ ದೆಹಲಿಯ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.
ಅಕ್ಟೋಬರ್ 25 ರ ವರೆಗೂ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿನಲ್ಲಿಯೇ ಕಳೆಯಬೇಕಿದೆ. ಸತತ ಮೂರನೇ ಬಾರಿ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಆಗುತ್ತಿದೆ. ಬಂಧನ ಅವಧಿ ವಿಸ್ತರಣೆಗೆ ಆಕ್ಷೇಪ ಎತ್ತಲಾಯಿತಾದರೂ ನ್ಯಾಯಾಧೀಶರು ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಬೇಕೆಂದು ದೆಹಲಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಇಂದಿಗೆ ವಿಚಾರಣೆ ಮುಂದೂಡಲಾಗಿತ್ತು. ವಿಚಾರಣೆಯು ಇಂದು ಮಧ್ಯಾಹ್ನ 3 ಗಂಟೆ ನಂತರ ಪ್ರಾರಂಭವಾಗಲಿದೆ.
ನ್ಯಾಯಾಧೀಶರ ಮುಂದೆ ದೂರು ಸಲ್ಲಿಸಿದ ಡಿ.ಕೆ.ಶಿವಕುಮಾರ್, 'ಜೈಲಿನಲ್ಲಿ ತಾರತಮ್ಯ ಎದುರಿಸುತ್ತಿದ್ದು, ಬೇರೆಲ್ಲರಿಗೂ ಕುಳಿತುಕೊಳ್ಳಲು ಚೇರ್ ನೀಡಲಾಗಿದೆ. ಆದರೆ ತಮಗೆ ನೀಡಲಾಗಿಲ್ಲ. 'ನನಗೆ ಬೆನ್ನು ಮತ್ತು ಸೊಂಟ ನೋವಿದ್ದು, ಕುಳಿತುಕೊಳ್ಳಲು ಚೇರ್ ನೀಡಬೇಕು' ಎಂದು ಡಿ.ಕೆ.ಶಿವಕುಮಾರ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು.